ಜೂನ್ 23ಕ್ಕೆ ಉದ್ಘಾಟನೆ: ಯುವ ಪ್ರತಿಭೆಗಳಿಗಾಗಿ ಕ್ರೀಡಾಂಗಣ ನಿರ್ಮಿಸಿದ ಕ್ರಿಕೆಟಿಗ ಟಿ.ನಟರಾಜನ್

ಚೆನ್ನೈ (ತಮಿಳುನಾಡು): ಸದ್ಯ ಭಾರತ ಕ್ರಿಕೆಟ್ ತಂಡದಿಂದ ಹೊರಬಿದ್ದಿರುವ ಎಡಗೈ ವೇಗಿ ಟಿ. ನಟರಾಜನ್​ ನಿರ್ಮಿಸಿರುವ ಕ್ರಿಕೆಟ್​​ ಮೈದಾನ ಇದೇ ತಿಂಗಳ 23 ರಂದು ಉದ್ಘಾಟನೆ ಕಾಣಲಿದೆ. ಇಲ್ಲಿ ಕ್ರಿಕೆಟರ್ಸ್​ಗೆ ಬೇಕಾದ ಎಲ್ಲ ಸೌಲಭ್ಯಗಳಿವೆ.
ಯಾರ್ಕರ್​ ಮೂಲಕ ಗಮನ ಸೆಳೆದ ಭಾರತೀಯ ಎಡಗೈ ವೇಗದ ಬೌಲರ್ ಟಿ.

ನಟರಾಜನ್ ಅವರು ತಮ್ಮ ಸ್ವಂತ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಿದ್ದು, ಜೂನ್​ 23 ರಂದು ಉದ್ಘಾಟನೆಯಾಗಲಿದೆ. ಇದಕ್ಕೆ ‘ನಟರಾಜನ್ ಕ್ರಿಕೆಟ್ ಮೈದಾನ’ ಎಂದು ನಾಮಕರಣ ಮಾಡಲಾಗಿದೆ. ತಮಿಳುನಾಡಿನ ಸೇಲಂ ಜಿಲ್ಲೆಯ ಚಿನ್ನಪ್ಪಂಪಟ್ಟಿಯಲ್ಲಿ ಇದು ತಲೆ ಎತ್ತಿದೆ.

ಈ ಬಗ್ಗೆ ಟ್ವೀಟ್​ ಮಾಡಿ ಮಾಹಿತಿ ನೀಡಿರುವ ಕ್ರಿಕೆಟಿಗ, ನನ್ನ ಕನಸಿನ ಸಾಕಾರ ಯೋಜನೆಯಾದ ‘ನಟರಾಜನ್ ಕ್ರಿಕೆಟ್ ಗ್ರೌಂಡ್’ ಅನ್ನು ಜೂನ್ 23, 2023 ರಂದು ಸೇಲಂ ಜಿಲ್ಲೆಯ ಚಿನ್ನಪ್ಪಂಪಟ್ಟಿಯಲ್ಲಿ ಪ್ರಾರಂಭಿಸಲಿದ್ದೇವೆ. ಇದು ತುಂಬಾ ಸಂತೋಷದ ಸಂಗತಿ ಎಂದು ಬರೆದುಕೊಂಡಿದ್ದಾರೆ. ಆಹ್ವಾನ ಪತ್ರಿಕೆಯನ್ನೂ ಹಂಚಿಕೊಂಡಿದ್ದಾರೆ.

ಭಾರತದ ವಿಕೆಟ್ ಕೀಪರ್, ಬ್ಯಾಟರ್ ಆಗಿರುವ ದಿನೇಶ್ ಕಾರ್ತಿಕ್ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಅವರು ಅಂದು ಬೆಳಗ್ಗೆ 9.30ಕ್ಕೆ ಕ್ರಿಕೆಟ್ ಮೈದಾನದ ಉದ್ಘಾಟನೆ ನೆರವೇರಿಸಲಿದ್ದಾರೆ. ಇದಲ್ಲದೇ, ಐಪಿಎಲ್​ ಫ್ರಾಂಚೈಸಿಯಾದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಾಶಿ ವಿಶ್ವನಾಥನ್, ತಮಿಳುನಾಡು ಕ್ರಿಕೆಟ್ ಸಂಸ್ಥೆಯ ಅಧ್ಯಿಕ್ಷ ಡಾ. ಅಶೋಕ್​ ಸಿಗಮಣಿ ಮತ್ತು ಚಲನಚಿತ್ರ ನಟ ಯೋಗಿ ಬಾಬು ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿರುವರು ಎಂದು ತಿಳಿದು ಬಂದಿದೆ.

