ವಿಕಲ ಚೇತನರಿಗೆ ಬಂದಿದೆ ವಿಶಿಷ್ಟ ಗುರುತಿನ ಚೀಟಿ:

 ಉಡುಪಿ : ಭಾರತ ಸರ್ಕಾರದ ವಿಶಿಷ್ಟ ಗುರುತಿನ ಚೀಟಿ ಯೋಜನೆಯು ವಿಕಲಚೇತರಿಗೆ ವೈದ್ಯಕೀಯ ಪ್ರಾಧಿಕಾರಗಳಿಂದ ದೃಢೀಕರಿಸಲಾಗುವ ವೈದ್ಯಕೀಯ ಪ್ರಮಾಣ ಪತ್ರದ ಸಮಗ್ರ ಮಾಹಿತಿಯುಳ್ಳ ಗಣಕೀಕೃತ ಗುರುತಿನ ಚೀಟಿಯನ್ನು ನೀಡುವ ವ್ಯವಸ್ಥೆಯಾಗಿದ್ದು, ಇದರಲ್ಲಿ ವಿಕಲಚೇತನ ವ್ಯಕ್ತಿಯ ವಿವರಗಳು ಹಾಗೂ ಅವರಲ್ಲಿರುವ ವಿಕಲತೆಯ ವಿವರ ಮತ್ತು ಪ್ರಮಾಣವನ್ನು ನಮೂದಿಸಲಾಗಿರುತ್ತದೆ.

 ಈ ವಿಶಿಷ್ಟ ಗುರುತಿನ ಚೀಟಿ ಯೋಜನೆಯು ದೇಶದ ವಿಕಲಚೇತನರ ಅಂಕಿ ಸಂಖ್ಯೆಗಳ ಮಾಹಿತಿಯನ್ನು ನೀಡುವುದಲ್ಲದೇ ಈ ಯೋಜನೆಯ ಅನುಷ್ಠಾನದ ಉದ್ದೇಶವು ಸರ್ಕಾರದ ಸೌಲಭ್ಯಗಳು ಪರಿಣಾಮಕಾರಿಯಾಗಿ ವಿಕಲಚೇತನರಿಗೆ ತಲುಪುವಂತೆ ಮಾಡುವುದಾಗಿದೆ. ಈ ಯೋಜನೆಯು ವಿಕಲಚೇತನರಿಗೆ ಸಂಬಂಧಿಸಿದಂತೆ ರಾಜ್ಯ, ಜಿಲ್ಲೆ, ತಾಲೂಕು ಮತ್ತು ಗ್ರಾಮ ಮಟ್ಟದಲ್ಲಿ ಅಂಗವಿಕಲರು ಪಡೆದ ವಿವಿಧ ಯೋಜನೆಗಳನ್ನು ಪಡೆಯುವಲ್ಲಿ ಪಾರದರ್ಶಕತೆಯನ್ನು ಕಾಪಾಡುವುದು ಹಾಗೂ ಅವರ ಸಾಮಾಜಿಕ ಹಾಗೂ ಆರ್ಥಿಕ ಚಿತ್ರಣವನ್ನು ನೀಡುವುದರಲ್ಲಿ ಸಹಕಾರಿಯಾಗಿದೆ. ವಿಕಲಚೇತನರ ಈ ವಿಶಿಷ್ಟ ಗುರುತಿನ ಚೀಟಿಯು ಅವರ ಜೀವನದಲ್ಲಿ ಆಧಾರ್ ಕಾರ್ಡ್‍ನಷ್ಟೇ ಪ್ರಮುಖವಾದ ದಾಖಲೆಯಾಗಿದೆ. ಈ ಯೋಜನೆಯನ್ನು ಸರ್ಕಾರವು 2019 ನೇ ವರ್ಷದಿಂದ ಕಡ್ಡಾಯಗೊಳಿಸಿ ಪ್ರತಿಯೊಬ್ಬ ವಿಕಲಚೇತನ ವ್ಯಕ್ತಿಯು ಈ ಯೋಜನೆಯ ಅಡಿಯಲ್ಲಿ ನೊಂದಣಿ ಮಾಡಿಕೊಂಡು ಅಂಗವಿಕಲರ ವಿಶೇಷ ಗುರುತಿನ ಚೀಟಿಯನ್ನು ಪಡೆದುಕೊಳ್ಳುವಂತೆ ಆದೇಶಿಸಿದೆ.

