ಜ.5: ಮೆಲ್ವಿನ್ ಪೆರಿಸ್ ಬಳಗದಿಂದ ಸಂಗೀತ ರಸಮಂಜರಿ

ಉಡುಪಿ: ಕೆಥೊಲಿಕ್‌ ಸಭಾ ಉಡುಪಿ ಪ್ರದೇಶ್‌ ಇದರ ಉಡುಪಿ ವಲಯ ಸಮಿತಿಯ ವತಿಯಿಂದ ಜ. 5ರಂದು ಸಂಜೆ 5.30ಕ್ಕೆ ಉಡುಪಿಯ ಸೇಂಟ್‌ ಸಿಸಿಲಿಸ್‌ ಶಾಲಾ ಮೈದಾನಲ್ಲಿ ಕೊಂಕಣಿ ಗಾಯಕ ಮೆಲ್ವಿನ್‌ ಪೆರಿಸ್‌ ಮತ್ತು ಬಳಗದವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ವಲಯ ಸಮಿತಿಯ ಅಧ್ಯಕ್ಷ ರೊನಾಲ್ಡ್‌ ಆಲ್ಮೇಡಾ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಉಡುಪಿ ವಲಯದಲ್ಲಿ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವ ಕುಟುಂಬಗಳಿಗೆ ನೆರವಾಗುವ ನಿಟ್ಟಿನಲ್ಲಿ ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಕಾರ್ಯಕ್ರಮದ ಮೂಲಕ ಸಂಗ್ರಹವಾಗುವ ಹಣವನ್ನು ಮಾರಕ ಕಾಯಿಲೆಗಳಿಂದ ಬಳಲುತ್ತಿರುವ ವ್ಯಕ್ತಿಗಳಿಗೆ, ವಸತಿ ರಹಿತರಿಗೆ, ಉನ್ನತ ವಿದ್ಯಾಭ್ಯಾಸ ಮತ್ತು ಸ್ವ-ಉದ್ಯೋಗ ಮಾಡಲು ಇಚ್ಛಿಸುವವರಿಗೆ ನೀಡಲಾಗುವುದು. ಆಯ್ಕೆ ಮಾಡಲಾದ ಅರ್ಹ ಕುಟುಂಬಗಳಿಗೆ ಅದೇ ವೇದಿಕೆಯಲ್ಲಿ ಆರ್ಥಿಕ ನೆರವನ್ನು ಹಸ್ತಾಂತರಿಸಲಾಗುವುದು ಎಂದರು.
ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಜೆರಾಲ್ಡ್‌ ಐಸಾಕ್‌ ಲೋಬೊ, ವಲಯ ಪ್ರಧಾನ ಧರ್ಮಗುರು ವಲೇರಿಯನ್‌ ಮೆಂಡೊನ್ಸಾ, ಕೆಥೊಲಿಕ್‌ ಸಭಾ ಉಡುಪಿ ಪ್ರದೇಶ್‌ನ ಆಧ್ಯಾತ್ಮಿಕ ನಿರ್ದೇಶಕ ಫರ್ಡಿನಾಂಡ್‌ ಗೊನ್ಸಾಲ್ವಿಸ್‌, ಕೇಂದ್ರಿಯ ಅಧ್ಯಕ್ಷ ಆಲ್ವಿನ್‌ ಕ್ವಾಡ್ರಸ್‌, ಸಂತ ಸಿಸಿಲಿ ಕಾನ್ವೆಂಟಿನ ಮುಖ್ಯಸ್ಥ ಸಿಸ್ಟರ್‌ ವಿಭಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಗಾಯಕ ಮೆಲ್ವಿನ್‌ ಪೆರಿಸ್‌ ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ರಸಮಂಜರಿ ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿದ್ದು, ಉದಾರ ಮನಸ್ಸಿನ ದಾನಿಗಳು ಬಡವರಿಗಾಗಿ ನೀಡುವ ಧನಸಹಾಯವನ್ನು ಸ್ವೀಕರಿಸುವ ವ್ಯವಸ್ಥೆಯಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಥೊಲಿಕ್‌ ಸಭಾ ಉಡುಪಿ ಪ್ರದೇಶ್‌ ಇದರ ವಲಯ ಕಾರ್ಯದರ್ಶಿ‌ ಲವೀನಾ ಪಿರೇರಾ, ನಿಕಟಪೂರ್ವ ಅಧ್ಯಕ್ಷ ಮೇರಿ ಡಿಸೋಜಾ, ಪ್ರಸಾರ ಸಮಿತಿಯ ಸದಸ್ಯ ಬ್ರಾಯನ್‌ ಕೊರೆಯಾ, ಮಾರ್ಗದರ್ಶಕ ಅಲ್ಫೋನ್ಸ್‌ ಡಿಕೋಸ್ತಾ ಉಪಸ್ಥಿತರಿದ್ದರು.