ಕುಂದಾಪುರ: ಇಲ್ಲಿನ ಮೂಡ್ಲಕಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ‘ಕಂಪ್ಯೂಟೇಶನಲ್ ಇಂಟೆಲಿಜೆನ್ಸ್, ಎಲೆಕ್ಟ್ರಾನಿಕ್ಸ್ ಮತ್ತು ಸ್ಮಾರ್ಟ್ ಟೆಕ್ನಾಲಜೀಸ್’ (ICCIEST-2026) ಎಂಬ ಬೃಹತ್ ಅಂತರರಾಷ್ಟ್ರೀಯ ಸಮ್ಮೇಳನವನ್ನು ಅತ್ಯಂತ ವೈಭವದಿಂದ ಉದ್ಘಾಟಿಸಲಾಯಿತು.

ದೀಪ ಬೆಳಗಿಸುವ ಮೂಲಕ ಚಾಲನೆಗೊಂಡ ಈ ಕಾರ್ಯಕ್ರಮದಲ್ಲಿ ಭಾರತದ ತಾಂತ್ರಿಕ ಮತ್ತು ರಕ್ಷಣಾ ವಲಯದ ಪ್ರಮುಖರು ಭಾಗವಹಿಸಿದ್ದರು.

ಸೈಬರ್ ಸೆಕ್ಯೂರಿಟಿ ಅಸೋಸಿಯೇಷನ್ ಆಫ್ ಇಂಡಿಯಾ (ನವದೆಹಲಿ) ಮಹಾನಿರ್ದೇಶಕರು ಮತ್ತು ಎಂ.ಐ.ಟಿ.ಕೆ ಮುಖ್ಯ ಸಲಹೆಗಾರರಾದ ವಿಜಯಂತ್ ಗೌರ್, ಖ್ಯಾತ ಸೈಬರ್ ಸುರಕ್ಷತಾ ತಜ್ಞರು ಮತ್ತು ಭಾರತೀಯ ಸೇನೆಯ ನಿವೃತ್ತ ಅಧಿಕಾರಿ, ಲೆಫ್ಟಿನೆಂಟ್ ಕರ್ನಲ್ (ಡಾ.) ಸಂತೋಷ್ ಖಾಡ್ಸರೆ, ನೀಲೇಶ್ ಜಿ. ಚೌಹಾಣ್: ಪೊಲೀಸ್ ನಿರೀಕ್ಷಕರು, ಸೈಬರ್ ಕ್ರೈಮ್ ಪೊಲೀಸ್ ಠಾಣೆ, ಉಡುಪಿ, ನೀಲೇಶ್ ಸೈಬರ್ ಕ್ರೈಮ್ ಸ್ಪೆಷಲಿಸ್ಟ್ ಮತ್ತು ಪೊಲೀಸ್ ಕಾನ್ಸ್ಟೇಬಲ್ ರವರು ಉಪಸ್ತಿತರಿದ್ದರು.

ಮುಖ್ಯ ಭಾಷಣ ಮಾಡಿದ ವಿಜಯಂತ್ ಗೌರ್ ಅವರು, “ನೀವು ಭವಿಷ್ಯದ ಡಿಜಿಟಲ್ ಕಾವಲುಗಾರರು” ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ಡಿಜಿಟಲೀಕರಣ ಹೆಚ್ಚುತ್ತಿರುವ ಈ ಕಾಲದಲ್ಲಿ ಸೈಬರ್ ಭದ್ರತೆ ಕೇವಲ ವೃತ್ತಿಯಲ್ಲ, ಅದು ರಾಷ್ಟ್ರಕ್ಕೆ ಮಾಡುವ ಸೇವೆ ಎಂದು ಅವರು ಪ್ರತಿಪಾದಿಸಿದರು.ಲೆಫ್ಟಿನೆಂಟ್ ಕರ್ನಲ್ ಸಂತೋಷ್ ಖಾಡ್ಸರೆ ಅವರು ರೈತ ಕುಟುಂಬದಿಂದ ಬಂದು ಭಾರತೀಯ ಸೇನೆ ಮತ್ತು ತಾಂತ್ರಿಕ ಕ್ಷೇತ್ರದಲ್ಲಿ ತಾವು ಸಾಧಿಸಿದ ಹಾದಿಯನ್ನು ಹಂಚಿಕೊಂಡರು, ಇದು ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬಿತು.

ಉಡುಪಿ ಸೈಬರ್ ಕ್ರೈಮ್ ಇನ್ಸ್ಪೆಕ್ಟರ್ ನೀಲೇಶ್ ಜಿ. ಚೌಹಾಣ್ ಅವರು ಸಮಾಜದಲ್ಲಿ ನಡೆಯುತ್ತಿರುವ ಇತ್ತೀಚಿನ ಸೈಬರ್ ವಂಚನೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದರು. ಇದೇ ವೇಳೆ ಮಾತನಾಡಿದ ಪೊಲೀಸ್ ಕಾನ್ಸ್ಟೇಬಲ್ ನೀಲೇಶ್ ಅವರು, ಎಂ.ಐ.ಟಿ.ಕೆ 2008 ರಿಂದ ಇಂದಿನವರೆಗೂ ಸಾಧಿಸಿರುವ ಪ್ರಗತಿಯನ್ನು ಶ್ಲಾಘಿಸಿದರು. ಅಲ್ಲದೆ, ಸೈಬರ್ ಪ್ರಕರಣಗಳಲ್ಲಿ ಪೊಲೀಸರಿಗೆ ನೆರವಾಗಲು ಮತ್ತು ಪ್ರಾಯೋಗಿಕ ಅನುಭವ ಪಡೆಯಲು ವಿದ್ಯಾರ್ಥಿಗಳಿಗೆ ಪೊಲೀಸ್ ಠಾಣೆಯಲ್ಲಿ ಇಂಟರ್ನ್ಶಿಪ್ (Internship)ಮಾಡುವಂತೆ ಮುಕ್ತ ಆಹ್ವಾನ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಮಕೃಷ್ಣ ಹೆಗ್ಡೆ ಅವರು ಎಂ.ಐ.ಟಿ.ಕೆಯ ಸಂಶೋಧನಾ ಬದ್ಧತೆಯ ಬಗ್ಗೆ ಮಾತನಾಡಿದರು. ಡಾ. ಚಂದ್ರ ವಿಜಯ್ ಸಿಂಗ್ ಅವರು ಸಮ್ಮೇಳನದ ಉದ್ದೇಶಗಳನ್ನು ವಿವರಿಸಿದರೆ, ಪ್ರೊ. ಶ್ರೀನಿಧಿ ಅತಿಥಿಗಳನ್ನು ಪರಿಚಯಿಸಿದರು. ಸೃಷ್ಟಿ ಅವರು ವಂದನಾರ್ಪಣೆ ಮಾಡಿದರು.
ಈ ಸಮ್ಮೇಳನವು ಪ್ರಾದೇಶಿಕ ಮಟ್ಟದಲ್ಲಿ ಬೌದ್ಧಿಕ ಚರ್ಚೆಯ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ. ಹೈಬ್ರಿಡ್ ಮೋಡ್ ನಲ್ಲಿ ನಡೆಯುತ್ತಿರುವ ಈ ಸಮ್ಮೇಳನದಲ್ಲಿ 115 ಕ್ಕಿಂತಲೂ ಹೆಚ್ಚು ಸಂಶೋಧನಾ ಪ್ರಬಂಧಗಳು ಮಂಡನೆಯಾಗುತ್ತಿರುವುದು ಗಮನಾರ್ಹವಾಗಿದೆ.

















