ಕಕ್ಕುಂಜೆಯಲ್ಲಿ ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಪ್ರಕರಣ: ಇಬ್ಬರು ಆರೋಪಿಗಳ ಸೆರೆ

ಉಡುಪಿ: ಅಂಬಾಗಿಲು ಕಕ್ಕುಂಜೆ ನಿವಾಸಿ ಪ್ರಮೀಳಾ  ಬಂಗೇರಾ ಎಂಬವರ ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಉಡುಪಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 2,18,169 ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಕಕ್ಕುಂಜೆ ಗರಡಿಯ ಬಳಿ ನಿವಾಸಿ 36 ವರ್ಷದ ಸಂತೋಷ್ ಪೂಜಾರಿ ಹಾಗೂ ಕಟಪಾಡಿ ಮಟ್ಟು ನಿವಾಸಿ 37 ವರ್ಷದ ರಾಕೇಶ್ ಪಾಲನ್ ಬಂಧಿತ ಆರೋಪಿಗಳು.

ಇವರು ಕಕ್ಕುಂಜೆ ಎಂಬಲ್ಲಿ ಪ್ರಮೀಳಾ ಅವರ ಮನೆಗೆ ನುಗ್ಗಿ, ಎರಡು ಬಂಗಾರದ ಸರ, ಎರಡು ಬಳೆ, ಮೂರು ಉಂಗುರ, ಒಂದು ಜೊತೆ ಕಿವಿಯ ಓಲೆ, ಒಂದು ಬ್ರೆಸ್‌ಲೆಟ್‌ ಸಹಿತ ಒಟ್ಟು 3.15 ಲಕ್ಷ ರೂ. ಮೌಲ್ಯದ 9 ಪವನ್‌ ತೂಕದ ಚಿನ್ನಾಭರಣಗಳನ್ನು ಕಳವು ಮಾಡಿದ್ದರು. ಈ ಬಗ್ಗೆ ಪ್ರಮೀಳಾ ಅವರು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮನೆಗೆ ಬರುತ್ತಿದ್ದ ಸಂತೋಷ್ ಎಂಬಾತನ ಮೇಲೆ ಸಂಶಯ ಇರುವುದಾಗಿ ದೂರಿನಂತೆ ತಿಳಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದ ಪೊಲೀಸರು, ಆರೋಪಿ ಸಂತೋಷ್ ಪೂಜಾರಿಯನ್ನು ಕೃಷ್ಣ ಮಠದ ಗೀತಾ ಮಂದಿರ ಬಳಿ ಹಾಗೂ ಇನ್ನೋರ್ವ ಆರೋಪಿ ರಾಕೇಶ್ ಪಾಲನ್ ಎಂಬಾತನನ್ನು ಉಡುಪಿ ಉಜ್ವಲ್ ಬಾರ್ ಬಳಿ ಬಂಧಿಸಿದ್ದರು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗಳಿಗೆ  15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.