ಹೊರ ರಾಜ್ಯದಿಂದ ಬಂದಲ್ಲಿ ಕಡ್ಡಾಯ ಸರ್ಕಾರಿ ಕ್ವಾರಂಟೈನ್: ಜಿಲ್ಲಾಧಿಕಾರಿ

ಉಡುಪಿ, ಮೇ 2:  ಹೊರರಾಜ್ಯದಿಂದ ಜಿಲ್ಲೆಗೆ ಆಗಮಿಸುವವರು ಕಡ್ಡಾಯವಾಗಿ ಸರ್ಕಾರಿ ಕ್ವಾರಂಟೈನ್‍ಗೆ ಒಳಪಡುವ ಷರತ್ತಿನೊಂದಿಗೆ, ಉಡುಪಿ ಜಿಲ್ಲೆ ಪ್ರವೇಶಿಸಲು ಅನುಮತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಅವರು ಶನಿವಾರ, ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ, ಜಿಲ್ಲೆಗೆ ಅಂತರ್ ಜಿಲ್ಲೆ, ರಾಜ್ಯದಿಂದ ಜನರನ್ನು ಕರೆತರುವ  ಮತ್ತು ಕಳುಹಿಸಿ ಕೊಡುವ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯ ನಾಗರೀಕರ ಆರೋಗ್ಯ ರಕ್ಷಣೆಯ ಉದ್ದೇಶದಿಂದ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗಿದು, ಹೊರರಾಜ್ಯದಿಂದ ಬರುವವರು  ಮತ್ತು ಹೊರ ಜಿಲ್ಲೆಯಿಂದ ಬರುವವರು ಕಡ್ಡಾಯವಾಗಿ ಸರ್ಕಾರಿ ಕ್ವಾರಂಟೈನ್ ಗೆ ಒಳಪಡಬೇಕಾಗುತ್ತದೆ, ಜಿಲ್ಲಾಧಿಕಾರಿಗಳು ಒಪ್ಪಗೆ ಸೂಚಿಸುವ ವರೆಗೂ ಜಿಲ್ಲೆಯ ಗಡಿಯಲ್ಲಿ , ಹೊರ ರಾಜ್ಯದಿಂದ ಆಗಮಿಸುವ ಯಾವುದೇ   ವಾಹನಗಳಿಗೆ ಪ್ರವೇಶ ನೀಡದಂತೆ ಸೂಚಿಸಿದ ಜಿಲ್ಲಾಧಿಕಾರಿ ಜಿ.ಜಗದೀಶ್, ಹೊರರಾಜ್ಯದಿಂದ ಆಗಮಿಸುವವರನ್ನು ಉಡುಪಿಯ ಎಂಜಿಎಂ ಮೈದಾನದಲ್ಲಿ  ವ್ಯೆದ್ಯಕೀಯ ಪರೀಕ್ಷೆಗೆ ಒಳಪಡಿಸಿ ಸಂಬಂದಪಟ್ಟ ತಾಲೂಕು ಕೇಂದ್ರಗಳಿಗೆ ಕಳುಹಿಸಲಾಗುವುದು ಅಲ್ಲಿ ಅವರನ್ನು ಸರ್ಕಾರಿ ಕ್ವಾರಂಟೈನ್ ಗಾಗಿ  ವಿವಿಧ ಹಾಸ್ಟಲ್ ಗಳನ್ನು ನಿಗಧಿಗೊಳಿಸಿದ್ದು, ಹೋಟಲ್ ಗಳನ್ನು ಸಹ ನಿಗಧಿಗೊಳಿಸಲಾಗಿದೆ, ಹೋಟೆಲ್ ಗಳಲ್ಲಿ ಕ್ವಾರಂಟೈನ್ ಆಗುವವವರು ಹೋಟೆಲ್ ನ ವೆಚ್ಚವನ್ನು ಸ್ವತಃ ಭರಿಸಬೇಕು , ಇದಕ್ಕಾಗಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿನ ಹಾಸ್ಟೆಲ್ ಗಳು ಮತ್ತು ಹೋಟೆಲ್ ಗಳನ್ನು ಗುರುತಿಸುವಂತೆ ಎಲ್ಲಾ ತಹಸೀಲ್ಧಾರ್ ಗಳಿಗೆ ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಅಲ್ಲದೇ ಜಿಲ್ಲೆಯ ಪ್ರತೀ ಗ್ರಾಮ ಪಂಚಾಯತ್ ಗಳಲ್ಲಿ ಹೊರರಾಜ್ಯದಿಂದ ಬರುವ ಕನಿಷ್ಠ 25 ಜನರನ್ನು ಕ್ವಾರಂಟೈನ್ ಮಾಡಲು ಬೇಕಾದ ಎಲ್ಲಾ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಎಲ್ಲಾ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದರು.

