ಕನ್ನರ್ಪಾಡಿ: ದ್ವಿತೀಯ ವರ್ಷದ ಶಾರದಾ ಮಹೋತ್ಸವ ಆಚರಣೆ

ಉಡುಪಿ: ಉಡುಪಿ ಕಿನ್ನಿಮೂಲ್ಕಿ ಕನ್ನರ್ಪಾಡಿಯ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿಯ ಆಶ್ರಯದಲ್ಲಿ ದ್ವಿತೀಯ ವರ್ಷದ ಶಾರದಾ ಮಹೋತ್ಸವ ಆಚರಣೆಯು ಅ. 5ರಿಂದ 8ರ‌ ವರೆಗೆ ನಾಲ್ಕು ದಿನಗಳ ಕಾಲ ಕಿನ್ನಿಮೂಲ್ಕಿ ಸ್ವಾಗತ ಗೋಪುರದ ಬಳಿಯ ಮೈದಾನದಲ್ಲಿ ವಿಜೃಂಭಣೆಯಿಂದ ನಡೆಯಲಿದೆ ಎಂದು ಶ್ರೀ ಶಾರದೋತ್ಸವ ಸಮಿತಿಯ ಅಧ್ಯಕ್ಷರಾದ ಜಯಪ್ರಕಾಶ್ ಕೆದ್ಲಾಯ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅ.5ರಂದು ಬೆಳಿಗ್ಗೆ 7.30ಕ್ಕೆ ಶಾರದಾ ದೇವಿಯ ವಿಗ್ರಹ ಪ್ರತಿಷ್ಠಾಪನೆ, ಗಣ ಹೋಮ ನಡೆಯಲಿದ್ದು 8 ಗಂಟೆಗೆ ಚಂಡಿಕಾ ಯಾಗ,  ತದನಂತರ ವಿವಿಧ ಧಾರ್ಮಿಕ ಸಂಘಟನೆಗಳಿಂದ ಲಕ್ಷ್ಮೀ ಶೋಭಾನೆ, ನಾಮ ಸಂಕೀರ್ತನೆ, ಭಕ್ತಿ ಗಾನಸುಧೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಮದ್ಯಾಹ್ನ 1 ಗಂಟೆಯಿಂದ ಮಹಾಅನ್ನಸಂತರ್ಪಣೆ ನಡೆಯಲಿದೆ. ಸಾಯಂಕಾಲ 5 ಗಂಟೆಗೆ ಸಂಸ್ಕ್ರತ ಉಪನ್ಯಾಸಕರಾದ ಹೆರ್ಗ ವಿದ್ವಾನ್ ಹರಿದಾಸ್ ಭಟ್ ರವರಿಂದ ಪ್ರವಚನ ಕೂಡ ಆಯೋಜಿಸಲಾಗಿದೆ. 6 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು ಶ್ರೀ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಕಾರ್ಯಕ್ರಮ
ಉದ್ಘಾಟಿಸಿ ಆಶೀರ್ವಚನ ನೀಡಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಶಾಸಕ ಕೆ. ರಘುಪತಿ ಭಟ್ ಮುಂತಾದ ಗಣ್ಯರು ಭಾಗವಹಿಸಲಿದ್ದು ಉಡುಪಿ ಸಂಸ್ಕ್ರತ ಕಾಲೇಜು ‌ಪ್ರಾಧ್ಯಾಪಕರಾದ ಡಾ. ಷಣ್ಮುಖ ಹೆಬ್ಬಾರ್ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.
ನಂತರ ವಿದುಷಿ ಶ್ರೀಮತಿ ಲಕ್ಷ್ಮೀ ಗುರುರಾಜ್ ಕೊಡವೂರು ಮತ್ತು ತಂಡದವರಿಂದ ನೂಪುರ ನಿನಾದ ಭರತ ನಾಟ್ಯ ನ್ರತ್ಯ ವೈಭವ ಕಾರ್ಯಕ್ರಮ ನಡೆಯಲಿದೆ. ಅ.6ರಂದು ಇಡೀ ದಿನ ಧಾರ್ಮಿಕ ನಾಮಾರ್ಚನೆ‌ ಕಾರ್ಯಕ್ರಮಗಳು ನಡೆಯಲಿದ್ದು, ಮದ್ಯಾಹ್ನ 2 ರಿಂದ ಕಿನ್ನಿಮೂಲ್ಕಿ ವೀರಭದ್ರ ಯಕ್ಷಗಾನ ಮಂಡಳಿಯವರಿಂದ‌ ಯಕ್ಷಗಾನ ತಾಳಮದ್ದಳೆ ನಡೆಯಲಿದ್ದು, ಸಾಯಂಕಾಲ 6 ಗಂಟೆಗೆ ಕಟಪಾಡಿಯ ನಿಮಿಷಾ ಕಲಾವಿದ ರಿಂದ ಏರೆಗ್ ಏರಾ ತುಳು ಸಾಮಾಜಿಕ ಹಾಸ್ಯಮಯ ನಾಟಕ ಆಯೋಜಿಸಲಾಗಿದೆ.
