ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲೇಜಿನ ಪ್ರಾಂಶುಪಾಲರಿಗೆ ಕಪಾಳಮೋಕ್ಷ ಮಾಡಿದ ಜನತಾದಳ ಶಾಸಕ ಎಂ ಶ್ರೀನಿವಾಸ್

ಬೆಂಗಳೂರು: ನಾಲ್ವಡಿ ಕೃಷ್ಣ ರಾಜ ಒಡೆಯರ್ ಐಟಿಐ ಕಾಲೇಜಿನಲ್ಲಿ ನಡೆಯುತ್ತಿರುವ ಕಂಪ್ಯೂಟರ್ ಲ್ಯಾಬ್‌ನ ಅಭಿವೃದ್ಧಿ ಕಾಮಗಾರಿಯ ಬಗ್ಗೆ ಸರಿಯಾದ ಉತ್ತರ ನೀಡಲು ಸಾಧ್ಯವಾಗದಿದ್ದುದಕ್ಕಾಗಿ ಮಂಡ್ಯದ ಜೆಡಿಎಸ್ ಶಾಸಕ ಶ್ರೀನಿವಾಸ್, ತಮ್ಮ ಸಹೋದ್ಯೋಗಿಗಳ ಮುಂದೆ ಕಾಲೇಜು ಪ್ರಾಂಶುಪಾಲರೊಬ್ಬರಿಗೆ ಪದೇ ಪದೇ ಕಪಾಳಮೋಕ್ಷ ಮಾಡಿದ್ದಾರೆ.

ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶ್ರೀನಿವಾಸ್ ಪ್ರಾಂಶುಪಾಲರನ್ನು ಅವಮರ್ಯಾದೆಯಿಂದ ನಡೆಸಿಕೊಂಡಿದ್ದಾರೆ ಎಂದು ಹಲವರು ಕಿಡಿಕಾರಿದ್ದಾರೆ.

ನವೀಕೃತ ಐಟಿಐ ಕಾಲೇಜು ಉದ್ಘಾಟನೆ ವೇಳೆ ಪ್ರಾಂಶುಪಾಲ ನಾಗನಾದ್ ಅವರು ಪ್ರಯೋಗಾಲಯದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ ಸರಿಯಾದ ಮಾಹಿತಿ ನೀಡಲು ಸಾಧ್ಯವಾಗಲಿಲ್ಲ ಆಗ ಶಾಸಕ ಪ್ರಾಂಶುಪಾಲರ ಕೆನ್ನೆಗೆ ಬಾರಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಘಟನೆಯ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಸರಕಾರಿ ನೌಕರರ ಸಂಘದ ಮಂಡ್ಯ ಜಿಲ್ಲಾ ಅಧ್ಯಕ್ಷ ಶಂಭುಗೌಡ ಮಂಗಳವಾರ ತಿಳಿಸಿದ್ದಾರೆ ಎಂದು ವರದಿಯಾಗಿದೆ.