ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಆಡಳಿತದಲ್ಲಿ ಸಾಂವಿಧಾನಿಕ ಸಂಸ್ಥೆಗಳ ದುರ್ಬಳಕೆಯಿಂದ ದೇಶದ ಚುನಾವಣಾ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಪ್ರತಿಪಕ್ಷಗಳ ‘ಐಎನ್ಡಿಐಎ’ ಮೈತ್ರಿಕೂಟ ಕಳವಳ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ, ಚುನಾವಣಾ ಆಯೋಗದ ಮತಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯನ್ನು ಕೂಡಲೇ ರದ್ದುಗೊಳಿಸಬೇಕು ಮತ್ತು ಮುಂದಿನ ಚುನಾವಣೆಗಳನ್ನು ಇವಿಎಂ ಬದಲು ಬ್ಯಾಲೆಟ್ ಪೇಪರ್ ಮೂಲಕ ನಡೆಸಬೇಕು ಎಂದು ಕೋರಿ ಮೈತ್ರಿಕೂಟದ 24 ಪಕ್ಷಗಳ ನಾಯಕರು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರಿಗೆ ಪತ್ರ ಬರೆದಿದ್ದಾರೆ.
- ಕೇಂದ್ರ ಮೋದಿ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ಗೆ ‘ಐಎನ್ಡಿಐಎ’ ಮೈತ್ರಿಕೂಟದಿಂದ ಪತ್ರ
- ಮೋದಿ- ಆಡಳಿತದಲ್ಲಿ ದೇಶದ ಚುನಾವಣಾ ಪ್ರಜಾಪ್ರಭುತ್ವ ವ್ಯವಸ್ಥೆ ಗಂಭೀರ ಅಪಾಯಕ್ಕೆ ಸಿಲುಕಿದೆ ಎಂದು ಆರೋಪ
- ಎಸ್ಐಆರ್ ಕೂಡಲೇ ರದ್ದುಗೊಳಿಸಬೇಕು, ಇವಿಎಂ ಬದಲು ಮತಪತ್ರ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಆಗ್ರಹ
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಆಡಳಿತದಲ್ಲಿ ದೇಶದ ಚುನಾವಣಾ ಪ್ರಜಾಪ್ರಭುತ್ವ ವ್ಯವಸ್ಥೆ ಗಂಭೀರ ಅಪಾಯಕ್ಕೆ ಸಿಲುಕಿದೆ ಎಂದು ಕಳವವಳ ವ್ಯಕ್ತಪಡಿಸಿರುವ ಪ್ರತಿಪಕ್ಷಗಳ ಮೈತ್ರಿಕೂಟ ‘ಐಎನ್ಡಿಐಎ’, ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡಿರುವ ಕೇಂದ್ರ ಸರಕಾರವು ಗುಪ್ತ ಕಾರ್ಯಸೂಚಿ ಜಾರಿಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದೆ.
ಕೇಂದ್ರ ಚುನಾವಣಾ ಆಯೋಗ ಕೈಗೊಂಡಿರುವ ಮತಪಟ್ಟಿ ವಿಶೇಷ ಸಮಗ್ರ ಮತಪಟ್ಟಿ ಪರಿಷ್ಕರಣೆ (ಎಸ್ಐಆರ್) ಕೂಡಲೇ ರದ್ದುಗೊಳಿಸಬೇಕು, ಚುನಾವಣಾ ಮತದಾನಕ್ಕೆ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಬದಲು ಮತಪತ್ರ ವ್ಯವಸ್ಥೆ ಮರು ಸ್ಥಾಪಿಸಬೇಕು ಎಂದು ಕೋರಿ ಸುಪ್ರೀಂ ಕೋರ್ಟ್ಗೆ ಐಎನ್ಡಿಎಐ ಪತ್ರ ಬರೆದಿದೆ.
ಕಾಂಗ್ರೆಸ್ ಸೇರಿದಂತೆ ‘ಐಎನ್ಡಿಐಎ’ ಮೈತ್ರಿಕೂಟದ 24 ಪಕ್ಷಗಳ ನಾಯಕರು ಸಹಿ ಮಾಡಿದ ಪತ್ರವನ್ನು ರಾಜ್ಯಸಭೆ ಸದಸ್ಯ ಕಪಿಲ್ ಸಿಬಲ್ ಮೂಲಕ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ಗೆ ಅವರಿಗೆ ಕಳುಹಿಸಲಾಗಿದೆ. ”ಸಾಂವಿಧಾನಿಕ ಸಂಸ್ಥೆಗಳ ಮೇಲಿನ ದಬ್ಬಾಳಿಕೆ ಮುಂದುವರಿಸಲು ಅವಕಾಶ ನೀಡಿದರೆ ಭವಿಷ್ಯದಲ್ಲಿ ಚುನಾವಣಾ ಪ್ರಜಾಪ್ರಭುತ್ವ ವ್ಯವಸ್ಥೆ ನಾಶವಾಗಲಿದೆ. ಸರಕಾರದ ಕಾರ್ಯಸೂಚಿ ಜಾರಿಗೊಳಿಸಲು ಬಿಟ್ಟರೆ ಸಂಸದೀಯ ಪ್ರಜಾತಂತ್ರ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಉಂಟಾಗಲಿದೆ,” ಎಂದು ಪತ್ರದಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.
