ಬೆಂಗಳೂರು-ಉಡುಪಿ-ಕಾರವಾರ-ವಾಸ್ಕೋ ಮಧ್ಯೆ ಹೊಸ ರೈಲು: ಕರಾವಳಿಯ ದಶಕಗಳ ಕನಸು ಈಗ ನನಸು

ಉಡುಪಿ: ಬೆಂಗಳೂರು-ಉಡುಪಿ-ಕಾರವಾರ-ವಾಸ್ಕೋ ಮಧ್ಯೆ ಮಾನ್ಯ ರಾಜ್ಯ ರೈಲ್ವೇ ಖಾತೆ ಸಚಿವರಾದ  ಸುರೇಶ್ ಅಂಗಡಿಯವರು ಹೊಸ ರೈಲನ್ನು ಘೋಷಿಸಿದ್ದಾರೆ, ಈ ರೈಲು ಪಡೀಲ್ ಬೈಪಾಸ್ ಮೂಲಕ ಉಡುಪಿಯನ್ನು ತಲುಪಲಿದೆ. ಈ ರೈಲು ಸೇವೆಯು ಮಂಗಳೂರು ಸೆಂಟ್ರಲ್ ಹಾಗೂ ಜಂಕ್ಷನ್ ನಿಲ್ದಾಣಗಳಲ್ಲಿ ಎರಡೂವರೆ ಗಂಟೆಗಳಷ್ಟು ಕಾಲದ ಅನಗತ್ಯ ಕಾಯುವಿಕೆಯನ್ನು ತಪ್ಪಿಸಿ, ಬೆಂಗಳೂರು-ಉಡುಪಿ/ಕುಂದಾಪುರ ಮಧ್ಯೆ ರೈಲು ಪ್ರಯಾಣ ಸಮಯವನ್ನು ಮೂರು ಗಂಟೆಗಳಷ್ಟು ಕಾಲಕಡಿತಗೊಳಿಸುವ ಮೂಲಕ ಬೆಂಗಳೂರಿನಲ್ಲಿ ನೆಲೆಸಿರುವ ಕರಾವಳಿಯ ಜನತೆ ಕಡಿಮೆ ಸಮಯದಲ್ಲಿ ಕರಾವಳಿ ಕರ್ನಾಟಕವನ್ನು ತಲುಪುವಂತೆ ಮಾಡುವುದು.

ದೆಹಲಿಯಲ್ಲಿ ಮಾನ್ಯ ಸಚಿವರಿಗೆ ಸಂಸದೆ ಶೋಭಾ ಕರಂದ್ಲಾಜೆ, ಕರಾವಳಿಯ ಈ ಬಹು ದೊಡ್ಡ ಬೇಡಿಕೆಯನ್ನು ಸಲ್ಲಿಸಿದ ಸಂದರ್ಭ, ಮಾನ್ಯ ಸಚಿವರು ಖುದ್ದಾಗಿ ಸಂಸದರ ಸಮ್ಮುಖದಲ್ಲಿ ರೈಲ್ವೇ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಂಡಿರುತ್ತಾರೆ. ಕರಾವಳಿಗೆ ನ್ಯಾಯಯುತವಾದ ರೈಲನ್ನು ಒದಗಿಸುವ ಸಂಸದರ ಅವಿರತ ಪ್ರಯತ್ನ ಇಂದು ಫಲಪ್ರದವಾಗಿದೆ ಎಂದು ಸಂಸದೆಯವರ ಕಚೇರಿ ಪ್ರಕಟನೆ ತಿಳಿಸಿದೆ.

​​ಸಂಸದೆ ಶೋಭಾ ಕರಂದ್ಲಾಜೆಯವರ  ಪ್ರಯತ್ನದಿಂದಾಗಿ ಆರಂಭಗೊಳ್ಳುತ್ತಿರುವ ಈ ರೈಲು ಬೆಂಗಳೂರಿನಿಂದ ಸಂಜೆ 06:45ಕ್ಕೆ ಹೊರಟು, ಬೆಳಗ್ಗೆ 04:50ಕ್ಕೆ ಉಡುಪಿ, 05:18ಕ್ಕೆ ಕುಂದಾಪುರಕ್ಕೆ ತಲುಪುವುದು. ಸಂಜೆ 04:40ಕ್ಕೆ ವಾಸ್ಕೋದಿಂದ ಆರಂಭಗೊಂಡು, ರಾತ್ರಿ 10:54ಕ್ಕೆ ಕುಂದಾಪುರ, 11:24ಕ್ಕೆ ಉಡುಪಿಯಿಂದ ಹೊರಟು ಬೆಂಗಳೂರಿಗೆ ಬೆಳಿಗ್ಗೆ ಸುಮಾರು 09:ಗಂಟೆಗೆ ತಲುಪಲಿದೆ.ವಾಸ್ಕೋ-ಬೆಂಗಳೂರು ಪ್ರಯಾಣ ಸಮಯವನ್ನು ಇನ್ನಷ್ಟು ಸುಧಾರಣೆಗೊಳಿಸಲಾಗುವುದು ಎಂಬ ಭರವಸೆಯುರೈಲ್ವೆ ಅಧಿಕಾರಿಗಳಿಂದ ದೊರಕಿದೆ. ಈ ಮೂಲಕ ಕರಾವಳಿ ಕರ್ನಾಟಕದ (ಉಡುಪಿ/ಕುಂದಾಪುರ/ಬೈಂದೂರು/ಕಾರವಾರದ) ದಶಕಗಳ ಬೇಡಿಕೆಯು ಈಡೇರಿದಂತಾಗಿದೆ.

ಉಡುಪಿ-ಕುಂದಾಪುರದ ಪ್ರಯಾಣಿಕರಿಗೆ ಈ ರೈಲು ಬೆಂಗಳೂರು ಹಾಗೂ ವಾಸ್ಕೋವನ್ನು ಸಂಪರ್ಕಿಸಲುಬೇಕಾದ ಎರಡು ರೈಲಿನ ಸೌಲಭ್ಯವನ್ನು ಒಂದೇ ರೈಲಿನ ಮೂಲಕ ಕಲ್ಪಿಸಿಕೊಡುತ್ತಲಿದೆ ಹಾಗೂ ಗೋವಾ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ನಿಟ್ಟಿನಲ್ಲಿ ಅವಶ್ಯವಿದ್ದ ರೈಲಿನ ಬೇಡಿಕೆಯನ್ನೂ ಈಡೇರಿಸಲಿದೆ. ಈ ಹೊಸ ರೈಲು ಇನ್ನು ಕೆಲವೇ ಕೆಲವು ದಿನಗಳಲ್ಲಿ ಓಡಾಟವನ್ನು ಆರಂಭಿಸಲಿದೆ ಎಂದು ಮಾನ್ಯ ಸಚಿವರು ಹಾಗೂ ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿರುತ್ತಾರೆ ಎಂದು ಪ್ರಕಟನೆ ತಿಳಿಸಿದೆ.