ಹಿರಿಯಡಕ: ಪರೀಕ್ಷೆಯ ಭಯದಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ನೇಣಿಗೆ ಶರಣು

ಹಿರಿಯಡ್ಕ: ಪರೀಕ್ಷೆಯ ಭಯದಿಂದ ಬಾಲಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ‌ ತಾಲೂಕಿನ ಬೊಮ್ಮರಬೆಟ್ಟು ಗ್ರಾಮದ ಕಾಜರಗುತ್ತು ರಸ್ತೆ ಎಂಬಲ್ಲಿ ನಡೆದಿದೆ.

ಬೊಮ್ಮರಬೆಟ್ಟು ಗ್ರಾಮದ ಕಾಜರಗುತ್ತು ರಸ್ತೆಯ ಕುಕ್ಕುದಕಟ್ಟೆ ನಿವಾಸಿ ಜಿಸಾನ್ ಆತ್ಮಹತ್ಯೆಗೆ ಮಾಡಿಕೊಂಡ ಬಾಲಕ. ಈತ ಮಣಿಪಾಲ ಎಂಜೆಸಿ ಕಾಲೇಜಿನಲ್ಲಿ 10ನೇ ತರಗತಿಯ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿದ್ದನು. ಆದರೆ, ಕಳೆದ ಒಂದು ವಾರದಿಂದ ಶಾಲೆಗೆ ಸರಿಯಾಗಿ ಹೋಗದೆ ಮನೆಯಲ್ಲಿಯೇ ಇದ್ದನು. ಅಲ್ಲದೆ, ಫೆ.21ರಂದು ಪರೀಕ್ಷೆ ಇದ್ದು, ಅದಕ್ಕೂ ಹೋಗದೆ ಮನೆಯಲ್ಲಿಯೇ ಇದ್ದನು.‌ ಇದಕ್ಕೆ ತಾಯಿ ಆಕ್ಷೇಪ ವ್ಯಕ್ತಪಡಿಸಿದ್ದರು‌.

ತಾಯಿ ಅಂದು ಬೆಳಿಗ್ಗೆ 9:15 ಕ್ಕೆ ಕೆಲಸಕ್ಕೆ ಹೋಗಿದ್ದರು. ಆಗ ಜಿಸಾನ್ ಮನೆಯಲ್ಲಿಯೇ ಇದ್ದನು. ಅವರು ಸಂಜೆ 6:15ಕ್ಕೆ ಕೆಲಸ ಮುಗಿಸಿ ಮನೆಗೆ ಬಂದಾಗ ಎದುರು ಬಾಗಿಲಿನ ಚಿಲಕ ಹಾಕಿದ್ದು, ಹಿಂದಿನ ಬಾಗಿಲಿನಿಂದ ಒಳಗೆ ಹೋಗಿ ನೋಡಿದಾಗ ಜಿಸಾನ್ ಮಲಗುವ ಕೋಣೆಯಲ್ಲಿ ಜಂತಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಆತ ಪರೀಕ್ಷೆಯ ಭಯದಿಂದ ಅಥವಾ ಇನ್ಯಾವುದೋ ವೈಯಕ್ತಿಕ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.