3 ದಿನಗಳಲ್ಲಿ ₹100 ಕೋಟಿ ಬಾಚಿದ ‘ಜೈಲರ್​’ : ರಜನಿ ಸಿನಿಮಾ ಸೂಪರ್​ ಹಿಟ್​..

ಕಾಲಿವುಡ್ ಸೂಪರ್​ಸ್ಟಾರ್​ ರಜನಿಕಾಂತ್​ ನಟನೆಯ ‘ಜೈಲರ್​’ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿದೆ.ರಜನಿಕಾಂತ್​ ನಟನೆಯ ‘ಜೈಲರ್​’ ಸಿನಿಮಾ ಮೂರನೇ ದಿನ 35 ಕೋಟಿ ರೂ. ಕಲೆಕ್ಷನ್​ ಮಾಡಿದೆ. ಈ ಮೂಲಕ ಭಾರತದಲ್ಲಿ ಒಟ್ಟು 109.10 ಕೋಟಿ ರೂ. ಗಳಿಸಿದೆ.

3ನೇ ದಿನದ ಕಲೆಕ್ಷನ್​: ‘ಜೈಲರ್’​ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಬಿಡುಗಡೆಯಾದ ಮೂರು ದಿನಗಳಲ್ಲಿ ಭಾರತದಲ್ಲಿ 100 ಕೋಟಿ ರೂಪಾಯಿ ಗಳಿಸಿದೆ. ಟ್ರೇಡಿಂಗ್​ ಪೋರ್ಟಲ್​ ಸ್ಯಾಕ್ನಿಕ್​ ಪ್ರಕಾರ, ಚಿತ್ರವು ಬಿಡುಗಡೆಯಾದ ಮೊದಲ ದಿನ 48.35 ಕೋಟಿ ರೂಪಾಯಿಗಳನ್ನು ಗಳಿಸಿತ್ತು.

ಎರಡನೇ ದಿನ 25.75 ಕೋಟಿ ರೂ. ಮತ್ತು ಮೂರನೇ ದಿನ 35 ಕೋಟಿ ರೂ. ಕಲೆಕ್ಷನ್​ ಮಾಡಿದೆ. ಈ ಮೂಲಕ ಒಟ್ಟು ದೇಶಿಯ ಮಾರುಕಟ್ಟೆಯಲ್ಲಿ 109.10 ಕೋಟಿ ರೂ. ಗಳಿಸಿದೆ.

ನೆಲ್ಸನ್​​ ದಿಲೀಪ್​ ಕುಮಾರ್ ನಿರ್ದೇಶನದ ಈ ಸಿನಿಮಾಗೆ ನಿರೀಕ್ಷೆಗೂ ಮೀರಿದ ರೆಸ್ಪಾನ್ಸ್​ ಸಿಕ್ಕಿದೆ. ಬಿಡುಗಡೆಯಾದ ಮೂರೇ ದಿನಗಳಲ್ಲಿ ಭಾರತೀಯ ಚಿತ್ರರಂಗದ ಸೂಪರ್​ ಹಿಟ್​ ಸಿನಿಮಾಗಳ ಸಾಲಿಗೆ ‘ಜೈಲರ್​’ ಕೂಡ ಸೇರಿಕೊಂಡಿದೆ. ಕಲೆಕ್ಷನ್​ ವಿಚಾರದಲ್ಲೂ ದಾಖಲೆಯ ಓಟ ಮುಂದುವರೆಸಿದೆ. ಆಗಸ್ಟ್​ 10 ರಂದು ವಿಶ್ವದಾದ್ಯಂತ 7,000 ಸ್ಕ್ರೀನ್​ಗಳಲ್ಲಿ ಚಿತ್ರ ತೆರೆ ಕಂಡಿತು.

ಬಾಕ್ಸ್​ ಆಫೀಸ್​ನಲ್ಲಿ ಭಾರೀ ಪೈಪೋಟಿ: ‘ಜೈಲರ್’​ ಸಿನಿಮಾಗೆ ಬಹುನಿರೀಕ್ಷಿತ ಚಿತ್ರಗಳಾದ ‘ಭೋಲಾ ಶಂಕರ್​’, ‘ಗದರ್​ 2’, ‘ಓಎಂಜಿ 2’ ಭಾರೀ ಪೈಪೋಟಿ ನೀಡುತ್ತಿದೆ. ಬಾಕ್ಸ್​ ಆಫೀಸ್​ನಲ್ಲಿ ಕಲೆಕ್ಷನ್​ ವಿಚಾರವಾಗಿ ಗುದ್ದಾಟ ನಡೆಯುತ್ತಿದೆ.

