ಆಕ್ಸೆಸ್‌ಲೈಫ್ ಮಾಹೆ ಮಣಿಪಾಲ ಕೇಂದ್ರ (ಹೋಮ್ ಆವೇ ಫ್ರಮ್ ಹೋಮ್) ಉದ್ಘಾಟನೆ

ಮಣಿಪಾಲ: ಕಸ್ತೂರ್ಬಾ ವೈದ್ಯಕೀಯ ಕಾಲೇಜು, ಮಣಿಪಾಲ ಮತ್ತು ಕಸ್ತೂರ್ಬಾ ಆಸ್ಪತ್ರೆ, ಮಾಹೆ  ಮಣಿಪಾಲದ ಮಕ್ಕಳ ರಕ್ತಶಾಸ್ತ್ರ  ಮತ್ತು ಆಂಕೊಲಾಜಿ ವಿಭಾಗದ ಸಹಯೋಗದೊಂದಿಗೆ ಆಕ್ಸೆಸ್‌ಲೈಫ್  ಮಾಹೆ  ಮಣಿಪಾಲ ಕೇಂದ್ರವನ್ನು (ಕ್ಯಾನ್ಸರ್ ಪೀಡಿತ ಮಕ್ಕಳು ಮತ್ತು ಅವರ ಆರೈಕೆದಾರರಿಗಾಗಿ ಹೋಮ್ ಆವೇ ಫ್ರಮ್ ಹೋಮ್) ಇಂದು ಉದ್ಘಾಟಿಸಲಾಯಿತು. ಇದು ಕ್ಯಾನ್ಸರ್ ಇರುವ ಮಕ್ಕಳಿಗೆ ಮತ್ತು ಅವರ ಆರೈಕೆ ಮಾಡುವವರಿಗೆ ಉಚಿತವಾಗಿ  ವಸತಿ, ಪೌಷ್ಟಿಕ ಆಹಾರ, ಸಮಾಲೋಚನೆ ಮತ್ತು ಶೈಕ್ಷಣಿಕ ಸಹಾಯ ಸೇವೆಗಳನ್ನು ಒದಗಿಸುತ್ತದೆ. ಇದು ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಮಾಹೆ  ಮಣಿಪಾಲ ಮತ್ತು ಆಕ್ಸೆಸ್‌ಲೈಫ್‌ನ ಜಂಟಿ ಯೋಜನೆಯಾಗಿದೆ.

ಮಣಿಪಾಲ ಶಿಕ್ಷಣ ಮತ್ತು ವೈದ್ಯಕೀಯ ಸಮೂಹದ (ಎಂಇಎಂಜಿ) ಮುಖ್ಯಸ್ಥರಾದ  ಡಾ.ರಂಜನ್ ಆರ್ ಪೈ ಕೇಂದ್ರವನ್ನು ಉದ್ಘಾಟಿಸಿದರು. ಆಕ್ಸೆಸ್‌ಲೈಫ್  ಸಂಸ್ಥಾಪಕ ಮತ್ತು ಮುಖ್ಯಸ್ಥ ಗಿರೀಶ್ ನಾಯರ್, ಸಹ-ಸಂಸ್ಥಾಪಕ ಮತ್ತು ಕಾರ್ಯನಿರ್ವಾಹಕ ನಿರ್ದೇಶಕರಾದ  ಅಂಕಿತ್ ದೇವ್, ಮಾಹೆ ಮಣಿಪಾಲದ ಉಪಕುಲಪತಿ  ಲೆಫ್ಟಿನೆಂಟ್ ಜನರಲ್ (ಡಾ) ಎಂ.ಡಿ. ವೆಂಕಟೇಶ್ ಗೌರವ ಅತಿಥಿಗಳಾಗಿದ್ದರು. ಮಾಹೆ ಮಣಿಪಾಲದ ಸಹ ಕುಲಪತಿ ಡಾ.ಎಚ್.ಎಸ್.ಬಲ್ಲಾಳ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.