ನಟರಾಜನ್​ ಕನಸು: ತಮಿಳುನಾಡಿನ ಸೇಲಂ ಜಿಲ್ಲೆಯ ಚಿನ್ನಪ್ಪಂಪಟ್ಟಿ ಗ್ರಾಮದವರೇ ಆದ ಕ್ರಿಕೆಟಿಗ ಟಿ.ನಟರಾಜನ್​ ಅವರಿಗೆ ತಮ್ಮ ಊರಿನಲ್ಲಿ ಕ್ರಿಕೆಟ್​ ಮೈದಾನ ನಿರ್ಮಿಸಬೇಕು ಎಂಬ ಕನಸಿತ್ತು. ಇದೀಗ ನನಸಾಗುತ್ತಿದೆ. ಕ್ರಿಕೆಟ್​ ಗ್ರೌಂಡ್​ ನಿರ್ಮಾಣದ ಹಲವು ಹಂತಗಳ ಚಿತ್ರ, ವಿಡಿಯೋಗಳನ್ನು ಅವರು ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಳ್ಳುತ್ತಾ ಬಂದಿದ್ದರು. ಸ್ವತಃ ಅವರೇ ಮೈದಾನ ನಿರ್ಮಾಣ ಕೆಲಸದಲ್ಲೂ ತೊಡಗಿಸಿಕೊಂಡಿದ್ದರು. ನೀರು ಹಾಯಿಸುವುದು, ಪಿಚ್​ ಮೇಲೆ ರೋಲರ್​ ತಿರುಗಿಸುವುದು, ಕೂಲಿ ಕಾರ್ಮಿಕರ ಜೊತೆ ಬೆರೆತು ಕೆಲಸ ಸೇರಿದಂತೆ ಹಲವಾರು ರೀತಿಯಲ್ಲಿ ಭಾಗಿಯಾಗಿದ್ದರು.
2020ರಲ್ಲಿ ಟೀಂ ಇಂಡಿಯಾ ಕದ ತಟ್ಟಿದ ಆಟಗಾರ, ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆಯಾದರು. ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ನಟರಾಜನ್, ಬಳಿಕ ಟಿ20 ಕ್ರಿಕೆಟ್‌ಗೂ ಪಾದಾರ್ಪಣೆ ಮಾಡಿದ್ದರು. ಇದಲ್ಲದೇ, ಟೆಸ್ಟ್ ಸರಣಿಯಲ್ಲೂ ಎಂಟ್ರಿ ಕೊಡುವ ಮೂಲಕ ಒಂದೇ ಪ್ರವಾಸದಲ್ಲಿ ಮೂರು ಮಾದರಿಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಸದ್ಯ ಭಾರತ ತಂಡದಿಂದ ಹೊರಬಿದ್ದಿರುವ ಟಿ. ನಟರಾಜನ್, ಇದುವರೆಗೂ ಭಾರತದ ಪರವಾಗಿ ಒಂದು ಟೆಸ್ಟ್‌, ಎರಡು ಏಕದಿನ ಹಾಗೂ 4 ಟಿ20 ಪಂದ್ಯಗಳನ್ನಾಡಿದ್ದು ಒಟ್ಟಾರೆ 13 ವಿಕೆಟ್ ಕಬಳಿಸಿದ್ದಾರೆ. ತಮಿಳು ಪ್ರೀಮಿಯರ್ ಲೀಗ್‌ನಲ್ಲಿ (ಟಿಪಿಎಲ್) ಅವರು ಬಾಲ್ಸಿ ತಿರುಚ್ಚಿಯನ್ನೂ ಪ್ರತಿನಿಧಿಸುತ್ತಿದ್ದಾರೆ.

ಕ್ರಿಕೆಟ್ ಹಾದಿ..: ಹಳ್ಳಿ ಪ್ರತಿಭೆ ನಟರಾಜನ್​ ಅವರು, ಐಪಿಎಲ್​ನಿಂದ ಉದಯಿಸಿದ ಕ್ರಿಕೆಟರ್​ ಆಗಿದ್ದಾರೆ. 2018ರ ಐಪಿಎಲ್ ಹರಾಜಿನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ಫ್ರಾಂಚೈಸಿಯು ಟಿ. ನಟರಾಜನ್ ಅವರನ್ನು ಖರೀದಿಸಿ, ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ನೀಡಿತ್ತು. ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡಿದ್ದ ನಟರಾಜನ್, ಕರಾರುವಕ್ ಯಾರ್ಕರ್‌ ಮೂಲಕ ಡೆತ್ ಓವರ್‌ ಸ್ಪೆಷಲಿಸ್ಟ್ ಆಗಿ ಗುರುತಿಸಿಕೊಂಡರು. ಯುಎಇನಲ್ಲಿ ನಡೆದ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಆಡಿದ 16 ಪಂದ್ಯಗಳಿಂದ 16 ವಿಕೆಟ್ ಉರುಳಿಸಿ ಗಮನ ಸೆಳೆದಿದ್ದರು.