ಅ. 7 ರಂದು ಎಂದಿನಂತೆ ಧಾರ್ಮಿಕ ಕಾರ್ಯಕ್ರಮಗಳು ಮುಂದುವರಿಯಲಿದ್ದು ಸಾಯಂಕಾಲ 7 ಗಂಟೆಗೆ ಸ್ಥಳೀಯ ಕಲಾವಿದರಿಂದ ನ್ರತ್ಯ ವೈವಿಧ್ಯಗಳು ನಡೆಯಲಿದೆ.
ಅ.8ರಂದು ಸಾಯಂಕಾಲ 5 ಗಂಟೆಗೆ ಕಲ್ಪೋಕ್ತ ಪೂಜೆ,‌ ದೀಪಾರಾಧನೆ ಸಹಿತ ರಂಗ ಪೂಜೆ, ವಿಸರ್ಜನಾ ಪೂಜೆಗಳು ನಡೆದು ತದನಂತರ ಶಾರದಾ ಮಾತೆ ಭವ್ಯ‌ ವಿಸರ್ಜನಾ ಶೋಭಾ ಯಾತ್ರೆ ನಡೆಯುಲಿದ್ದು ಕಿನ್ನಿಮೂಲ್ಕಿ ಮೈದಾನದಿಂದ ಹೊರಟು ಫಯರ್
ಸ್ಟೇಷನ್ ರಸ್ತೆ, ವಿವೇಕಾನಂದ ರಸ್ತೆ, ಗೋವಿಂದ ಕಲ್ಯಾಣ ಮಂಟಪದಿಂದ ಜೋಡುರಸ್ತೆ ಮೂಲಕ‌ ಕಿನ್ನಿಮೂಲ್ಕಿ ಮುಖ್ಯ ರಸ್ತೆಯಲ್ಲಿ ಸಾಗಿ ಸ್ವಾಗತ ಗೋಪುರದ ಮೂಲಕ ಕನ್ನರ್ಪಾಡಿ‌ ಕಡೆಕಾರ್ ಮಾರ್ಗವಾಗಿ ಕಡೆಕಾರ್  ದೇವರಕೆರೆಯಲ್ಲಿ ಜಲಸ್ಥಂಭನ ಗೊಳಿಸಲಾಗುವುದು.
ಮೆರವಣಿಗೆ ಸಾಗುವ ಹಾದಿಯಲ್ಲಿ ಶಾರದಾ ಮಾತೆಗೆ ಮಂಗಳಾರತಿ ಸಲ್ಲಿಸುವ ಅವಕಾಶವಿದೆ. ಶ್ರೀ ಶಾರದಾ ಮಹೋತ್ಸವಕ್ಕೆ ಸೇವೆ ನೀಡುವವರು ಮತ್ತು ಇನ್ನಿತರ ಮಾಹಿತಿಗಳಿಗಾಗಿ 9964427117, 9743287990  ಸಂಖ್ಯೆಯನ್ನು ಸಂಪರ್ಕಿಸ ಬಹುದು ಎಂದು ತಿಳಿಸಿದರು.
ಪ್ರಧಾನ ಕಾರ್ಯದರ್ಶಿ ಯಶವಂತ್ ಬಿ ಕೆ, ಮಾಧ್ಯಮ ಪ್ರತಿನಿಧಿ ಮಂಜುನಾಥ್ ಮಣಿಪಾಲ, ಸಮಿತಿಯ ಪ್ರಮುಖರಾದ ದೇವದಾಸ್ ಶೆಟ್ಟಿಗಾರ್, ನರೇಶ್, ವಾದಿರಾಜ್‌ ಭಟ್ ಉಪಸ್ಥಿತರಿದ್ದರು.