ಇಂಡಿಯನ್ ವೆಲ್ಡಿಂಗ್ ಸೊಸೈಟಿ ಮಂಗಳೂರು ವಿಭಾಗ ಉದ್ಘಾಟನೆ

ನಿಟ್ಟೆ: ಹೆಚ್ಚಿನ ಉದ್ಯೋಗಾವಕಾಶ ಸೃಷ್ಠಿಗೆ ಉಪಯುಕ್ತವಾಗುವ ವಿವಿಧ ಬಗೆಯ ತಂತ್ರಜ್ಞಾನದ ಆಯಾಮಗಳ ಬಗೆಗೆ ನಮ್ಮಲ್ಲಿ ಆಸಕ್ತಿ ಅಗತ್ಯ’ ಎಂದು ನಿಟ್ಟೆ ಸಮೂಹ ಸಂಸ್ಥೆಗಳ ಅಧ್ಯಕ್ಷ ಶ್ರೀ ಎನ್.ವಿನಯ ಹೆಗ್ಡೆ ಅಭಿಪ್ರಾಯಪಟ್ಟರು.ಅವರು ಇಂಡಿಯನ್ ವೆಲ್ಡಿಂಗ್ ಸೊಸೈಟಿಯ ಮಂಗಳೂರು ವಿಭಾಗವನ್ನು ಮಾ.೧೬ ರಂದು ಮಂಗಳೂರಿನ ನಿಟ್ಟೆ ಎಜುಕೇಶನ್ ಇಂಟರ್‌ನ್ಯಾಷನಲ್‌ನಲ್ಲಿ ಉದ್ಘಾಟಿಸಿ ಮಾತನಾಡಿದರು. ‘ಮೆಕ್ಯಾನಿಕಲ್ ವಿಭಾಗದಲ್ಲಿ ಇನ್ನೂ ಹೆಚ್ಚಿನ ಸಂಶೋಧನೆಗಳು ನಡೆದು ವೆಲ್ಡಿಂಗ್‌ನಂತಹ ತಂತ್ರಜ್ಞಾನವನ್ನು ಹೆಚ್ಚೆಚ್ಚು ನವೀನಗೊಳಿಸುವ ಕಾರ್ಯ ನಡೆಯಬೇಕು’ ಎಂದರು.
ಉದ್ಘಾಟನಾ ಕಾರ್ಯಕ್ರಮದ ಅನಂತರ ‘ರೀಸೆಂಟ್ ಟ್ರೆಂಡ್ಸ್ ಇನ್ ವೆಲ್ಡಿಂಗ್’ ಎಂಬ ವಿಷಯದ ಬಗೆಗೆ ಒಂದು ದಿನದ ಕಾರ್ಯಾಗಾರ ನಡೆಯಿತು. ಈ ಕಾರ್ಯಕ್ರಮದಲ್ಲಿ ವಿವಿಧ ಸಂಸ್ಥೆಗಳ ೬೦ ಮಂದಿ ಭಾಗವಹಿಸಿದ್ದರು.

ಇಂಡಿಯನ್ ವೆಲ್ಡಿಂಗ್ ಸೊಸೈಟಿ ಮಂಗಳೂರು ವಿಭಾಗದ ಅಧ್ಯಕ್ಷರಾಗಿ ನಿಟ್ಟೆ ತಾಂತ್ರಿಕ ಕಾಲೇಜಿನ ಮೆಕ್ಯಾನಿಕಲ್ ವಿಭಾಗ ಮುಖ್ಯಸ್ಥ ಡಾ.ಶಶಿಕಾಂತ್ ಕರಿಂಕ, ಉಪಾಧ್ಯಕ್ಷರಾಗಿ ಲಕ್ಷ್ಮೀ ಕ್ರೈಯೋಜೆನಿಕ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಎಂ.ಜೆ ಶೆಟ್ಟಿ, ಕಾರ್ಯದರ್ಶಿಯಾಗಿ ವರುಣ್ ಇಂಜಿನಿಯರಿಂಗ್ ಕಾರ್ಪೊರೇಶನ್‌ನ ಸಿ.ಇ.ಒ ಸುಧೀರ್ ಜೆ ಶೆಟ್ಟಿ, ಖಜಾಂಚಿಯಾಗಿ ಎಂ.ಸಿ.ಎಫ್‌ನ ಡೆಪ್ಯೂಟಿ ಜನರಲ್ ಮ್ಯಾನೇಜರ್ ಗಜಾನನ್ ಎಸ್ ಹೆಗ್ಡೆ ಎರಡು ವರ್ಷಗಳ ಕಾಲ ಕಾರ್ಯನಿರ್ವಹಿಸಲಿರುವರು.
ಡಾ.ಶಶಿಕಾಂತ್ ಕರಿಂಕ ಸ್ವಾಗತಿಸಿದರು. ನಿಟ್ಟೆ ತಾಂತ್ರಿಕ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಪ್ರೊ.ಡಾ. ಮುರಳೀಧರ್ ಹಾಗೂ ಸಹಪ್ರಾಧ್ಯಾಪಕ ಡಾ.ವಿಜೀಶ್ ಪದಾಧಿಕಾರಿಗಳನ್ನು ಪರಿಚಯಿಸಿದರು. ಸಹಪ್ರಾಧ್ಯಾಪಕ ದಿವಿಜೇಶ್ ಪ್ರಾರ್ಥಿಸಿದರು. ವರುಣ್ ಇಂಜಿನಿಯರಿಂಗ್ ಕಾರ್ಪೊರೇಶನ್‌ನ ಸಿ.ಇ.ಒ ಸುಧೀರ್ ಜೆ ಶೆಟ್ಟಿ ವಂದಿಸಿದರು. ಸಹಪ್ರಾಧ್ಯಾಪಕ ಮೆಲ್ವಿನ್ ಕಾರ್ಯಕ್ರಮ ನಿರೂಪಿಸಿದರು.