ಉಡುಪಿ: ಜಿಲ್ಲೆಯ ಕುಂದಾಪುರ ತಾಲೂಕಿನ ಕಮಲಶಿಲೆಯ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ನವರಾತ್ರಿ ಉತ್ಸವವು ಶ್ರೀವಿಕಾರಿ ನಾಮಸಂವತ್ಸರದ ಅಶ್ವಯುಜ ಶುದ್ಧ ಪ್ರತಿಪದಿ ಸೆಪ್ಟೆಂಬರ್ 29ರಿಂದ ಪ್ರಾರಂಭಗೊಂಡು ಅಶ್ವಯುಜ ಶುದ್ಧ ದಶಮಿ ಅಕ್ಟೋಬರ್ 8ರವರೆಗೆ ನಡೆಯಲಿದೆ.
ಈ ಪುಣ್ಯ ಕಾರ್ಯದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ನವರಾತ್ರಿಯ ಪ್ರಯುಕ್ಯ ಪ್ರತಿದಿನ ತ್ರಿಕಾಲ ಪೂಜೆ, ನವರಾತ್ರಿ ವಿಶೇಷ ಪೂಜೆ, ಮಹಾಪೂಜೆ, ಸುತ್ತುಬಲಿ ನಡೆಯುತ್ತದೆ. ಅ.5ರಂದು ರಾತ್ರಿ ಶಾರದಾ ದೇವಿಯ ಪ್ರತಿಷ್ಠಾಪನಾ ಕಾರ್ಯ ಹಾಗೂ ವಿಶೇಷ ಪೂಜಾ ಕೈಂಕರ್ಯಗಳಿವೆ. ಅ. 7ರಂದು ಮಧ್ಯಾಹ್ನ ಚಂಡಿಕಾ ಹವನ ಮತ್ತು ರಾತ್ರಿ ರಜತ ಮಹೋತ್ಸವ ಲಾಲ್ಕಿ ಉತ್ಸವ ಹಾಗೂ ಅ.8ರಂದು ಕದಿರು ಮುಹೂರ್ತ, ಕಣಜ ತುಂಬಿಸುವುದು, ದಶಮಿ ಪೂಜೆ, ವಿಜಯೋತ್ಸವ ಮತ್ತು ಸಂಜೆ ದಶಮಿ ಉತ್ಸವ ಜರಗಲಿದೆ.
ದೂರದ ಊರಿನಿಂದ ಆಗಮಿಸುವವರಿಗೆ ವಸತಿ ಮತ್ತು ಊಟದ ವ್ಯವಸ್ಥೆ ಇದ್ದು, ಪ್ರತಿದಿನವೂ ಭಜನಾ ಕಾರ್ಯಕ್ರಮ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ಉಡುಪಿ ಜಿಲ್ಲೆಯಲ್ಲೇ ಊಟದ ವಿಚಾರದಲ್ಲಿ ಪ್ರಸಿದ್ಧಿ ಎನ್ನಿಸಿರುವ ಶ್ರೀಕ್ಷೇತ್ರ ಕಮಲಶಿಲೆ ಬಂದಿರುವ ಭಕ್ತರಿಗೆ ಮಧ್ಯಾಹ್ನ ಮತ್ತು ರಾತ್ರಿ ವೇಳೆ ಉಚಿತ ಅನ್ನಸಂತರ್ಪಣೆ ಸೇವೆಯನ್ನು ನೀಡಲಾಗುತ್ತದೆ.
ವಿಶೇಷ ಬಸ್ಸುಗಳ ವ್ಯವಸ್ಥೆ:
ದೇವಸ್ಥಾನಕ್ಕೆ ನವರಾತ್ರಿ ವೇಳೆಯಲ್ಲಿ ಆಗಮಿಸುವುದಕ್ಕೆ ವಿಶೇಷ ವಾಹನ ಸೌಲಭ್ಯವೂ ಲಭ್ಯವಿದೆ. ರಾತ್ರಿ ವೇಳೆಯ ಉತ್ಸವದ ನಂತರ ತಮ್ಮ ತಮ್ಮ ಊರುಗಳಿಗೆ ತಲುಪುದಕ್ಕೆ ಭಕ್ತಾದಿಗಳಿಗೆ ಅನುಕೂಲವಾಗಲೆಂದು ಸಿದ್ಧಾಪುರ ಮತ್ತು ಹಳ್ಳಿಹೊಳೆ ಕಡೆ ಹೋಗುವವರಿಗೆ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ.
ಹಬ್ಬದಂತೆ ನೆರವೇರುವ ಶ್ರೀ ಕ್ಷೇತ್ರ ಕಮಲಶಿಲೆಯ ಶರನವರಾತ್ರಿ ಉತ್ಸವದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅನುವಂಶಿಕ ಆಡಳಿತ ಮುಕ್ತೇಸರರಾಗಿರುವ ಸಚ್ಚಿದಾನಂದ ಚಾತ್ರರು ಮತ್ತು ಅನುವಂಶಿಕ ಟ್ರಸ್ಟಿಗಳಾದ ಬರೆಗುಂಡಿ ಶ್ರೀನಿವಾಸ ಚಾತ್ರರು, ಆಜ್ರಿ ಚಂದ್ರಶೇಖರು ಶೆಟ್ಟರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.












