ಕಾರ್ಕಳ: ಕ್ರಿಯೇಟಿವ್ ಕಾಲೇಜಿನ ಎನ್.ಎಸ್.ಎಸ್ ಶಿಬಿರ ಉದ್ಘಾಟನೆ

ಕಾರ್ಕಳ: ಸೇವಾ ಮನೋಭಾವನೆ ಹಾಗೂ ಸಹಬಾಳ್ವೆ ಮೂಲಕ ಬದುಕು ಕಲಿಸಲು ಎನ್ ಎಸ್ ಎಸ್ ಸಹಕಾರಿಯಾಗಿದೆ ಎಂದು ಮಾಜಿ ಸಚಿವ ವಿ. ಸುನಿಲ್ ಕುಮಾರ್ ಹೇಳಿದರು.

ಕಾರ್ಕಳ ತಾಲೂಕಿನ ಕ್ರಿಯೆಟಿವ್  ಕಾಲೇಜು ವತಿಯಿಂದ  ಹಿರ್ಗಾನದ ಬಿ.ಎಂ. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ  ಸುಲೋಚನಾ ಸುಂದರ ಶೆಟ್ಟಿ ಕಲಾ ವೇದಿಕೆಯಲ್ಲಿ ನಡೆದ ಕಾಲೇಜಿನ ಮೊದಲ ಎನ್ ಎಸ್‌ ಎಸ್ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಸೇವಾ ಭಾವನೆ ಜೀವನದ ಉತ್ಕರ್ಷಕ್ಕೆ ಭದ್ರ ಬುನಾದಿಯಾಗಿದೆ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗೆ ಹೆಚ್ಚಿನ ಉತ್ತೆಜನ ನೀಡಿದಂತಾಗುತ್ತಿದೆ ಕ್ರಿಯೇಟಿವ್ ಕಾಲೇಜು ಎನ್ ಎಸ್ ಎಸ್ ಶಿಬಿರ ಆಯೋಜನೆ ಮೂಲಕ ಊರಿನ ಹಬ್ಬವನ್ನಾಗಿ ಅಚರಿಸುವುದು ಅಭಿನಂದನಾರ್ಹವಾಗಿದೆ. ಶಿಕ್ಷಣದಲ್ಲಿ ರಾಜ್ಯದ ಗಮನ ಸೆಳೆದಿರುವುದು ಖುಷಿ ತಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಂಗಳೂರು ವಿಭಾಗದ ರಾ.ಸೇ.ಯೋ.ಪ್ರಾಂತೀಯ ವಿಭಾಗಾಧಿಕಾರಿ ಸವಿತಾ ಎರ್ಮಾಳ್ ಮಾತನಾಡಿ ಎನ್ ಎಸ್ ಎಸ್, ಸರಳ ಜೀವನದ ಶೈಲಿ ರೂಪಿಸುತ್ತದೆ. ಅನುಭವ ಮತ್ತು ಪರಿಶ್ರಮಕ್ಕೆ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಹೆಚ್ಚು ಗಮನ ಹರಿಸಲಾಗಿದೆ. ಸೇವೆಯ ಮೂಲಕ ಸಮಾಜದ ಅರಿವು ಮೂಡಿಸುವುದು ರಾಷ್ಟ್ರೀಯ ಸೇವಾ ಯೋಜನೆಯ ಮುಖ್ಯ ಉದ್ದೇಶ. ಇದರಿಂದ ಸ್ವಯಂ ಸೇವಕರ ವ್ಯಕ್ತಿತ್ವ ವಿಕಸನವಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿದ್ವಾನ್ ಗಣಪತಿ ಭಟ್ ಮಾತನಾಡಿ, ಪ್ರತಿಫಲಾಪೇಕ್ಷೆ ಇಲ್ಲದೆ ನಡೆಸುವ ಸೇವಾ ಮನೋಭಾವವನ್ನು ಎನ್ ಎಸ್ ಎಸ್ ಕಲಿಸಿಕೊಡುತ್ತದೆ. ವಿದ್ಯಾರ್ಥಿಗಳಲ್ಲಿ ಹೊಸತನ ಮೇಳೈಸಲಿ ಎಂದು ಶುಭ ಹಾರೈಸಿದರು.

ಸಹ ಸಂಸ್ಥಾಪಕ ಡಾ. ಬಿ. ಗಣನಾಥ್ ಶೆಟ್ಟಿ  ಪ್ರಸ್ತಾವಿಕ ಮಾತನಾಡಿ  ಕಾಲೇಜು ಆರಂಭವಾದ ಕೇವಲ ನಾಲ್ಕು ವರ್ಷಗಳಲ್ಲಿ  ರಾಷ್ಟ್ರೀಯ ಸೇವಾ ಯೋಜನೆ ಘಟಕ ಆರಂಭವಾಗಿರುವುದು ಅಭಿನಂದನಾರ್ಹ.  ಅದಕ್ಕೆ ಶ್ರಮಿಸಿದ ವಿಭಾಗೀಯ ಅಧಿಕಾರಿಗಳ ತಂಡದ ಸಹಕಾರಕ್ಕೆ  ಅಭಿನಂದನೆ ಸಲ್ಲಿಸಿದರು.

ಮಾಜಿ ಗ್ರಾ.ಪಂ ಅಧ್ಯಕ್ಷ  ಸಂತೋಷ್ ಶೆಟ್ಟಿ ಮಾತನಾಡಿ, ಸಮಾನತೆ ಮತ್ತು ನ್ಯಾಯಕತ್ವ ಗುಣವನ್ನು ಕಲಿಸಲು ಎನ್ ಎಸ್ ಎಸ್ ಸಹಕಾರಿಯಾಗಿದೆ ಎಂದರು.

ಶಾಲೆಯ ಎಸ್‌.ಡಿ.ಎಂ.ಸಿ. ಅಧ್ಯಕ್ಷ ಮಹಾವೀರ ಕಟ್ಟಡ ಶಾಲೆಯ ಮುಖ್ಯೋಪಾಧ್ಯಾಯ ಆಶಾ ಕ್ಲೇರ ವಾಸ್,
ಪ್ರಗತಿಪರ ಕೃಷಿಕ ಸರ್ವೋತ್ತಮ ಕಡಂಬ ಉಪಸ್ಥಿತರಿದ್ದರು. ಕಾಲೇಜಿನ ರಾ.ಸೇ.ಯೋ. ಸಂಯೋಜನಾಧಿಕಾರಿ ಉಮೇಶ್ ಸ್ವಾಗತಿಸಿದರು. ಸಾನ್ವಿ ಬಳಗ ಪ್ರಾರ್ಥಿಸಿದರು. ಉಪನ್ಯಾಸಕಿ ಪ್ರಿಯಾಂಕಾ ವಂದಿಸಿದರು.‌ ಉಪನ್ಯಾಸಕ ಲೋಹಿತ್ ಕೆ ಸ್ ಕಾರ್ಯಕ್ರಮ ನಿರೂಪಿಸಿದರು.