ಹೊಸದಿಲ್ಲಿಯಲ್ಲಿ ಪತ್ರದ ಸಾರಾಂಶವನ್ನು ಮಾಧ್ಯಮಗಳಿಗೆ ಬಿಡುಗಡೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್, ”ಮೋದಿ-ಶಾ ಆಡಳಿತದಲ್ಲಿ ದೇಶದ ಚುನಾವಣಾ ಪ್ರಜಾಪ್ರಭುತ್ವ ವ್ಯವಸ್ಥೆ ಗಂಭೀರ ಅಪಾಯದಲ್ಲಿದೆ. ಸಾಂವಿಧಾನಿಕ ಸಂಸ್ಥೆಗಳಲ್ಲಿನಿಷ್ಪಕ್ಷಪಾತ ಹಾಗೂ ಪಾರದರ್ಶಕ ಆಡಳಿತ ರೂಪಿಸುವ ಹಿತದೃಷ್ಟಿಯಿಂದ ನ್ಯಾಯಾಲಯ ಮಧ್ಯಪ್ರವೇಶಿಸಬೇಕಿದೆ. ಚುನಾವಣಾ ಆಯೋಗವನ್ನು ಸರಿದಾರಿಗೆ ತರಲು ನ್ಯಾಯಾಂಗ ವ್ಯವಸ್ಥೆ ದೃಢ ಕ್ರಮ ಕೈಗೊಳ್ಳುವ ವಿಶ್ವಾಸವಿದೆ,” ಎಂದು ಹೇಳಿದರು.
ಪ್ರತಿಪಕ್ಷಗಳ ಪತ್ರದಲ್ಲೇನಿದೆ?
”ಚುನಾವಣಾ ಆಯೋಗ ನಡೆಸುತ್ತಿರುವ ಏಕಪಕ್ಷೀಯ ಎಸ್ಐಆರ್ ಪ್ರಕ್ರಿಯೆ ಪ್ರಜಾತಂತ್ರ ವ್ಯವಸ್ಥೆಯ ದುರಂತಕ್ಕೆ ಕನ್ನಡಿಯಾಗಿದೆ. ಕೇಂದ್ರ ಚುನಾವಣಾ ಆಯೋಗದ ಪಕ್ಷಪಾತೀಯ ಧೋರಣೆಗೆ ಸಾಕ್ಷಿಯಾಗಿದೆ. ಮತಪಟ್ಟಿ, ಇವಿಎಂಗಳನ್ನು ತಿರುಚಲಾಗಿದೆ. ದಿಲ್ಲಿ, ಹರಿಯಾಣ, ಮಹಾರಾಷ್ಟ್ರ, ಪಶ್ಚಿಮ ಬಂಗಾಳದಲ್ಲಿದೊಡ್ಡ ಮಟ್ಟದಲ್ಲಿಅಕ್ರಮ ನಡೆಸಿರುವ ಸಾಧ್ಯತೆಗಳಿವೆ,” ಎಂದು ಪತ್ರದಲ್ಲಿ ಆರೋಪಿಸಲಾಗಿದೆ.
”ಪಶ್ಚಿಮ ಬಂಗಾಳದಲ್ಲಿ 27 ಲಕ್ಷ ಜನರ ಮತದಾನದ ಹಕ್ಕು ಕಸಿದುಕೊಳ್ಳಲಾಗಿದೆ. 2.40 ಲಕ್ಷ ಭದ್ರತಾ ಸಿಬ್ಬಂದಿ ನಿಯೋಜಿಸಿ ಚುನಾವಣೆ ನಡೆಸಲಾಗಿದೆ. ಬಿಜೆಪಿ ಪರವಾಗಿ ಕಾರ್ಯ ನಿರ್ವಹಿಸಿದ ಆಯೋಗದ ಕ್ರಮದಿಂದ ಹಲವು ರಾಜ್ಯಗಳಲ್ಲಿಬಿಜೆಪಿ ಅಧಿಕಾರಕ್ಕೆ ಬಂದಿದೆ,” ಎಂದು ಪತ್ರದಲ್ಲಿಆರೋಪ ಮಾಡಲಾಗಿದೆ.
ಪತ್ರದ ಮುಖ್ಯಾಂಶಗಳು
- ಭವಿಷ್ಯದಲ್ಲಿಚುನಾವಣಾ ಸನಿಹದಲ್ಲಿಎಸ್ಐಆರ್ ಕೈಗೊಳ್ಳದಂತೆ ಆಯೋಗವನ್ನು ನಿಯಂತ್ರಿಸಬೇಕು
- ಚುನಾವಣೆಯ ಐದು ವರ್ಷದ ಮೊದಲು ಎಸ್ಐಆರ್ ಪೂರ್ಣಗೊಳಿಸಲು ನಿರ್ದೇಶನ ನೀಡಬೇಕು
- ಮುಂದಿನ ಚುನಾವಣೆಗಳನ್ನು ಇವಿಎಂ ಬದಲು ಬ್ಯಾಲೆಟ್ ಪೇಪರ್ ಮೂಲಕ ನಡೆಸಲು ಸೂಚಿಸಬೇಕು
- ಚುನಾವಣಾ ಪ್ರಕ್ರಿಯೆಯ ಸಮಗ್ರತೆ, ವಿಶ್ವಾಸಾರ್ಹತೆ ಮರುಸ್ಥಾಪಿಲು ನ್ಯಾಯಾಂಗ ಕ್ರಮ ವಹಿಸಬೇಕು

