 ಏನು ಪ್ರಯೋಜನಗಳು :

ವಿಕಲಚೇತನ ವ್ಯಕ್ತಿಯು ಅವರಿಗಾಗಿ ಇರುವ ಸೌಲಭ್ಯವನ್ನು ಪಡೆದುಕೊಳ್ಳುವಲ್ಲಿ ಸಹಕಾರಿಯಾಗಿದೆ. ವಿಕಲಚೇತನ ವ್ಯಕ್ತಿಯ ವಿಕಲತೆಗೆ ಸಂಬಂಧಿಸಿದ ಮುಖ್ಯ ದಾಖಲೆಯನ್ನು ಇದು ಹೊಂದಿರುವುದರಿಂದ ದೇಶ ವ್ಯಾಪಿ ಮಾನ್ಯತೆ ಇದೆ. ಈ ಕಾರ್ಡ್‍ನ್ನು ಭಾರತದಾದ್ಯಂತ ವಿಕಲಚೇತನ ವ್ಯಕ್ತಿಗಳ ಅಂಗವೈಕಲ್ಯತೆಯ ಪುರಾವೆಯಾಗಿ ಪರಿಗಣಿಸಲಾಗುತ್ತದೆ. ವಿಕಲಚೇತನ ವ್ಯಕ್ತಿಯ ಮಾಹಿತಿಯು ದುರ್ಬಳಕೆಯಾಗಿ ಬೇರೆ ವ್ಯಕ್ತಿ ಈ ವಿಕಲಚೇತನರಿಗಿರುವ ಸೌಲಭ್ಯವನ್ನು ಬಳಸಲು ಅವಕಾಶವಿರುವುದಿಲ್ಲ.

ಅಂಗವಿಕಲ ಕಾಯ್ದೆ 2016 ರ ನ್ವಯ ನಿರ್ಧಿಷ್ಟ ಪ್ರಮಾಣದ ಅಂಗವಿಕಲ ವ್ಯಕ್ತಿಯು ಮಾತ್ರ ಗುರುತಿಸಿಕೊಂಡು ಸರ್ಕಾರದ ಸೌಲಭ್ಯಗಳು ಅವರಿಗೆ ಮಾತ್ರ ಮೀಸಲಿಡುವಲ್ಲಿ ಅನುವು ಮಾಡಿಕೊಡುವುದು. ಆನ್‍ಲೈನ್ ಮುಖಾಂತರ ಮಾಹಿತಿ ತುಂಬಿ ಈ ಕಾರ್ಡ್ ಪಡೆದುಕೊಳ್ಳುವುದರಿಂದ ಯಾವುದೇ ವ್ಯಕ್ತಿಯ ಮಾಹಿತಿಗಳನ್ನು ನಕಲಿ ದಾಖಲೆಗಲಾಗಿ ಪಡೆದುಕೊಳ್ಳಲು ಆಗುವುದಿಲ್ಲ.

 ಹೇಗೆ ಪಡೆದುಕೊಳ್ಳುವುದು:

ಅರ್ಜಿಯನ್ನು ಪಡೆಯಲು ವೆಬ್‍ಸೈಟ್‍ನಲ್ಲಿ ಮಾಹಿತಿಯನ್ನು ತುಂಬುವುದು. ಮಾಹಿತಿಯನ್ನು ತುಂಬಲು ಬೇಕಾದ ಅಗತ್ಯ ದಾಖಲೆಗಳ ಸ್ಕ್ಯಾನ್ ಮಾಡಿ ಅಪ್‍ಲೋಡ್ ಮಾಡುವುದು. ಬೇಕಾದ ದಾಖಲೆಗಳು ಪಾಸ್‍ಪೋರ್ಟ್ ಸೈಜ್ ಭಾವಚಿತ್ರ, ವಿಕಲಚೇತನ ವ್ಯಕ್ತಿಯ ಸಹಿ, ಹೆಬ್ಬೆರಳಿನ ಗುರುತು, ಹಿಂದುಳಿದ ಜಾತಿ ವರ್ಗಕ್ಕೆ ಸೇರಿದವರಾಗಿದ್ದಲ್ಲಿ ಜಾತಿ ಪ್ರಮಾಣ ಪತ್ರ, ಅಂಗವಿಕಲತೆಯ ವೈದ್ಯಕೀಯ ಪ್ರಮಾಣ ಪತ್ರ, ಆದಾರ್ ಕಾರ್ಡ್, ಯಾವುದಾದರೊಂದು ಅಡ್ರೆಸ್ ಪ್ರೂಫ್ (ರೇಷನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ವೋಟರ್ ಐಡಿ ಇತ್ಯಾದಿ), ಈಗಾಗಲೇ ಅಂಗವಿಕಲತೆಯ ವೈದ್ಯಕೀಯ ಪ್ರಮಾಣ ಪತ್ರ ಹೊಂದಿರುವವರು ಕೂಡ UಆIಆ ಕಾರ್ಡ್ ಪಡೆಯಲು ನೋಂದಾಯಿಸಿಕೊಳ್ಳಬೇಕಾಗುತ್ತದೆ.

