ಅಡಿಕೆ, ಕಾಳುಮೆಣಸು ಬೆಳೆಗಳಿಗೆ ವಿಮಾ ಯೋಜನೆ ಲಭ್ಯ

ಉಡುಪಿ :2019-20 ನೇ ಸಾಲಿನ ಮರುವಿನ್ಯಾಸಗೊಳಿಸಿದ ಹವಾಮಾನಾಧಾರಿತ ಬೆಳೆ ವಿಮಾ ಯೋಜನೆಯಡಿ ಉಡುಪಿ ಜಿಲ್ಲೆಗೆ ಒಳಪಡಿಸಲಾಗಿರುವ ಅಡಿಕೆ ಮತ್ತು ಕಾಳುಮೆಣಸು ಬೆಳೆಗಳಿಗೆ ಬೆಳೆ ಸಾಲ ಪಡೆದ ರೈತರನ್ನು ಕಡ್ಡಾಯವಾಗಿ ಹಾಗೂ ಬೆಳೆ ಸಾಲ ಪಡೆಯದೇ ಇರುವ ರೈತರಿಗೆ ಐಚ್ಛಿಕವಾಗಿ ವಿಮೆಗೆ ಒಳಪಡಿಸುವ ಸಲುವಾಗಿ, ಜಿಲ್ಲೆಯಲ್ಲಿ ಅಧಿಸೂಚಿಸಲ್ಪಟ್ಟ ಗ್ರಾಮ ಪಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅಡಿಕೆ ಮತ್ತು ಕಾಳುಮೆಣಸು ಬೆಳೆಗೆ ವಿಮಾ ಮೊತ್ತವನ್ನು ನೀಡುವ ಸಲುವಾಗಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.

     ಅಡಿಕೆ ಬೆಳೆಗೆ 154 ಗ್ರಾಮ ಪಂಚಾಯತ್‍ಗಳು ಹಾಗೂ 4 ನಗರ ಸ್ಥಳೀಯ ಸಂಸ್ಥೆಗಳು ಮತ್ತು ಕಾಳು ಮೆಣಸು ಬೆಳೆಗೆ 101 ಗ್ರಾಮ ಪಂಚಾಯತ್‍ಗಳು ಹಾಗೂ 3 ನಗರ ಸ್ಥಳೀಯ ಸಂಸ್ಥೆಗಳ ವಿಮಾ ಘಟಕಗಳಿರುತ್ತವೆ. ಅಡಿಕೆಗೆ 1.28 ಲಕ್ಷ ವಿಮಾ ಮೊತ್ತಕ್ಕೆ ಶೇ. 5 ರಂತೆ ಪ್ರತೀ ಹೆಕ್ಟೇರ್‍ಗೆ 6400 ರೂ. ಹಾಗೂ ಕಾಳುಮೆಣಸಿಗೆ 0.47 ಲಕ್ಷ ವಿಮಾ ಮೊತ್ತಕ್ಕೆ ಶೇ. 5 ರಂತೆ ಪ್ರತೀ ಹೆಕ್ಟೇರ್‍ಗೆ 2350 ರೂ. ವಿಮಾ ಕಂತನ್ನು ಪಾವತಿಸಬೇಕಾಗಿರುತ್ತದೆ.

   ವಿಮಾ ಕಂತನ್ನು ಜೂನ್ 30 ರೊಳಗಾಗಿ ರೈತರು ರಾಷ್ಟ್ರೀಕೃತ /ಸಹಕಾರಿ/ ವಾಣಿಜ್ಯ ಬ್ಯಾಂಕ್‍ಗಳ ಮುಖಾಂತರ ಪಾವತಿಸಿ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ. ಐಚ್ಚಿಕವಾಗಿ ವಿಮೆಗೆ ಒಳಪಡುವ ರೈತರು ಪ್ರಸ್ತುತ ಸಾಲಿನ ಪಹಣಿ, ಬ್ಯಾಂಕ್ ಪುಸ್ತಕದ ಜೆರಾಕ್ಸ್ ಪ್ರತಿ, ಆಧಾರ್ ಕಾರ್ಡ್ ಪ್ರತಿ ಮತ್ತು ಸ್ವಯಂ ಘೋಷಿತ ಬೆಳೆ ವಿವರ ಸಲ್ಲಿಸುವಂತೆ ಜಿಲ್ಲಾ ಪಂಚಾಯತ್ ತೋಟಗಾರಿಕೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.