ಕಳತ್ತೂರು: ಫೆ. 20ಕ್ಕೆ ಗುರ್ಮೆ ಗೋ ವಿಹಾರ ಲೋಕಾರ್ಪಣೆ ಕಾರ್ಯಕ್ರಮ

ಕಾಪು: ಕಾಪು ತಾಲೂಕಿನ ಕಳತ್ತೂರು ಗುರ್ಮೆಯಲ್ಲಿ ಗುಮ್ಮೆ ಫೌಂಡೇಶನ್ ವತಿಯಿಂದ ನೂತನವಾಗಿ ನಿರ್ಮಿಸಲಾದ ‘ಗುರ್ಮೆ ಗೋ ವಿಹಾರ ಕೇಂದ್ರ’ ಲೋಕಾರ್ಪಣೆ ಮತ್ತು ದಿ| ಪದ್ಮಾವತಿ ಪಿ. ಶೆಟ್ಟಿ ಗುರ್ಮೆ ಅವರ ನಾಲ್ಕನೇ ಪುಣ್ಯತಿಥಿಯ ಪ್ರಯುಕ್ತ ಫೆ. 20 ರಂದು ಕಳತ್ತೂರು ಗುಮ್ಮೆಯಲ್ಲಿ ಕೀರ್ತನ,‌ ಸಾಂತ್ವನ, ಯಕ್ಷಗಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಗುಮ್ಮೆ ಫೌಂಡೇಶನ್ ಅಧ್ಯಕ್ಷ ಸುರೇಶ್ ಪಿ. ಶೆಟ್ಟಿ ಗುಮ್ಮೆ ಹೇಳಿದರು.

ಅವರು ಮಂಗಳವಾರ ಗುರ್ಮೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕೀರ್ತನ, ಸಾಂತ್ವನ ಹಾಗೂ ಯಕ್ಷಗಾನ ಕಾರ್ಯಕ್ರಮದ ಅಂಗವಾಗಿ ಸಂಜೆ 4.00ಕ್ಕೆ ಶ್ರೀಕಾಂತ ಶೆಟ್ಟಿ ಕಾರ್ಕಳ ಮತ್ತು ಬಳಗ ಸಂದೇಶ ನೀರುಮಾರ್ಗ ಮತ್ತು ಬಳಗ ಮಂಗಳೂರು ಇವರಿಂದ ಭಜನಾ ಸಂಕೀರ್ತನೆ, ರಾತ್ರಿ 8 ರಿಂದ ಶ್ರೀಗುರುನರಸಿಂಹ ದಶಾವತಾರ ಯಕ್ಷಗಾನ ಮಂಡಳಿ ಸಾಲಿಗ್ರಾಮ ಇದರಿಂದ ‘ದಕ್ಷ ಯಜ್ಞ – ರಾಜಾ ರುದ್ರಕೋಪ’ ಎಂಬ ಕಾಲಮಿತಿ ಯಕ್ಷಗಾನ ಬಯಲಾಟ ನಡೆಯಲಿದೆ.

ಸಂಜೆ 4.30ಕ್ಕೆ ಸಭಾಕಾರ್ಯಕ್ರಮದಲ್ಲಿ ಸಾಂತ್ವನ ಕಾರ್ಯಕ್ರಮದಡಿ ಸುಮಾರು 500 ಮಂದಿ ಅನಾರೋಗ್ಯ ಪೀಡಿತರಿಗೆ ಧನಸಹಾಯ, 280 ಮಂದಿ ಕೊರೋನಾ ವಾರಿಯರ್ಸಗೆ ಸನ್ಮಾನ, ಪೌರ ಕಾರ್ಮಿಕರಿಗೆ ಗೌರವಾರ್ಪಣೆ ಸಹಿತ ವಿವಿಧ ಸಮುದಾಯ ಅಭಿವೃದ್ಧಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಸಾಧಕರಾದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್, ಡಾ| ಜೀವನ್ ಕಿಣಿ ಮುಂಬಯಿ, ಮುಂಬಯಿಯ ಸಾಹಿತಿ ಡಾ| ಭರತ್ ಕುಮಾರ್ ಪೊಲಿಪು, ಸೂರಿ ಶೆಟ್ಟಿ ಕಾಪು ಅವರನ್ನು ಸನ್ಮಾನಿಸಲಾಗುವುದು ಎಂದರು.

