ಕುಂದಾಪುರ: ಕೊಟ್ಟಿಗೆಯಿಂದ ಹೊತ್ತೊಯ್ದಿದ್ದ ದನ ಪತ್ತೆ ಹಚ್ಚಿದ ಪೊಲೀಸರು: ಆರೋಪಿಗಳು ಪರಾರಿ

ಕುಂದಾಪುರ: ಬೈಂದೂರು ಪೊಲೀಸ್ ಠಾಣೆ ವ್ಯಾಪ್ತಿಯ ಯಳಜಿತ್ ಎಂಬಲ್ಲಿ ದಾರು ಗೌಡ್ತಿ ಮನೆಯ ಕೊಟ್ಟಿಗೆಯಲ್ಲಿದ್ದ ಎರಡು ದನ ಹಾಗೂ ಪಾರ್ವತಿ ಎನ್ನುವರ ಮನೆಯ ಕೊಟ್ಟಿಗೆಯಲ್ಲಿದ್ದ ಮೂರು ದನಗಳನ್ನು ಮಂಗಳವಾರ ತಡರಾತ್ರಿ ದುಷ್ಕರ್ಮಿಗಳು ಹೊತ್ತೊಯ್ದಿದ್ದು ಕ್ಷಿಪ್ರ ಕಾರ್ಯಾಚರಣೆ ಮೂಲಕ ಬೈಂದೂರು ಪೊಲೀಸರು ಐದು ದನಗಳನ್ನು ಪತ್ತೆ ಹಚ್ಚಿದ್ದಾರೆ.
ಮಂಗಳವಾರ ತಡರಾತ್ರಿ ಎರಡು ಮನೆಗಳ ಕೊಟ್ಟಿಗೆಗೆ ನುಗ್ಗಿದ ದುಷ್ಕರ್ಮಿಗಳು ಐದು ದನಗಳನ್ನು ಕದ್ದಿದ್ದು ಮಾರನೇ ದಿನ ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಅಲ್ಲದೇ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಗೋ ಕಳವಾದ ಮನೆಗಳಿಗೆ ಭೇಟಿ ನೀಡಿದ್ದಲ್ಲದೇ ಕೂಡಲೇ ಆರೋಪಿಗಳ ಪತ್ತೆಗೆ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದರು. ಹಿಂದೂ ಪರವಾದ ಸಂಘಟನೆಗಳು ಕೂಡ ಪ್ರಕರಣ ಭೇದಿಸುವಂತೆ ಆಗ್ರಹಿಸಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬೈಂದೂರು ಠಾಣೆ ಪಿಎಸ್ಐ ತಿಮ್ಮೇಶ್ ಬಿ.ಎನ್. ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಗಿಳಿದಿದ್ದರು. ಇದೇ ವೇಳೆ ಕಂಡ್ಲೂರಿನ ಬಾತ್ಮೀದಾರರೊಬ್ಬರು ನದೀಮ್ ಎನ್ನುವನ ಮನೆಯಲ್ಲಿ ಜಾನುವಾರು ಕಟ್ಟಿದ್ದರ ಬಗ್ಗೆ ಪೊಲೀಸರಿಗೆ ವಿಡಿಯೋ ಹಾಕಿದ್ದು ಆ ವಿಡಿಯೋವನ್ನು ಪೊಲೀಸರು ಗೋವು ಕಳೆದುಕೊಂಡ ಕುಟುಂಬದವರಿಗೆ ತೋರಿಸಿ ದನಗಳ ಗುರುತು ಪತ್ತೆ ಮಾಡಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಕಂಡ್ಲೂರಿಗೆ ತೆರಳಿದ್ದು ಆರೋಪಿಗಳ ಪತ್ತೆಗೆ ಮುಂದಾಗಿದ್ದು ಅಷ್ಟರಲ್ಲಾಗಲೇ ಆರೋಪಿಗಳು ಪರಾರಿಯಾಗಿದ್ದರು‌. ಇದೇ ಸಂದರ್ಭ ಪೊಲೀಸರು ದನಗಳನ್ನು ವಶಕ್ಕೆ ಪಡೆದು ರಕ್ಷಣೆ ಮಾಡಿ ಠಾಣೆಗೆ ತಂದಿದ್ದಾರೆ.
ಎರಡು ದಿನಗಳಲ್ಲಿ ಕುಟುಂಬಕ್ಕೆ ಜಾನುವಾರುಗಳನ್ನು ಪತ್ತೆ ಮಾಡಿಕೊಟ್ಟ ಬೈಂದೂರು ಪೊಲೀಸರ  ಕಾರ್ಯಾಚರಣೆಯನ್ನು ನಾಗರಿಕರು ಹಾಗೂ ಹಿಂದೂಪರ ಸಂಘಟನೆ ಕಾರ್ಯಕರ್ತರು ಪ್ರಶಂಸಿಸಿದ್ದಾರೆ. ಅಲ್ಲದೇ ಜಿ.ಪಂ ಸದಸ್ಯೆ ಗೌರಿ ದೇವಾಡಿಗ ಅವರ ನೇತೃತ್ವದಲ್ಲಿ ಬೈಂದೂರು ಮಹಿಳಾ ಕಾಂಗ್ರೆಸ್ ಠಾಣೆಗೆ ಭೇಟಿ ನೀಡಿ ದುಷ್ಕರ್ಮಿಗಳನ್ನು ಕೂಡಲೇ ಪತ್ತೆ ಹಚ್ಚುವಂತೆ ಮನವಿ ಮಾಡಿಕೊಂಡಿದೆ.