ಕಾರ್ಕಳ: ಉಡುಪಿ ಜಿಲ್ಲಾ ಸಿಜಿಕೆ ಪ್ರಶಸ್ತಿ ಪ್ರಧಾನ ಸಮಾರಂಭ: ಕಲಾವಿದ ಚಂದ್ರನಾಥ ಬಜಗೋಳಿ ಅವರಿಗೆ ಪ್ರಶಸ್ತಿ ಪ್ರಧಾನ

ಕಾರ್ಕಳ: ಪ್ರಶಸ್ತಿ, ಪುಸ್ಕಾರಗಳು ಕಲಾವಿದರಲ್ಲಿ ಮತ್ತಷ್ಟು ಹೆಚ್ಚಿನ ಕಲಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದಕ್ಕೆ ಚೈತನ್ಯ ಮೂಡಿಸುತ್ತದೆ ಎಂದು ಶಾಸಕ ಹಾಗೂ ಸರಕಾರದ ಮುಖ್ಯ ಸಚೇತಕ ವಿ.ಸುನೀಲ್‌ಕಮಾರ್ ಹೇಳಿದರು.

ಪೆರ್ವಾಜೆ ಸಾಯಿ ಮಂದಿರದಲ್ಲಿ ಉಡುಪಿ ಜಿಲ್ಲಾ ಸಿಜಿಕೆ-೨೦೨೦ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಪ್ರಶಸ್ತಿ ಪ್ರದಾನ ಮಾಡಿ ಮಾತನಾಡುತ್ತಾ, ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿಭೆಗಳನ್ನು ಇನ್ನಷ್ಟು ಗಟ್ಟಿಗೊಳ್ಳಿಸುವ ಸತ್ಕಾರ್ಯವು ಸಂಘ-ಸಂಸ್ಥೆಗಳ ಮೂಲಕ ನಡೆಯಬೇಕಾಗಿದೆ. ಕಲಾವಿದ ಚಂದ್ರನಾಥ ಬಜಗೋಳಿ ಅವರು ಕಲಾಕ್ಷೇತ್ರದ ನೀಡಿರುವ ಕೊಡುಗೆ ಅಪಾರವಾಗಿದೆ ಎಂದರು.

ಸಿಜಿಕೆ೨೦೨೦ ಪ್ರಶಸ್ತಿ ಸ್ವೀಕರಿಸಿದ ರಂಗ ನಿರ್ದೇಶಕ ಚಂದ್ರನಾಥ ಬಜಗೋಳಿ ಮಾತನಾಡಿ, ಪ್ರಶಸ್ತಿಯು ತರಭೇತುದಾರರಿಗೆ ಹಾಗೂ ಅಭಿಮಾನಿಗಳಿಗೆ ಅರ್ಪಣೆಯಾಗಿದೆ. ಯಾವುದೇ ನಿರಾಪೇಕ್ಷೆ ಇಟ್ಟುಕೊಂಡು ಯಾವುದೇ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಬಾರದು. ನಿರೀಕ್ಷೆಯ ನೆರಳು ದುಃಖವಾಗಿರುತ್ತದೆ ಎಂದರು.

ಶ್ರೀ ಕ್ಷೇತ್ರ ಮುದ್ರಾಡಿ ಧರ್ಮ ಯೋಗಿ ಮೋಹನ್ ಪಾತ್ರಿ ಸಭಾ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿಗಳಾದ ಡಿ.ಆರ್.ರಾಜು, ವಿಜಯಶೆಟ್ಟಿ, ಶ್ರೀ ಸಾಯಿ ಮಂದಿರದ ಆಡಳಿತ ಮೊಕ್ತೇಸರ ಚಂದ್ರಹಾಸ ಸುವರ್ಣ ಉಪಸ್ಥಿತರಿದ್ದರು. ನಮ್ಮ ತುಳುವೆರ್ ಕಲಾ ಸಂಘಟನೆಯ ಅಧ್ಯಕ್ಷ ಸುಕುಮಾರ್ ಮೋಹನ್ ಸ್ವಾಗತಿಸಿ, ಧನ್ಯವಾದವಿತ್ತರು. ರಿತಿಕಾ ಸಾಲಿಯಾನ್ ನಿರ್ವಹಿಸಿದರು.