ಆಕ್ಸೆಸ್‌ಲೈಫ್ ಮಾಹೆ ಮಣಿಪಾಲ ಕೇಂದ್ರವು  ಎನರ್ಜಿ ಸೆಲ್ ಎದುರು, ಬಿಕ್ಯೂ ರಸ್ತೆ ಬಳಿ, ಮಾಧವನಗರ, ಮಣಿಪಾಲ ಇಲ್ಲಿ ಕಾರ್ಯಾಚರಿಸಲಿದೆ. ಆಕ್ಸೆಸ್ ಲೈಫ್ ಅಸಿಸ್ಟೆನ್ಸ್ ಫೌಂಡೇಶನ್, ಭಾರತದ  ಲಾಭರಹಿತ (ಎನ್ ಜಿ ಓ) ನೋಂದಾಯಿತ ಸಂಸ್ಥೆಯಾಗಿದ್ದು, ತಮ್ಮ ಮಗುವಿನ ಕ್ಯಾನ್ಸರ್ ಚಿಕಿತ್ಸೆಗಾಗಿ ಕ್ಯಾನ್ಸರ್ ಕೇಂದ್ರಕ್ಕೆ ಬರುವ ಕುಟುಂಬಗಳಿಗೆ ಬಹು ಸೌಲಭ್ಯ ಮತ್ತು ಬೆಂಬಲದ ಆರೈಕೆಯನ್ನು ಒದಗಿಸುತ್ತದೆ.  3 ರಿಂದ 6 ತಿಂಗಳ ಅವಧಿಯವರೆಗೆ ಮತ್ತು ಕೆಲವೊಮ್ಮೆ ಒಂದು ವರ್ಷದ ಅವಧಿಯ ಚಿಕಿತ್ಸೆಯ ಸಂಪೂರ್ಣ ಅವಧಿಯಲ್ಲಿ ಮಕ್ಕಳು ಮತ್ತು ಅವರ ಪೋಷಕರಿಗೆ ಉಚಿತ ವಸತಿ, ನೈರ್ಮಲ್ಯದ ವಾತಾವರಣ, ಪೌಷ್ಟಿಕಾಂಶವುಳ್ಳ  ಊಟ,  ಸಮಾಲೋಚನೆ, ಮನರಂಜನಾ ಮತ್ತು ಶೈಕ್ಷಣಿಕ  ಸಹಾಯ ಸೌಲಭ್ಯವನ್ನು ಒದಗಿಸುತ್ತದೆ.

ಮಣಿಪಾಲ ಶಿಕ್ಷಣ ಮತ್ತು ವೈದ್ಯಕೀಯ ಸಮೂಹದ (MEMG) ಮುಖ್ಯಸ್ಥ  ಡಾ ರಂಜನ್ ಆರ್ ಪೈ ಮಾತನಾಡಿ, ಮಣಿಪಾಲದ ಈ ಕೇಂದ್ರವು ಕರ್ನಾಟಕದ ಮೊದಲ  ಕ್ಯಾನ್ಸರ್ ಪೀಡಿತ ಮಕ್ಕಳು ಮತ್ತು ಅವರ ಆರೈಕೆದಾರರಿಗಾಗಿ ಹೋಮ್ ಆವೇ ಫ್ರಮ್ ಹೋಮ್  ಪರಿಕಲ್ಪನೆಯಾಗಿದೆ.  ಇದು ಮಕ್ಕಳಿಗೆ ಮತ್ತು ಅವರ ಆರೈಕೆ ಮಾಡುವವರಿಗೆ  ಆಸ್ಪತ್ರೆಯಲ್ಲಿ ಕ್ಯಾನ್ಸರ್ ಚಿಕಿತ್ಸೆಯು ನಡೆಯುತ್ತಿರುವಾಗ ಸಮಗ್ರ ಆರೈಕೆಯನ್ನು ಒದಗಿಸುತ್ತದೆ. ಈ ಪ್ರದೇಶದ ಬಹಳಷ್ಟು ಸ್ವಯಂಸೇವಕರಿಗೆ ಈ ಸೇವೆಯಲ್ಲಿ ತಾವು ತೊಡಗಿಸಿಕೊಳ್ಳಲು ಕೇಂದ್ರವು ದಾರಿಯನ್ನು ಒದಗಿಸಲಿದೆ ಎಂದರು.

ಆಕ್ಸೆಸ್‌ಲೈಫ್ ಸಹ -ಸಂಸ್ಥಾಪಕ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಅಂಕಿತ್ ದೇವ್ ಮಾತನಾಡಿ, ಮಾಹೆ ಸಹಯೋಗದೊಂದಿಗೆ ಮಣಿಪಾಲದಲ್ಲಿ ನಮ್ಮ ಹೊಸ ಕೇಂದ್ರವನ್ನು ಪ್ರಾರಂಭಿಸಲು ನಾವು ತುಂಬಾ ಸಂತೋಷಪಡುತ್ತೇವೆ. ಕೇಂದ್ರದ ಮೂಲಕ ನಾವು ಎಲ್ಲಾ ಚಿಕಿತ್ಸೆ ನೀಡುವ ವೈದ್ಯರು, ಅರೆವೈದ್ಯಕೀಯ ತಂಡ ಮತ್ತು ಕುಟುಂಬಗಳನ್ನು ಬೆಂಬಲಿಸಲು ಸಾಧ್ಯವಾಗುವುದಲ್ಲದೆ, ಕರ್ನಾಟಕದ  ಮಣಿಪಾಲದಲ್ಲಿ ನಮ್ಮ ವಿಸ್ತರಣೆಯು ಬಾಲ್ಯದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ನಮಗೆ ಅನುವು ಮಾಡಿಕೊಡುತ್ತದೆ ಎಂದು ಅಭಿಪ್ರಾಯ ಪಟ್ಟರು.

