ರಾಜ್ಯದಲ್ಲಿ ರೆಸಾರ್ಟ್ ರಾಜಕೀಯ: ‘ಅಡ್ಡ ಮತದಾನ’ದ ಭಯದಿಂದ ಶಾಸಕರನ್ನು ಹೋಟೆಲ್‌ಗೆ ಸ್ಥಳಾಂತರಿಸಿದ ಜನತಾ ದಳ

ಬೆಂಗಳೂರು: ರಾಜ್ಯಸಭಾ ಚುನಾವಣೆಗೂ ಮುನ್ನಿನ ರೆಸಾರ್ಟ್ ರಾಜಕಾರಣ ರಾಜ್ಯದ ಅಂಗಳಕ್ಕೂ ಕಾಲಿಟ್ಟಿದೆ. ಮಹಾರಾಷ್ಟ್ರ ಮತ್ತು ರಾಜಸ್ಥಾನದಲ್ಲಿ ‘ಹೋಟೆಲ್ ರಾಜಕೀಯ’ದ ಸೂಚನೆಯ ನಂತರ, ಜನತಾ ದಳ (ಜಾತ್ಯತೀತ) ತನ್ನ ಎಲ್ಲಾ 32 ಶಾಸಕರನ್ನು ಬೆಂಗಳೂರಿನ 5-ಸ್ಟಾರ್ ಹೋಟೆಲ್‌ಗೆ ಸ್ಥಳಾಂತರಿಸಿದೆ.

ರಾಜ್ಯದಿಂದ ನಾಲ್ಕನೇ ಮತ್ತು ಕೊನೆಯ ಸ್ಥಾನಕ್ಕಾಗಿ ಪೈಪೋಟಿಯು ಬಿಗಿಯಾಗಿರುವ ಹೊತ್ತಿನಲ್ಲಿ ಈ ಬೆಳವಣಿಗೆ ಕಂಡುಬಂದಿದೆ. ಜೆಡಿಎಸ್ ತನ್ನ ಅಭ್ಯರ್ಥಿಯ ಗೆಲುವನ್ನು ಖಚಿತಪಡಿಸಿಕೊಳ್ಳಲು ಕಾಂಗ್ರೆಸ್‌ನ ಬೆಂಬಲವನ್ನು ಕೋರುವುದನ್ನು ಮುಂದುವರೆಸಿದರೆ, ಮತ್ತೊಂದೆಡೆ ಕಾಂಗ್ರೆಸ್ ಸಹ ಜೆಡಿಎಸ್ ನ ಎಲ್ಲಾ 32 ಶಾಸಕರ ಮತಗಳನ್ನು ನಿರೀಕ್ಷಿಸುತ್ತಿದೆ.

ಆದರೆ, ಬಿಜೆಪಿ ಕಡೆಯಿಂದ ‘ಬೇಟೆ’ ಮತ್ತು ‘ಅಡ್ಡ ಮತದಾನ’ದ ಭೀತಿ ಹಿನ್ನೆಲೆಯಲ್ಲಿ, ಪಕ್ಷವು ತನ್ನ ಶಾಸಕರನ್ನು ಸ್ಥಳಾಂತರಿಸಿದೆ ಹಾಗೂ ಅದೇ ಹೋಟೆಲ್‌ನಲ್ಲಿ ನಿಗದಿಯಾಗಿರುವ ಪಕ್ಷದ ಶಾಸಕಾಂಗ ಸಭೆಯಲ್ಲಿ ಈ ಎಲ್ಲಾ ಶಾಸಕರು ಭಾಗವಹಿಸಲಿದ್ದಾರೆ ಎನ್ನಲಾಗಿದೆ.

ಈ ಮಧ್ಯೆ, ಇತ್ತೀಚಿನ ಬೆಳವಣಿಗೆಗಳ ಪ್ರಕಾರ, ಶಾಸಕರಿಗೆ ವಿಪ್ ಕೂಡಾ ಜಾರಿಮಾಡಲಾಗಿದೆ ಎಂದು ವರದಿಯಾಗಿದೆ.