ಕಾಡಮಲ್ಲಿಗೆ ಖ್ಯಾತಿಯ ಬೆಳ್ಳಾರೆ ವಿಶ್ವನಾಥ ರೈ ಇನ್ನಿಲ್ಲ

ಉಡುಪಿ: ಬೆಳ್ಳಾರೆ ಸುಬ್ಬಯ್ಯ ರೈ ಮತ್ತು ಮಂಜಕ್ಕೆ ಇವರ ನಾಲ್ವರು ಮಕ್ಕಳಲ್ಲಿ ವಿಶ್ವನಾಥ ರೈ ಒಬ್ಬರು. ಇವರು 28-2-1949 ರಲ್ಲಿ ಬೆಳ್ಳಾರೆಯಲ್ಲಿ ಜನಿಸಿದರು. ಶಿಕ್ಷಣ 2 ನೇ ತರಗತಿ. ಇಬ್ಬರು ಅಕ್ಕಂದಿರು ಒಬ್ಬಾಕೆ ತಂಗಿ. ಅಚ್ಚುತ ಮಣಿಯಾಣಿಯವರಿಂದ ಯಕ್ಷ ನಾಟ್ಯಾಭ್ಯಾಸ ಮಾಡಿ ತನ್ನ 9ನೇ ವರ್ಷ ಪ್ರಾಯದಲ್ಲಿ ರಂಗಪ್ರವೇಶ ಮಾಡಿದ್ದರು. ರಾಜನ್ ಅಯ್ಯರ್ ಮತ್ತು ಕೇಶವ ಮಾಸ್ತರ್ ಅವರಿಂದ ಭರತನಾಟ್ಯವನ್ನೂ ಕಲಿತಿದ್ದರು. ಬಾಲಕನಿದ್ದಾಗಲೇ ತನ್ನ ಅಭಿನಯಕ್ಕೆ ಮಾಸ್ಟರ್ ಹಿರಣ್ಣಯ್ಯರಿಂದ ಚಿನ್ನದ ಉಂಗುರದ ಸನ್ಮಾನ ಸ್ವೀಕರಿಸಿದ್ದಾರೆ.
ಕರ್ನಾಟಕ ಮೇಳ ಒಂದರಲ್ಲೇ 35 ವರುಷಗಳ ತಿರುಗಾಟ ಮಾಡಿದ್ದಾರೆ. ಉಳಿದಂತೆ ಮಧೂರು ಮೇಳ 1 ವರುಷ, ಸುರತ್ಕಲ್ ಮೇಳ 5 ವರುಷ, ಕದ್ರಿ ಮೇಳ 2 ವರುಷ, ಬಪ್ಪನಾಡು ಮೇಳ 1 ವರುಷ, ಕುಂಟಾರು ಮೇಳ 2 ವರುಷ, ಎಡನೀರು ಮೇಳ 1 ವರುಷ, ಕಟೀಲು ಮೇಳ 3 ವರುಷ ತಿರುಗಾಟ ಮಾಡಿದ್ದಾರೆ.

ಇವರು ಅಲ್ಪ ಕಾಲದ ಅನಾರೋಗ್ಯದಿಂದ ಕಳೆದ ರಾತ್ರಿ ಬೆಳ್ಳಾರೆಯ ಸ್ವಗೃಹದಲ್ಲಿ ಇಹಲೋಕ ತ್ಯಜಿಸಿದ್ದಾರೆ. ಇಂದು ಮದ್ಯಾಹ್ನ ಅವರ ಪಾರ್ಥಿವ ಶರೀರದ ಅಂತ್ಯ ಕ್ರಿಯೆ ಬೆಳ್ಳಾರೆಯಲ್ಲಿ ಜರಗಲಿದೆ.