ಜಿಲ್ಲೆಯಲ್ಲಿ ಪ್ರಸ್ತುತ  ದಿನಬಳಕೆ ವಸ್ತು ಖರೀದಿಗೆ ನೀಡಿರುವ ಸಮಯವನ್ನು ಬೆಳಗ್ಗೆ 7 ರಿಂದ ಮಧ್ಯಾಹ್ನ 1 ರ ವರೆಗೆ ವಿಸ್ತರಿಸಲಾಗಿದ್ದು, ಸಂಜೆ 5 ರಿಂದ 7 ರ ವರೆಗೆ ಅಂಗಡಿಗಳಲ್ಲಿ ಕೆಲಸ ಮಾಡುವ ನೌಕರರು ಮನೆಗೆ ತೆರಳಲು ಅವಕಾಶ ನೀಡಲಾಗುವುದು , ಜಿಲ್ಲೆಯೊಳಗಿನ ಬಸ್ ಸಂಚಾರವನ್ನು ಇನ್ನೂ ಒಂದು ವಾರದ ಕಾಲ ಆರಂಭಿಸುವುದಿಲ್ಲ, ಸಲೂನ್, ಸ್ಪಾ, ಗಳನ್ನೂ ಸಹ ಇನ್ನೂ ಒಂದು ವಾರ ತೆರೆಯಲು ಅವಕಾಶವಿಲ್ಲ, ರಿಕ್ಷಾಗಳಲ್ಲಿ ಒಬ್ಬ ಗ್ರಾಹಕರನ್ನು ಮಾತ್ರ ಕರೆದೊಯ್ಯಲು ಅವಕಾಶವಿದೆ ಎಂದು   ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

ಅಂತರ ಜಿಲ್ಲಾ ಪ್ರವಾಸಕ್ಕೆ ಅನುಮತಿ ಇಲ್ಲವಾಗಿದ್ದು, ವೈದ್ಯಕೀಯ ಕಾರಣ ಹೊರತುಪಡಿಸಿ ಇತರೆ ಕಾರಣಕ್ಕೆ ಪಾಸ್ ಗಳನ್ನು ನೀಡುವುದಿಲ್ಲ, ಪಾಸ್ ಇಲ್ಲದೇ ಅಕ್ರಮ ಪ್ರವೇಶಿಸವವರನ್ನು ಕಡ್ಡಾಯವಾಗಿ ಸರ್ಕಾರಿ ಕ್ವಾರಂಟೈನ್ ಗೆ ಒಳಪಡಿಸಲಾಗುವುದು ಎಂದು ಹೇಳಿದರು.

ಹೊರರಾಜ್ಯಗಳಿಗೆ ತೆರಳಬೇಕಾದವರು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಅನುಮತಿ ಪಡೆಯುವಂತೆ ತಿಳಿಸಿದ ಜಿಲ್ಲಾಧಿಕಾರಿ ಜಿ.ಜಗದೀಶ್, ಹೊರರಾಜ್ಯಗಳಿಗೆ ತೆರಳುವವರನ್ನು ಬೀಡಿನಗುಡ್ಡೆ ಮೈದಾನದಲ್ಲಿ ಪರೀಕ್ಷಿಸಿ, ಅನುಮತಿ ಬಂದ ನಂತರ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು, ಜಿಲ್ಲೆಯಲ್ಲಿರುವ ವಲಸೆ ಕಾರ್ಮಿಕರನ್ನು ನಾಳೆ ರಾತ್ರಿಯೊಳಗೆ ಕಳುಹಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಎಲ್ಲಾ ತಹಸೀಲ್ದಾರ್ ಗಳಿಗೆ ಸೂಚಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕಿರಣ್ ಪಡ್ನೇಕರ್ ಉಪಸ್ಥಿತರಿದ್ದರು.

ಜಿಲ್ಲೆಯ ಎಲ್ಲಾ ತಾಲೂಕುಗಳು ತಹಸೀಲ್ಧಾರ್ ಗಳು, ತಾ.ಪಂ ಕಾರ್ಯ ನಿರ್ವಹಣಾಧಿಕಾರಿಗಳು, ಆರೋಗ್ಯ ಇಲಾಖೆ ಮತ್ತು ಇತರೆ ಇಲಖೆಯ ಅಧಿಕರಿಗಳು ಉಪಸ್ಥಿತರಿದ್ದರು.