ಚಿಕ್ಕೋಡಿ: ನಾಪತ್ತೆಯಾದ ಜೈನ ಮುನಿ; ಹತ್ಯೆ ಸಂಬಂಧಿಸಿ ಇಬ್ಬರ ಬಂಧನ

ಚಿಕ್ಕೋಡಿ: ಎರಡು ದಿನಗಳಿಂದ ನಾಪತ್ತೆಯಾಗಿದ್ದ ಜೈನ ಸನ್ಯಾಸಿ ಆಚಾರ್ಯ ಶ್ರೀ ಕಾಮಕುಮಾರ ನಂದಿ ಮಹಾರಾಜರು ಹತ್ಯೆಯಾಗಿದ್ದಾರೆ ಎಂದು ವರದಿಯಾಗಿದೆ

ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದ ಜೈನ ಸನ್ಯಾಸಿ ಆಚಾರ್ಯ ಶ್ರೀ ಕಾಮಕುಮಾರ ನಂದಿ ಮಹಾರಾಜರನ್ನು ಹತ್ಯೆ ಮಾಡಲಾಗಿದೆ ಎಂದು ಶನಿವಾರ ಮಾಧ್ಯಮಗಳು ವರದಿ ಮಾಡಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಅವರ ಗುರುತು ಇನ್ನೂ ಬಹಿರಂಗಗೊಂಡಿಲ್ಲ.

ಸನ್ಯಾಸಿಯು ಕಳೆದ 15 ವರ್ಷಗಳಿಂದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕುಡಿ ಗ್ರಾಮದ ನಂದಿ ಪರ್ವತದಲ್ಲಿರುವ ಜೈನ ಬಸದಿಯ ಆಶ್ರಮದಲ್ಲಿ ತಂಗಿದ್ದರು. ಗುರುವಾರದಂದು ಅವರು ನಾಪತ್ತೆಯಾಗಿದ್ದಾರೆ ಎಂದು ಆಶ್ರಮದ ವ್ಯವಸ್ಥಾಪಕ ಭೀಮಪ್ಪ ಉಗಾರೆ ಅವರು ತಿಳಿಸಿದ್ದಾರೆ. ಪೊಲೀಸರು ಇದೀಗ ಸನ್ಯಾಸಿಯ ಪಾರ್ಥಿವ ಶರೀರಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಜು.6ರಂದು ಬಸದಿಯ ವ್ಯವಸ್ಥಾಪಕ ಭೀಮಪ್ಪ ಉಗಾರೆ ಜೈನ ಮುನಿ ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು. ನಾವು ತನಿಖೆಯನ್ನು ಪ್ರಾರಂಭಿಸಿದ್ದೇವೆ ಮತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿದ್ದೇವೆ. ಮೃತದೇಹಕ್ಕಾಗಿ ನಮ್ಮ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸನ್ಯಾಸಿಗೆ ಸಾಲ ನೀಡುವ ಅಭ್ಯಾಸವಿತ್ತು ಮತ್ತು ಶಂಕಿತರು ಆತನಿಂದ ಸ್ವಲ್ಪ ಸಾಲ ಪಡೆದಿದ್ದರು ಎಂದು ಪೊಲೀಸ್ ವಿಚಾರಣೆ ತಿಳಿಸಿರುವುದಾಗಿ ಸುದ್ದಿ ಸಂಸ್ಥೆ ಹೇಳಿದೆ

ಮೇಲುನೋಟಕ್ಕೆ, ಸನ್ಯಾಸಿಯನ್ನು ಹಣಕ್ಕೆ ಸಂಬಂಧಿಸಿದ ವಿಷಯಕ್ಕಾಗಿ ಕೊಲೆ ಮಾಡಲಾಗಿದೆ ಎಂದು ತೋರುತ್ತದೆ ಎಂದು ಅಧಿಕಾರಿ ಹೇಳಿದ್ದಾರೆ. ತನಿಖೆ ನಡೆಯುತ್ತಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.