ಖಡಕ್ ಐಪಿಎಸ್ ​​ಅಧಿಕಾರಿ ಮಧುಕರ್​ ಶೆಟ್ಟಿ ಇನ್ನಿಲ್ಲ

ಬೆಂಗಳೂರು: ಹೈದರಾಬಾದ್ ನ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ಒಂದು ವಾರದಿಂದ ಹೆಚ್1​ಎನ್1 ಖಾಯಿಲೆಯಿಂದ ಬಳಲುತ್ತಿದ್ದ  ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ (47) ಅವರು ಚಿಕಿತ್ಸೆ ಫಲಕಾರಿಯಾಗದೆ  ಶುಕ್ರವಾರ ರಾತ್ರಿ  9 ಗಂಟೆಗೆ ಕೊನೆಯುಸಿರೆಳೆದಿದ್ದಾರೆ.
ಖ್ಯಾತ ಪತ್ರಕರ್ತ ದಿವಂಗತ ವಡ್ಡರ್ಸೆ ರಘುರಾಮ್ ಶೆಟ್ಟಿ ಅವರ ಪುತ್ರ ,1999ರ ಬ್ಯಾಚ್‌ ಐಪಿಎಸ್ ಅಧಿಕಾರಿಯಾಗಿರುವ ಮಧುಕರ್ ಶೆಟ್ಟಿ, ಕರ್ನಾಟಕದ ಉಡುಪಿ ಜಿಲ್ಲೆಯವರು.
ಅವರು ಹೊಸದಿಲ್ಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಿಂದ ಸಮಾಜಶಾಸ್ತ್ರದಲ್ಲಿ ಎಂ.ಎ. ಮತ್ತು ನ್ಯೂಯಾರ್ಕ್ ನ ಯೂನಿವರ್ಸಿಟಿಯಲ್ಲಿ ಪಿ.ಎಚ್.ಡಿ ಪದವಿ ಪಡೆದಿದ್ದರು . ಚಿಕ್ಕಮಗಳೂರು ಎಸ್ಪಿಯಾಗಿ, ಲೋಕಾಯುಕ್ತ ಎಸ್ಪಿಯಾಗಿ  ಅವರು ಖಡಕ್ ಹಾಗು ಜನಪರ ಅಧಿಕಾರಿಯಾಗಿ ಖ್ಯಾತಿ ಗಳಿಸಿದ್ದರು.
 
ಭ್ರಷ್ಟರ ಪಾಲಿನ ಸಿಂಹ ಸ್ವಪ್ನ ಐ.ಪಿ.ಎಸ್. ಮಧುಕರ್ ಶೆಟ್ಟಿ
ಒಮ್ಮೆ ಮಧುಕರ್ ಶೆಟ್ಟಿಯವರು  ಶಾಸಕ ವೈ ಸಂಪಂಗಿಯನ್ನ ಅರೆಷ್ಟ್ ಮಾಡುವಾಗ.”ಇರ್ರೀ.. ಸಿ.ಎಮ್. ಗೆ ಕಾಲ್ ಮಾಡ್ತಾ ಇದೀನಿ.. ಏನ್ ಡ್ರಾಮಾ ಇದೆಲ್ಲಾ?” ಎಂದು ತನ್ನ ಪೋನ್ ಕಿವಿಗೆ ಹಚ್ಚುತ್ತಿದ್ದ ಸಂಪಂಗಿಯ ಕೈನಿಂದ ಪೋನ್ ಕಿತ್ತುಕೊಂಡು, “ಸಿ.ಎಮ್. ಪಿ.ಎಮ್. ಗೆಲ್ಲಾ ಆಮೇಲೆ ಕಾಲ್ ಮಾಡಿ.. ಇವಾಗ ನಡೀರಿ” ಎಂದದ್ದು ಇದೇ ಮಧುಕರ್ ಶೆಟ್ಟರು. ಅವರು ಖಡಕ್ ಹಾಗು ಜನಪರ ಅಧಿಕಾರಿಯಾಗಿ , ಭ್ರಷ್ಟರ ಪಾಲಿನ ಸಿಂಹ ಸ್ವಪ್ನ ವಾಗಿದ್ದರು .