ಅಕ್ರಮವಾಗಿ ಮರ ಕಡಿದು ಸಾಗಾಟ: ಅರಣ್ಯಾಧಿಕಾರಿಗಳಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕಳ್ಳರು

ಕಾರ್ಕಳ: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಭಾರೀ ಗಾತ್ರದ ಮರಗಳನ್ನು ಅಕ್ರಮವಾಗಿ ಕಡಿದು ಸಾಗಿಸುತ್ತಿದ್ದ ಜಾಲವೊಂದನ್ನು ಕಾರ್ಕಳ ವನ್ಯಜೀವಿ ವಿಭಾಗದ ಅಧಿಕಾರಿಗಳು ಕಾರ್ಕಳ ತಾಲೂಕಿನ ಅಂಡಾರು ಗ್ರಾಮ ವ್ಯಾಪ್ತಿಯ ಕೊಂಡಾಡಿ ಎಂಬಲ್ಲಿ ಬಂಧಿಸಿದ್ದಾರೆ.
ಎರಡು ಲಕ್ಷಕ್ಕೂ ಮಿಕ್ಕಿದ ಮೌಲ್ಯದ ಸುಮಾರು ಐವತ್ತು ಹೆಬ್ಬಲಸು ದಿಮ್ಮಿಗಳು, ಸಾಗಾಟಕ್ಕೆ ಬಳಸುವ ಪಿಕಪ್ ವಾಹನ, ಮರಕಟ್ಟಿಂಗ್ ಮಾಡುವ ಯಂತ್ರಗಳನ್ನು ಅರಣ್ಯಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ರಮೇಶ್ ಗೌಡ ಅಂಡಾರು, ಸತೀಶ್ ಹೆಗ್ಡೆ ಕಡ್ತಲ, ಸತೀಶ್ ಗೌಡ ಅಂಡಾರು, ಪ್ರಶಾಂತ ಎಂ.ಕೆ, ಹರೀಶ್ ನಾಯ್ಕ್, ಭಾಸ್ಕರ್ ಆಚಾರ್ಯ ಅಜೆಕಾರು, ಜನಾರ್ದನ ಆಚಾರ್ಯ ಬಂಧಿತ ಆರೋಪಿಗಳು.
ಸೆಪ್ಟೆಂಬರ್ ಮೊದಲ ವಾರದಲ್ಲಿಯೇ ಅಕ್ರಮ ದಂಧೆಯ ಸುಳಿವು ಸಿಕ್ಕಿದ್ದು, ಖಚಿತ ಮಾಹಿತಿ ಪಡೆದ ವನ್ಯಜೀವಿ ವಿಭಾಗದ ಅಧಿಕಾರಿಗಳ ತಂಡ ಮರಕಡಿಯುತ್ತಿದ್ದ ಸಮಯದಲ್ಲಿಯೇ ದಾಳಿ ನಡೆಸಿ ಆರೋಪಿಗಳನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ಸ್ಮಿತಾ ಎಂ.ಡಿ , ಉಪವಲಯ ಅರಣ್ಯಾಧಿಕಾರಿ ರಾಘವೇಂದ್ರ ಕೆ, ನಾಗರಾಜ್ ರಾವ್, ಯಮನೂರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.