ಹಿಂದುಳಿದ ವರ್ಗಗಳ ಕಾನೂನು ಪದವೀಧರಿಗೆ ತರಬೇತಿ: ಅರ್ಜಿ ಆಹ್ವಾನ

ಉಡುಪಿ, ಜುಲೈ 5: 2019-20ನೇ ಸಾಲಿಗೆ ಹಿಂದುಳಿದ ವರ್ಗಗಳ ಕಾನೂನು ಪದವೀಧರರಿಗೆ ವಕೀಲಿ ವೃತ್ತಿಯಲ್ಲಿ ತರಬೇತಿ ನೀಡಿ ಶಿಷ್ಯವೇತನ ಮಂಜೂರು ಮಾಡಲು ಅರ್ಹ ಮತ್ತು ಆಸಕ್ತ ಕಾನೂನು ಪದವೀಧರರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ನಿಗಧಿತ ಅರ್ಜಿ ನಮೂನೆಗಳನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮಣಿಪಾಲ, ಉಡುಪಿ ಕಛೇರಿಯಿಂದ ಕಛೇರಿ ಕೆಲಸದ ಸಮಯದಲ್ಲಿ ಪಡೆದುಕೊಳ್ಳಬಹುದು.
ಅರ್ಜಿ ಸಲ್ಲಿಸುವ ಕಾನೂನು ಪದವೀಧರರು ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ, ಮತ್ತು 3ಬಿ ಗಳಿಗೆ ಸೇರಿದವರಾಗಿರಬೇಕು. ಪ್ರವರ್ಗ-1 ಕ್ಕೆ 3,50,000 ರೂ. (ರೂ. ಮೂರು ಲಕ್ಷದ ಐವತ್ತು ಸಾವಿರ) ಹಾಗೂ ಇತರೆ ಪ್ರವರ್ಗಗಳಿಗೆ ಸೇರಿದ ಅಭ್ಯರ್ಥಿ ಪೋಷಕರ ಕುಟುಂಬದ ವಾರ್ಷಿಕ ಆದಾಯವು 2,50,000 ರೂ. (ರೂ. ಎರಡು ಲಕ್ಷದ ಐವತ್ತು ಸಾವಿರ)ಗಳ ಮಿತಿಯಲ್ಲಿರಬೇಕು.
ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಿಂದ ಹಿಂದಿನ ಎರಡು ವರ್ಷಗಳೊಳಗೆ ಕಾನೂನು ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು
ಹಿಂದುಳಿದ ವರ್ಗಗಳ ಪ್ರವರ್ಗ- 1, 2ಎ, 3ಎ, ಮತ್ತು 3ಬಿ, ಗೆ ಸೇರಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ಕೊನೆಯ ದಿನಾಂಕದಂದು ಗರಿಷ್ಠ 38 ವರ್ಷಗಳ ವಯೋಮಿತಿಯಲ್ಲಿ ಇರಬೇಕು.
ಅಭ್ಯರ್ಥಿಗಳು ತಮ್ಮ ಹೆಸರನ್ನು ಬಾರ್ ಕೌನ್ಸಿಲ್‍ನಲ್ಲಿ ನೊಂದಾಯಿಸಿರಬೇಕು. ತರಬೇತಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಅನುಭವಿ ಹಾಗೂ ನುರಿತ ವಕೀಲರ ಅಧೀನದಲ್ಲಿ ವಕೀಲಿ ವೃತ್ತಿಯಲ್ಲಿ ತರಬೇತಿ ಕೊಡಿಸಿ ನಾಲ್ಕು ವರ್ಷಗಳವರೆಗೆ ಮಾಹೆಯಾನ 4,000 ರೂ.ಗಳಂತೆ ಶಿಷ್ಯವೇತನ ನೀಡಲಾಗುವುದು.
ಆಸಕ್ತ ಅಭ್ಯರ್ಥಿಗಳು ನಿಗದಿತ ಅರ್ಜಿಯನ್ನು ಪಡೆದು ಸಂಪೂರ್ಣವಾಗಿ ಭರ್ತಿಮಾಡಿ, ಕಾನೂನು ಪದವಿಗೆ ಸಂಬಂದಿಸಿದ ಎಲ್ಲಾ ಅಂಕಪಟ್ಟಿಗಳ ದೃಡೀಕೃತ ಪ್ರತಿಗಳು, ಬಾರ್ ಕೌನ್ಸಿಲ್ ನೋಂದಾವಣೆ ಪತ್ರದ ಪ್ರತಿ, ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ವಿವರ, ಜಾತಿ ಮತ್ತು ಆದಾಯ ಪ್ರಮಾಣ, ಪತ್ರಗಳನ್ನು ಲಗತ್ತಿಸಿ ಸಲ್ಲಿಸಬೇಕು.
ಅರ್ಜಿಗಳನ್ನು ಆವಶ್ಯವಿರುವ ದಾಖಲಾತಿಗಳೊಡನೆ ಜುಲೈ 22 ರ ಒಳಗೆ ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆ, ಜಿಲ್ಲಾ ಕಚೇರಿಗಳ ಸಂಕೀರ್ಣ, ರಜತಾದ್ರಿ, “ಬಿ” ಬ್ಲಾಕ್, ಮಣಿಪಾಲ ಉಡುಪಿ, ಇವರಿಗೆ ಸಲ್ಲಿಸಬೇಕು. ನಿಗಧಿತ ದಿನಾಂಕದ ನಂತರ ಬರುವ ಮತ್ತು ಅಪೂರ್ಣವಾದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆ, ಮಣಿಪಾಲ, ಉಡುಪಿ, (ದೂರವಾಣಿ ಸಂಖ್ಯೆ; 0820-2574881, 2573881) ಅನ್ನು ಸಂಪರ್ಕಿಸುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.