ದ.ಕ ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲು ಕಾರ್ಯಕ್ರಮ ಉದ್ಘಾಟಿಸಲಿದ್ದು, ಪುತ್ತಿಗೆ ಮಠದ ಶ್ರೀ ಸುಗುಣೆಂದ್ರ ತೀರ್ಥ ಸ್ವಾಮೀಜಿ, ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಗೌರಿಗದ್ದೆ ಸ್ವರ್ಣ ಪೀಠಿಕಾಪುರದ ಶ್ರೀ ವಿನಯ ಗುರೂಜಿ ಆಶೀರ್ವಚನ ನೀಡಲಿದ್ದಾರೆ.

ಹಾಗೂ ಸಚಿವರಾದ ಎಸ್. ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ವಿ. ಸುನಿಲ್ ಕುಮಾರ್, ಶಾಸಕರಾದ ರಘುಪತಿ ಭಟ್, ಲಾಲಾಜಿ ಆರ್. ಮೆಂಡನ್, ಎಂ.ಜಿ. ಆರ್. ಗ್ರೂಪ್ನ ಚೇರ್ಮೆನ್ ಕೆ. ಪ್ರಕಾಶ್ ಶೆಟ್ಟಿ ಬಂಜಾರ, ಮೂಡಬಿದ್ರೆ ಆರ್. ಗ್ರೂಪ್ನ ಚೇರ್ಮೆನ್ ಕೆ. ಪ್ರಕಾಶ್ ಶೆಟ್ಟಿ ಬಂಜಾರ, ಮೂಡಬಿದ್ರೆ ಆಳ್ವಾಸ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ| ಮೋಹನ್ ಆಳ್ವಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಗುರ್ಮೆ ಪ್ರಮುಖರಾದ ಶಾಮ್ ಶೆಟ್ಟಿ ಮುಂಬಯಿ, ಶಿವರಾಮ ಶೆಟ್ಟಿ ಪೈಯ್ಯಾರು, ಅರುಣ್ ಶೆಟ್ಟಿ ಪಾದೂರು, ಕೃಷ್ಣಪ್ರಸಾದ್ ಶೆಟ್ಟಿ, ಗಣೇಶ್ ಶೆಟ್ಟಿ ಪೈಯ್ಯಾರು ಮೊದಲಾದವರು ಉಪಸ್ಥಿತರಿದ್ದರು.

ಕಳತ್ತೂರು ಗುರ್ಮೆ ಭಾಗೀರಥಿ ಗೋಗೃಹದಲ್ಲಿ ವಿವಿಧ ಜಾತಿಯ 70ಕ್ಕೂ ಅಧಿಕ ಗೋವುಗಳಿದ್ದು ಅವುಗಳನ್ನು ಆರೈಕೆ ಮಾಡಲಾಗುತ್ತಿದೆ.

ಕಳತ್ತೂರು ಗುಮ್ಮೆಯಲ್ಲಿ ಮಾರ್ಗದರ್ಶಕರ ಸಲಹೆಯಂತೆ ತಮ್ಮ ಹಿರಿಯರಿಂದ ಬಳುವಳಿಯಾಗಿ ಬಂದ ಮತ್ತು ಸ್ಥಳೀಯವಾಗಿ ಖರೀದಿಸಿದ ಸುಮಾರು 3 ಎಕರೆ ಜಮೀನಿನಲ್ಲಿ ಗುತ್ತಿಗೆದಾರ ಸಂತೋಷ್ ಪಿ. ಶೆಟ್ಟಿ ತೆಂಕರ ಗುತ್ತು ಅವರ ಮುತುವರ್ಜಿಯಲ್ಲಿ ಗೋವುಗಳಿಗೆ ಸ್ವಚ್ಛಂದವಾಗಿ ತಿರುಗಾಡಲು ಗುರ್ಮೆ ಗೋ ವಿಹಾರ ಕೇಂದ್ರವನ್ನು ನಿರ್ಮಿಸಲಾಗಿದೆ ಎಂದು ಗುಮ್ಮೆ ಫೌಂಡೇಶನ್ ಅಧ್ಯಕ್ಷ ಸುರೇಶ್ ಪಿ. ಶೆಟ್ಟಿ ಗುಮ್ಮೆ ತಿಳಿಸಿದರು.