ಜು.15: ವಿಶ್ವಕರ್ಮ ಜಗದ್ಗುರು ಪೀಠ ಕಜ್ಕೆ ಶಾಖಾ ಮಠ ಉದ್ಘಾಟನೆ, ಜು.16: ರಿಂದ ಶ್ರೀ ಶಿವಸುಜ್ಞಾನತೀಥ ಶ್ರೀಪಾದರ 37ನೇ ಚಾತುರ್ಮಾಸ್ಯ ವ್ರತಾನುಷ್ಠಾನ 

ಉಡುಪಿ: ಕೊಕ್ಕರ್ಣೆ ಕಜ್ಕೆಯಲ್ಲಿ ನೂತನವಾಗಿ ನಿರ್ಮಾಣವಾದ ಅರೇಮಾದನಹಳ್ಳಿ ವಿಶ್ವಬ್ರಾಹ್ಮಣ ಮಹಾಸಂಸ್ಥಾನದ ಶ್ರೀ ವಿಶ್ವಕರ್ಮ ಜಗದ್ಗುರು ಪೀಠದ ನೂತನ ಶಾಖಾ ಮಠ ಜು.15ರಂದು ಸಾಯಂಕಾಲ 5.30ಕ್ಕೆ ಉದ್ಘಾಟನೆಗೊಳ್ಳಲಿದೆ ಎಂದು ನೂತನ ಶಾಖಾ ಮಠದ ನಿರ್ಮಾಣ ಸಮಿತಿ ಅಧ್ಯಕ್ಷ ಅಲೆವೂರು ಯೋಗೀಶ್ ಆಚಾರ್ಯ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಜ್ಕೆ ಅರೇಮಾದನಹಳ್ಳಿ ವಿಶ್ವಬ್ರಾಹ್ಮಣ ಮಹಾಸಂಸ್ಥಾನದ ವಿಶ್ವಕರ್ಮ ಜಗದ್ಗುರು ಪೀಠದ ಶ್ರೀ ಶಿವಸುಜ್ಞಾನತೀರ್ಥ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಹಬ್ಬಳ್ಳಿ ಸಾಹಿತಿ ಭೀಮ ಸೇನ ಬಡಿಗೇರಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಸಂಸದೆ ಶೋಭಾ ಕರಂದ್ಲಾಜೆ, ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ರಘುಪತಿ ಭಟ್, ಸುನೀಲ್ ಕುಮಾರ್, ಹಾಲಾಡಿ ಶ್ರೀನಿವಾಸ ಶೆಟ್ಟಿ , ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ವಿನಯಕುಮಾರ್ ಸೊರಕೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಚಾತುರ್ಮಾಸ್ಯ ವ್ರತಾನುಷ್ಠಾನ ಸಮಿತಿ ಅಧ್ಯಕ್ಷ ರಾಘವೇಂದ್ರ ಆಚಾರ್ಯ, ಉಪಾಧ್ಯಕ್ಷ ಶಿಲ್ಪಿ ಶ್ರೀಧರ್ ಆಚಾರ್ಯ ಬಂಡೀಮಠ, ಕಾರ್ಯದರ್ಶಿ ರವೀಂದ್ರ ಆಚಾರ್ಯ, ಜತೆ ಕಾರ್ಯದರ್ಶಿ ಕೆ.ಜಯರಾಮ ಆಚಾರ್ಯ ಸುದ್ದಿಗೋಷ್ಠಿಯಲ್ಲಿದ್ದರು.
ಜುಲೈ.16 ರಿಂದ ಚಾತುರ್ಮಾಸ್ಯ ವ್ರತಾನುಷ್ಠಾನ 
ಶ್ರೀ ಶಿವಸುಜ್ಞಾನತೀರ್ಥ ಸ್ವಾಮೀಜಿ 37ನೇ ಚಾತುರ್ಮಾಸ್ಯ ವ್ರತಾನುಷ್ಠಾನ ಜುಲೈ 16 ರಿಂದ ಸೆ.14 ವರೆಗೆ ಶಾಖಾ ಮಠದಲ್ಲಿ ಚಾತುರ್ಮಾಸ್ಯ ವ್ರತಾನುಷ್ಠಾನ ಕೈಗೊಳ್ಳಲಿದ್ದಾರೆ. ಶ್ರೀಗಳ ಪುರಪ್ರವೇಶ ಪ್ರಯುಕ್ತ ಜು.15ರಂದು ಕಾಡೂರು ಬಸ್ ನಿಲ್ದಾಣದಿಂದ ಕೊಕ್ಕರ್ಣೆ-ಕೆಂಜೂರು-ಮದ್ದೂರು ಮಾರ್ಗವಾಗಿ ಭವ್ಯ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಮೆರವಣಿಗೆಗೆ ಜಿಲ್ಲಾ ಪಂಚಾಯಿತಿ ಸದಸ್ಯ ಪ್ರತಾಪ್ ಹೆಗ್ಡೆ ಮಾರಾಳಿ ಚಾಲನೆ ನೀಡಲಿದ್ದಾರೆ.