ರಜನಿ, ಶಿವಣ್ಣ, ಲಾಲೇಟ, ಚಿರಂಜೀವಿ, ಅಕ್ಷಯ್​, ಸನ್ನಿ ಡಿಯೋಲ್ ಈ ಸ್ಟಾರ್​ ತಾರೆಯರ ಸಿನಿಮಾಗಳು ಒಮ್ಮೆಲೇ ತೆರೆ ಮೇಲೆ ಅಪ್ಪಳಿಸಿದೆ. ಹೀಗಾಗಿ ಇಡೀ ಭಾರತೀಯ ಚಿತ್ರರಂಗದ ಹಿರಿಯ ಮತ್ತು ಸ್ಟಾರ್​ ನಟರ ಸಿನಿಮಾಗಳೇ ಥಿಯೇಟರ್​ಗಳಲ್ಲಿ ರಾರಾಜಿಸುತ್ತಿವೆ.

ಮೊದಲ ದಿನವೇ ದಾಖಲೆ: ‘ಜೈಲರ್’ ಸಿನಿಮಾ ಬಿಡುಗಡೆಯಾದ ದಿನದಂದೇ ಹಲವಾರು ಗಮನಾರ್ಹ ದಾಖಲೆ ಬರೆದಿತ್ತು. ‘2023ರ ಅತಿ ಹೆಚ್ಚು ಗಳಿಕೆಯ ಮೊದಲ ತಮಿಳು ಚಿತ್ರ’, ‘ತಮಿಳುನಾಡಿನಲ್ಲಿ ಅತಿ ದೊಡ್ಡ ಓಪನಿಂಗ್​ ಪಡೆದ 2023ರ ತಮಿಳು ಚಿತ್ರ’, ‘ಯುಎಸ್​ಎಯಲ್ಲಿ 2023ರ ಅತಿ ದೊಡ್ಡ ಭಾರತೀಯ ಪ್ರೀಮಿಯರ್’​, ‘ಸಾಗರೋತ್ತರದಲ್ಲಿ ಅತಿ ದೊಡ್ಡ ಓಪನಿಂಗ್​ ಪಡೆದ 2023ರ ಮೊದಲ ತಮಿಳು ಚಿತ್ರ’.. ಈ ಎಲ್ಲಾ ದಾಖಲೆಗಳನ್ನು ಬಿಡುಗಡೆಯಾದ ಮೊದಲ ದಿನವೇ ‘ಜೈಲರ್​’ ಮಾಡಿದೆ.

ನೆಲ್ಸನ್​ ಆಯಕ್ಷನ್​ ಕಟ್​ ‘ಜೈಲರ್​’ನಲ್ಲಿ ರಜನಿಕಾಂತ್​ಗೆ ನಾಯಕಿಯಾಗಿ ಬಹುಭಾಷಾ ತಾರೆ ತಮನ್ನಾ ಭಾಟಿಯಾ ನಟಿಸಿದ್ದಾರೆ. ಜೊತೆಗೆ ಕರುನಾಡ ಚಕ್ರವರ್ತಿ ಶಿವ ರಾಜ್​ಕುಮಾರ್​ ಮತ್ತು ಮಾಲಿವುಡ್​ ಸೂಪರ್​ಸ್ಟಾರ್​ ಮೋಹನ್​ಲಾಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ, ರಮ್ಯಾ ಕೃಷ್ಣನ್​​, ಯೋಗಿ ಬಾಬು, ವಸಂತ್​ ರವಿ​ ಸೇರಿದಂತೆ ಅನೇಕರು ಕಾಣಿಸಿಕೊಂಡಿದ್ದಾರೆ. ​ಸೂಪರ್​ಸ್ಟಾರ್​ ರಜನಿ ಎರಡು ವರ್ಷಗಳ ನಂತರ ಹಿರಿತೆರೆಗೆ ಮರಳಿದ್ದು, ಸೋಲಿಲ್ಲದ ಸರದಾರನಾಗಿ ತಮ್ಮ ಸ್ಥಾನವನ್ನು ಮರಳಿ ಪಡೆದಿದ್ದಾರೆ. ನಟ ಕೊನೆಯದಾಗಿ ‘ಅಣ್ಣಾತ್ತೇ’ಯಲ್ಲಿ ಕಾಣಿಸಿಕೊಂಡಿದ್ದರು.