ಮೀನುಗಾರಿಕಾ ಸೀಮೆಎಣ್ಣೆಗೆ ಅರ್ಜಿ ಸಲ್ಲಿಸಿದವರಿಗೆ ಸೆ 13-14 ರಂದು ಜಂಟಿ ತಪಾಸಣೆ

ಉಡುಪಿ: ಆಹಾರ, ಕಂದಾಯ ಮತ್ತು ಮೀನುಗಾರಿಕಾ ಇಲಾಖೆಗಳ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಉಡುಪಿ ತಾಲೂಕಿನಲ್ಲಿ ಮೀನುಗಾರಿಕಾ ಸೀಮೆಎಣ್ಣೆ ಹೊಸತು ಮತ್ತು ನವೀಕರಣಕ್ಕಾಗಿ ಅರ್ಜಿ ಸಲ್ಲಿಸಿದವರಿಗೆ ಸೆಪ್ಟಂಬರ್ 13 ರಂದು ಬೆಳಗ್ಗೆ 9.30 ಕ್ಕೆ ಪಡುಬಿದ್ರಿಯ ಸಾಗರ ವಿದ್ಯಾ ಮಂದಿರ ಶಾಲೆ ಬಳಿ ಹಾಗೂ ಮಧ್ಯಾಹ್ನ 2.30 ಕ್ಕೆ ಉಚ್ಚಿಲ ಮೊಗವೀರ ಸಭಾಭವನದ ಹತ್ತಿರ ಮತ್ತು ಸೆ. 14 ರಂದು ಬೆಳಗ್ಗೆ 9.30 ಕ್ಕೆ ಮಲ್ಪೆ ಟೆಗ್ಮಾದ ಬಳಿ ಜಂಟಿ ತಪಾಸಣೆಯನ್ನು ನಡೆಸಲಾಗುವುದು.

ಹೊಸ ರಹದಾರಿ ಕೋರಿ ಅರ್ಜಿ ಸಲ್ಲಿಸಿದವರು ತಪಾಸಣೆಗೆ ಬರುವಾಗ ಮೀನುಗಾರಿಕಾ ದೋಣಿ ಮತ್ತು ಇಂಜಿನ್ ಸಹಿತ ಮೀನುಗಾರಿಕಾ ಇಲಾಖಾ ನೋಂದಣಿ ಪತ್ರ ಮತ್ತು ಇಂಜಿನ್ ಬಿಲ್ಲುಗಳ ಮೂಲ ಪ್ರತಿಗಳನ್ನು ಹಾಗೂ ನವೀಕರಣ ಕೋರಿ ಅರ್ಜಿ ಸಲ್ಲಿಸಿರುವವರು ಮೀನುಗಾರಿಕಾ ಇಲಾಖೆ ನೋಂದಣಿ ಪತ್ರದ ಪ್ರತಿ ಮತ್ತು ಸೀಮೆಎಣ್ಣೆ ರಹದಾರಿ ಪ್ರತಿಯನ್ನು ಪರಿಶೀಲನೆಗೆ ಹಾಜರುಪಡಿಸುವಂತೆ ಉಡುಪಿ ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.