ನಿಟ್ಟೆ: ಭಾರತದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲೊಂದಾದ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಆಫ್ ಕ್ಯಾಂಪಸ್ ಸೆಂಟರ್ ನ ವಿದ್ಯಾಸಂಸ್ಥೆಗಳಲ್ಲೊಂದಾದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಬಿ.ಟೆಕ್ ಕೋರ್ಸ್ ಗಳಿಗೆ ೨೦೨೬ ನೇ ಸಾಲಿನಲ್ಲಿ ಪ್ರವೇಶಾತಿ ಪಡೆದ ನೂತನ ಬ್ಯಾಚ್ ನ ಉದ್ಘಾಟನಾ ಕಾರ್ಯಕ್ರಮವು ಜೂ.29 ರಂದು ನಿಟ್ಟೆಯ ನೂತನ ಆಂಫಿಥಿಯೇಟರ್ ನಲ್ಲಿ ಜರುಗಿತು.
ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಪ್ರೋ-ಚಾನ್ಸಲರ್ ಡಾ.ಶಾಂತರಾಮ್ ಶೆಟ್ಟಿ ವಿದ್ಯಾರ್ಥಿಗಳನ್ನು ಹಾಗೂ ಪೋಷಕರನ್ನು ಉದ್ದೇಶಿಸಿ ಮಾತನಾಡಿದರು. ‘ಇಂದಿನ ದಿನಗಳಲ್ಲಿ ಅಗತ್ಯತೆಗೆ ತಕ್ಕಂತೆ ವಿದ್ಯಾರ್ಥಿಗಳು ಕೌಶಲ್ಯತೆಯನ್ನು ಬೆಳೆಸಿಕೊಂಡು ಉದ್ಯೋಗಾವಕಾಶಗಳನ್ನು ಹೆಚ್ಚಿಸಿಕೊಳ್ಳಬೇಕು. ನಿಟ್ಟೆ ವಿದ್ಯಾಸಂಸ್ಥೆಯು ವಿದ್ಯಾರ್ಥಿಗಳನ್ನು ಈ ದೃಷ್ಠಿಯಲ್ಲಿ ಸಜ್ಜುಗೊಳಿಸಲು ಸದಾ ಕಾರ್ಯಪ್ರವೃತ್ತವಾಗಿರುತ್ತದೆ. ತಾಂತ್ರಿಕ ಶಿಕ್ಷಣದೊಂದಿಗೆ ದೈಹಿಕ ಆರೋಗ್ಯ ಹಾಗೂ ಮಾನಸಿಕ ನೆಮ್ಮದಿ ವೃದ್ದಿಯ ಹಿನ್ನಲೆಯಲ್ಲಿ ಕ್ರೀಡೆ ಹಾಗೂ ಸಾಂಸ್ಕೃತಿಕ ವಿಷಯಗಳಿಗೂ ಸಮಾನ ಮಹತ್ವವನ್ನು ನೀಡುವುದು ಮುಖ್ಯ. ವಿದ್ಯಾರ್ಥಿಗಳು ದುರ್ಜನರ ಸಹವಾಸದಿಂದ ವ್ಯಸನಗಳಿಗೆ ದಾಸರಾಗದಂತೆ ಎಚ್ಚರ ವಹಿಸುವುದು ಬಹಳ ಮುಖ್ಯ’ ಎಂದು ಅವರು ಹೇಳಿದರು.
ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ವೈಸ್-ಚಾನ್ಸಲರ್ ಡಾ.ಎಂ.ಎಸ್.ಮೂಡಿತ್ತಾಯ ಸಭೆಯನ್ನುದ್ದೇಶಿಸಿ ಮಾತನಾಡಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಜಗತ್ತಿನಲ್ಲಿ ಹೇಗೆ ಅಣಿಗೊಳ್ಳಬೇಕು ಎಂಬುದನ್ನು ವಿವರಿಸಿದರು. ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ತಾಂತ್ರಿಕ ಶಿಕ್ಷಣ ವಿಭಾಗದ ಉಪಾಧ್ಯಕ್ಷ ಪ್ರೋ.ಡಾ. ಗೋಪಾಲ್ ಮುಗೇರಾಯ ಅವರು ಮಾತನಾಡಿ ನಿಟ್ಟೆ ವಿದ್ಯಾಸಂಸ್ಥೆಯ ಇತಿಹಾಸ, ಬೆಳೆದುಬಂದ ಹಾದಿಯ ಬಗೆಗೆ ನೂತನ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ವಿವರಿಸಿದರು.
ವೇದಿಕೆಯಲ್ಲಿ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಸಚಿವ ಡಾ. ಹರ್ಷ ಹಾಲಹಳ್ಳಿ ಹಾಗೂ ಪರೀಕ್ಷಾ ನಿಯಂತ್ರಕ ಡಾ. ಪ್ರಸಾದ್ ಬಿ ಶೆಟ್ಟಿ ಉಪಸ್ಥಿತರಿದ್ದರು.
ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ನಿರಂಜನ್ ಎನ್ ಚಿಪ್ಳೂಣ್ಕರ್ ಸ್ವಾಗತಿಸಿದರು. ಪ್ರಥಮ ವರ್ಷ ಬಿಟೆಕ್ ವಿದ್ಯಾರ್ಥಿಗಳ ಸಂಯೋಜಕ ಹಾಗೂ ಸ್ಟೂಡೆಂಟ್ ಇಂಡಕ್ಷನ್ ಕಾರ್ಯಕ್ರಮದ ಸಂಯೋಜಕ ಡಾ. ಜಾಯ್ ಮಾರ್ಟಿಸ್ ವಂದಿಸಿದರು. ಎಂಸಿಎ ವಿಭಾಗದ ಸಹಪ್ರಾದ್ಯಾಪಕಿ ಪ್ರೇಮಿತಾ ಕಾಮತ್ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ವಾರ್ಷಿಕ ಮ್ಯಾಗಜಿನ್ ‘ನಿದರ್ಶನ್ ೨೦೨೬’ ಬಿಡುಗಡೆಗೊಳಿಸಲಾಯಿತು.
ಸಭಾ ಕಾರ್ಯಕ್ರಮದ ಅನಂತರ ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ನಿರಂಜನ್ ಎನ್ ಚಿಪ್ಳೂಣ್ಕರ್ ಅವರು ನಿಟ್ಟೆ ಸಮೂಹ ಸಂಸ್ಥೆಯು ಬೆಳೆದು ಬಂದ ಹಾದಿಯ ಬಗೆಗೆ ಹಾಗೂ ನಿಟ್ಟೆ ತಾಂತ್ರಿಕ ಕಾಲೇಜಿನ ರೀತಿ ನೀತಿಗಳ ಬಗೆಗೆ ವಿವರಿಸಿದರು.

