ಮಾಹೆ ಮಣಿಪಾಲದ ಉಪಕುಲಪತಿಗಳಾದ ಲೆಫ್ಟಿನೆಂಟ್ ಜನರಲ್ (ಡಾ) ಎಂ.ಡಿ. ವೆಂಕಟೇಶ್ ಈ ನಿಟ್ಟಿನಲ್ಲಿ ಕೆಲಸ ಮಾಡಿದ ತಂಡವನ್ನು   ಅಭಿನಂದಿಸಿದರು ಮತ್ತು ಮಾಹೆ ಪ್ರತಿಷ್ಠಾನದೊಂದಿಗೆ ಮಣಿಪಾಲದಲ್ಲಿ ಕೇಂದ್ರದ ಆರಂಭಕ್ಕೆ  ಬಹಳವಾಗಿ ಪ್ರಯತ್ನಿಸಿ ಒಪ್ಪಂದವನ್ನು (MoU) ಮಾಡಿಕೊಂಡಿದ್ದೇವೆ. ಕಸ್ತೂರ್ಬಾ ಆಸ್ಪತ್ರೆಯ ಮಕ್ಕಳ ರಕ್ತಶಾಸ್ತ್ರ ಮತ್ತು ಆಂಕೊಲೊಜಿ  ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳಲ್ಲಿ  2/3 ಕ್ಕಿಂತ ಹೆಚ್ಚಿನ ಮಕ್ಕಳು ಕರ್ನಾಟಕದ ಗ್ರಾಮೀಣ ಪ್ರದೇಶದಿಂದ ಬರುತ್ತಿದ್ದಾರೆ. ಕೇಂದ್ರಕ್ಕಾಗಿ ಮಾಹೆಯು ಆಸ್ಪತ್ರೆಯ ಸಮೀಪದಲ್ಲಿ ಎರಡು ವಸತಿ ಗೃಹಗಳನ್ನು ಒದಗಿಸಿದೆ. ಆಕ್ಸೆಸ್ ಲೈಫ್ ಅಸಿಸ್ಟೆನ್ಸ್ ಫೌಂಡೇಶನ್ ಅದನ್ನು ನವೀಕರಿಸಿದೆ ಮತ್ತು ಯಾವುದೇ ಸಮಯದಲ್ಲಿ 12 ಕುಟುಂಬಗಳಿಗೆ ಆತಿಥ್ಯ ನೀಡಬಹುದಾದ ನೈರ್ಮಲ್ಯಯುಕ್ತ  ವಸತಿಗೃಹವನ್ನಾಗಿ ಮಾರ್ಪಾಟು ಮಾಡಿದೆ ಎಂದರು.

ಮಾಹೆ ಸಹ ಕುಲಾಧಿಪತಿಗಳಾದ  ಡಾ.ಎಚ್.ಎಸ್. ಬಲ್ಲಾಳ್ ಮಾತನಾಡಿ, ಬಾಲ್ಯದ ಕ್ಯಾನ್ಸರ್ ಗುಣಪಡಿಸಬಹುದಾಗಿದೆ. ಆಕ್ಸೆಸ್‌ಲೈಫ್ ಮಾಹೆ ಮಣಿಪಾಲ ಕೇಂದ್ರವು ಸೌಲಭ್ಯಗಳನ್ನು ಒದಗಿಸುವ ಮೂಲಕ ಆರ್ಥಿಕ ಮತ್ತು ಸಾಮಾಜಿಕ ಕಾರಣಗಳಿಂದ ಆರೈಕೆ ಮಾಡುವವರು ಚಿಕಿತ್ಸೆಯನ್ನು ತ್ಯಜಿಸುವವರ ಮತ್ತು ನಿರಾಕರಿಸುವವರ ಮನ ಪರಿವರ್ತನೆಯ  ಗುರಿಯನ್ನು ಹೊಂದಿದೆ. ಇದರೊಂದಿಗೆ ಆಸ್ಪತ್ರೆಯು ಈ ಮಕ್ಕಳಿಗೆ ವಿವಿಧ ನಿಧಿಗಳು ಮತ್ತು ಯೋಜನೆಗಳ ಮೂಲಕ ಚಿಕಿತ್ಸೆಗೆ ಸಹಾಯ ಒದಗಿಸುವುದನ್ನು ಮುಂದುವರೆಸಲಿದೆ.  ಈ ಎಲ್ಲಾ ಸೌಲಭ್ಯಗಳು ರೋಗಿಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಸಿಗಲಿದೆ  ಮತ್ತು ಕೇಂದ್ರದ ಕಾರ್ಯಾಚರಣೆಯ ವೆಚ್ಚದ ಹೆಚ್ಚು ಭಾಗ  ಆಕ್ಸೆಸ್ ಲೈಫ್ ಅಸಿಸ್ಟೆನ್ಸ್ ಫೌಂಡೇಶನ್ ಭರಿಸಲಿದೆ ಎಂದರು.