ಹಿಂದೂ ಜಾಗರಣಾ ವೇದಿಕೆಯ ಮುಖಂಡ ಸಮಿತ್ ರಾಜ್ ಧರೆಗುಡ್ಡೆ ಬಂಧನ

ಮೂಡುಬಿದಿರೆ: ರಸ್ತೆ ಅಪಘಾತವೊಂದರಲ್ಲಿ ಬಸ್ಸು ಮಾಲಕನಿಂದ ಗಾಯಾಳುಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡುವಲ್ಲಿ ಮುಂಚೂಣಿಯಲ್ಲಿ ಇದ್ದು ಹೋರಾಟ ನಡೆಸಿದ ಹಿಂದೂ ಜಾಗರಣಾ ವೇದಿಕೆಯ ಮುಖಂಡನೊಬ್ಬನನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ.

ಹಿಂದೂ ಜಾಗರಣಾ ವೇದಿಕೆಯ ಮುಖಂಡ ಸಮಿತ್ ರಾಜ್ ಧರೆಗುಡ್ಡೆ ಬಂಧಿತ.ಕಾರ್ಕಳ ಅನಂತಶಯನ ದೇವಳ ರಸ್ತೆಯ ವ್ಯಾಪಾರ ಸಂಕೀರ್ಣವೊಂದರಲ್ಲಿ ಮೂಡಬಿದಿರೆ ಪೊಲೀಸರ ತಂಡವು ಸಮಿತ್‌ರಾಜ್‌ನನ್ನು ಬಂಧಿಸಿದ್ದಾರೆ.

2024 ನವಂಬರ್ 11 ನೇ ತಾರೀಕಿನೊಂದು ಮೂಡುಬಿದ್ರಿ ಮೀಜಾರು ಬಳಿ ರಾಷ್ಟ್ರೀಯ ಹೆದ್ದಾರಿ -169ರಲ್ಲಿ ರಸ್ತೆ ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ಮಾಸ್ಟರ್ ನಾಮಾಂಕಿತದ ಖಾಸಗಿ ಬಸ್ಸು ಡಿಕ್ಕಿ ಹೊಡೆದ ಪರಿಣಾಮವಾಗಿ ದ್ವಿಚಕ್ರ ವಾಹನ ಸವಾರಿಗಳಾದ ಸುಮಿತ್ರಾ ಹಾಗೂ ಅವರ ಮಗಳು ಸಾನ್ವಿ ಗಾಯಗೊಂಡಿದ್ದರು. ಬಸ್ಸು ಚಾಲಕನ ನಿರ್ಲಕ್ಷ ರೀತಿಯಲ್ಲಿ ವಾಹನ ಚಲಾಯಿಸಿರುವುದು ಘಟನೆಗೆ ಕಾರಣವೆನ್ನಲಾಗಿದ್ದು, ಆ ಸಂದರ್ಭದಲ್ಲಿ ನಾಗರಿಕರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು.

ನಾಗರಿಕರು ಹಾಗೂ ಹಿಂದು ಪರಸಂಘಟನೆಯ ಕಾರ್ಯಕರ್ತರು ಹೋರಾಟಕ್ಕೆ ಇಳಿದಿದ್ದು, ಒಂದಿಷ್ಟು ಬಿಗುವಿನ ವಾತಾವರಣ ತಲೆದೋರಿತ್ತು. ಆ ಹೋರಾಟದಲ್ಲಿ ಸಮಿತ್‌ರಾಜ್ ಧರೆಗುಡ್ಡೆ ಮುಂಚೂಣಿಯಲ್ಲಿ ಇದ್ದರೆಂಬ ಮಾಹಿತಿ ತಿಳಿದುಬಂದಿದೆ.

ಗಾಯಾಳುಗಳಗೆ ಪರಿಹಾರ ನೀಡಬೇಕೆಂದು ಪಟ್ಟು ಹಿಡಿದಿರುವುದರಿಂದ ಅಪಘಾತ ಸಂಭವಿಸಿದ ಕೆಲವೇ ಗಂಟೆಯೊಳಗಾಗಿ ಬಸ್ಸು ಮಾಲಕ ರೂ. 5 ಲಕ್ಷವನ್ನು ಗಾಯಾಳುಗಳಿಗೆ ಪರಿಹಾರ ರೂಪದಲ್ಲಿ ನೀಡುವ ಮುಖಾಂತರ ವಿವಾದವು ಇತ್ಯರ್ಥಗೊಂಡಿತು.

ಇತ್ತ ಬಸ್ಸಿನ ಮಾಲಕ ಈ ಕುರಿತು ಮೂಡುಬಿದಿರೆ ಠಾಣೆಗೆ ದೂರು ನೀಡಿ, ಬಸ್ಸಿಗೆ ಹಾನಿಗೊಳಿಸಿರುವ ಹಾಗೂ ತನ್ನಿಂದ ರೂ.5 ಲಕ್ಷ ಬೇಡಿಕೆ ಮುಂದಿಟ್ಟು ವಸೂಲಿ ನಡೆಸಿರುವ ಕುರಿತು ದೂರು ಸಲ್ಲಿಸಿದ್ದರು. ಇದೇ ವಿಚಾರವನ್ನು ಮುಂದಿಟ್ಟ ಪೊಲೀಸರು ತನಿಖೆ ನಡೆಸಿ ಸಮಿತ್‌ರಾಜ್‌ನನ್ನು ಪೊಲೀಸರು ಬಂಧಿಸಿದ್ದಾರೆ.