ಹೊಸದಿಲ್ಲಿ: ವಾರ್ಷಿಕ ಆದಾಯ ತೆರಿಗೆ ಮತ್ತಷ್ಟು ಕಡಿತ?

ಹೊಸದಿಲ್ಲಿ: ದೇಶದಲ್ಲಿ ತೆರಿಗೆದಾರರಿಗೆ ಸಿಹಿ ಸುದ್ದಿಯೊಂದು ಶೀಘ್ರದಲ್ಲೇ ಹೊರಬೀಳುವ ನಿರೀಕ್ಷೆ ಇದೆ. ವಾರ್ಷಿಕ 5 ಲಕ್ಷದಿಂದ 10 ಲಕ್ಷ ರೂ. ವಾರ್ಷಿಕ ಆದಾಯ ಗಳಿಸುತ್ತಿರುವವರಿಗೆ ಶೇ.10ರಷ್ಟುತೆರಿಗೆ ವಿಧಿಸುವಂತೆ ಸರ್ಕಾರ ರಚಿಸಿದ ಉನ್ನತ ಮಟ್ಟದ ಸಮಿತಿಯೊಂದು ಶಿಫಾರಸು ಮಾಡಿದೆ. ಸದ್ಯ ಈ ಹಂತದ ತೆರಿಗೆದಾರರಿಗೆ ಶೇ.20 ತೆರಿಗೆ ವಿಧಿಸಲಾಗುತ್ತಿದ್ದು, ಅರ್ಧದಷ್ಟು ಕಡಿಮೆಯಾಗಲಿದೆ.

ನೇರ ತೆರಿಗೆ ಸಂಹಿತೆ ಪರಿಷ್ಕರಣೆ ಸಂಬಂಧ ನೇಮಕ ಮಾಡಲಾಗಿದ್ದ ಸಿಬಿಡಿಟಿ ಅಧ್ಯಕ್ಷ ಅಖೀಲೇಶ್‌ ರಂಜನ್‌ ನೇತೃತ್ವದ ಕಾರ್ಯ ಪಡೆ ತನ್ನ ವರದಿಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಆ.19ರಂದು ಸಲ್ಲಿಸಿದೆ. 10 ಲಕ್ಷದಿಂದ 20 ಲಕ್ಷ ರೂ. ಆದಾಯ ಗಳಿಸುತ್ತಿರುವವರಿಗೆ ಶೇ.30ರ ಬದಲು ತೆರಿಗೆಯನ್ನು ಶೇ.20ಕ್ಕೆ ಇಳಿಸುವ ಪ್ರಸ್ತಾಪವೂ ವರದಿಯಲ್ಲಿದೆ. ಇವುಗಳನ್ನು ಕೇಂದ್ರ ಸರಕಾರ ಒಪ್ಪಿಕೊಂಡಲ್ಲಿ ದೇಶದ ತೆರಿಗೆದಾರರಿಗೆ ಸಿಹಿ ಸುದ್ದಿ ಪಕ್ಕಾ ಆಗಲಿದೆ.

ಪ್ರಸ್ತುತ 2.5 ಲಕ್ಷ ರೂ.ವರೆಗೆ ಆದಾಯ ಉಳ್ಳವರಿಗೆ ಶೇ.5ರಷ್ಟುತೆರಿಗೆ ಇದೆ. ಆದರೆ, ಸರ್ಕಾರ ತೆರಿಗೆ ಪಾವತಿಯ ಮೇಲೆ ರಿಯಾಯಿತಿ ಘೋಷಿಸಿರುವುದರಿಂದ 5 ಲಕ್ಷ ರು.ವರೆಗೂ ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ. ಆ ಬಳಿಕ 5 ಲಕ್ಷ ರೂ.ನಿಂದ 10 ಲಕ್ಷ ರೂ. ವರೆಗೆ ಆದಾಯ ಗಳಿಸುತ್ತಿರುವವರು ಶೇ.20ರಷ್ಟು ಹಾಗೂ 10 ಲಕ್ಷಕ್ಕಿಂತಲೂ ಹೆಚ್ಚಿನ ಆದಾಯ ಉಳ್ಳವರು ಶೇ.30ರಷ್ಟಆದಾಯ ತೆರಿಗೆ ಪಾವತಿಸಬೇಕಿದೆ.  ಈ ಸಮಿತಿಯ ಶಿಫಾರಸುಗಳನ್ನು ಸರ್ಕಾರ ಇನ್ನೂ ಸಾರ್ವಜನಿಕವಾಗಿ ಬಹಿರಂಗಪಡಿಸಿಲ್ಲ. ಅಲ್ಲದೇ ಈ ಶಿಫಾರಸುಗಳನ್ನು ಜಾರಿ ಮಾಡಲು ಸರ್ಕಾರ ಕಾಲಮಿತಿ ನಿಗದಿಪಡಿಸಿದೆಯೇ ಎನ್ನುವುದೂ ಕೂಡ ತಿಳಿದುಬಂದಿಲ್ಲ.