ವಿಕಲಚೇತನ ವ್ಯಕ್ತಿಯ ವೈದ್ಯಕೀಯ ಗುರುತಿನ ಚೀಟಿಯನ್ನು ಇದುವರೆಗೆ ಮಾಡಿಸದಿದ್ದಲ್ಲಿ ಅಥವಾ ಹೊಸದಾಗಿ ಮಾಡಿಸುವುದಾದರೆ UಆIಆ ನಮೂನೆಯಲ್ಲಿ ವೈದ್ಯಕೀಯ ಗುರುತೀನ ಚೀಟಿ ಇಲ್ಲ ಎಂದು ನಮೂದಿಸುವುದು. ಅಂತಿಮವಾಗಿ ಅಭ್ಯರ್ಥಿಗಳು ನೊಂದಣಿ ಮಾಡಿದ ನಮೂನೆಯನ್ನು ಡೌನ್‍ಲೋಡ್ ಮಾಡಿಕೊಳ್ಳಬೇಕು ಹಾಗೂ ನಮೂನೆಯಲ್ಲಿ ನೊಂದಾಯಿಸಿದ ಮೊಬೈಲ್ ಸಂಖ್ಯೆ ಮತ್ತು ಇ- ಮೇಲ್ ವಿಳಾಸಕ್ಕೆ ಸಂದೇಶವು ರವಾನೆಯಾಗುವುದು. ಆನ್‍ಲೈನ್ ಮುಖಾಂತರ ನಮೂನೆಯನ್ನು ತುಂಬುವುದರಿಂದ ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಅಂಗವಿಕಲತೆಯ ವೈದ್ಯಕೀಯ ಪ್ರಮಾಣ ಪತ್ರವನ್ನು ನೀಡುವ ಸೌಲಭ್ಯವು ಪ್ರಸ್ತುತ ಲಭ್ಯವಿಲ್ಲ.

ಆನ್‍ಲೈನ್ ಮುಕಾಂತರ ಭರ್ತಿ ಮಾಡಿ ಕಳುಹಿಸಿದ ನಮೂನೆಯನ್ನು ಜಿಲ್ಲಾ ವೈದ್ಯಕೀಯ ಪ್ರಾಧಿಕಾರವು ಪರಿಶೀಲಿಸಿ ಅಗತ್ಯವಿದ್ದಲ್ಲಿ ಅಭ್ಯರ್ಥಿಯನ್ನು ಜಿಲ್ಲಾಸ್ಪತ್ರೆಗೆ ಪರಿಶೀಲನೆಗೆ ಬರಲು ತಿಳಿಸುವರು. ಅವರು ತಿಳಿಸಿದ ದಿನಾಂಕದಂದು ಅಭ್ಯರ್ಥಿಯು ಜಿಲ್ಲಾ ಆಸ್ಪತ್ರೆಗೆ ಬೇಟಿ ನೀಡಿ ವೈದ್ಯಕೀಯ ಪರೀಕ್ಷೆಗೆ ಒಳಪಡುವುದು. ಬೇರೆ ದಿನಾಂಕದಂದು ಅಭ್ಯರ್ಥಿಯು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದಲ್ಲಿ ಜಿಲ್ಲಾ ಆಸ್ಪತ್ರೆಯು ಜವಾಬ್ದಾರಿಯಲ್ಲ.

ಜಿಲ್ಲಾಸ್ಪತ್ರೆಯು ನಿಗಧಿ ಪಡಿಸಿದ ದಿನದಂದು ಮಾತ್ರ ಅಭ್ಯರ್ಥಿಯು ಭೇಟಿ ನೀಡುವುದು. ವೈದ್ಯಕೀಯ ಪರಿಶೀಲನೆಯು ಜಿಲ್ಲಾ ಆಸ್ಪತ್ರೆಯಲ್ಲಿ ಮಾತ್ರ ಲಭ್ಯ. ಯಾವುದೇ ತಾಲೂಕು ಮಟ್ಟದ ಆಸ್ಪತ್ರೆಯಲ್ಲಿ ಲಭ್ಯವಿರುವುದಿಲ್ಲ. ಜಿಲ್ಲಾ ಮುಖ್ಯ ವೈದ್ಯಾಧಿಕಾರಿಗಳು ಕಾರ್ಡ್ ನೀಡುವ / ತಿರಸ್ಕರಿಸುವ ಅಂತಿಮ ನಿರ್ಣಾಯಕರಾಗಿರುತ್ತಾರೆ. ಆನ್‍ಲೈನ್ ಮೂಲಕ ಸಲ್ಲಿಸಿದ ಅರ್ಜಿಯಲ್ಲಿ ನಮೂದಿಸಿದ ವಿಳಾಸಕ್ಕೆ ಅಂಚೆಯ ಮೂಲಕ ಕಾರ್ಡ್‍ನನು ತಲುಪಿಸಲಾಗುವುದು ಎಂದು ಜಿಲ್ಲಾ ವಿಕಲಚೇತನ ಸಬಲೀಕರಣ ಅಧಿಕಾರಿ ನಿರಂಜನ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.