ಕುಂದಾಪುರ: ಮಂದಾರ್ತಿ ದೇವಸ್ಥಾನಕ್ಕೆ ರಜತ ರಥ ಸಮರ್ಪಣೆ

ಕುಂದಾಪುರ: ಸ್ವಪ್ರಯತ್ನಕ್ಕೆ ದೇವರ ಅನುಗ್ರಹವಿರುತ್ತದೆ. ನಮ್ಮ ಪ್ರಯತ್ನಕ್ಕೆ ದೇವರ ಅನುಗ್ರಹ ಸೇರಿದಾಗ ಮಾತ್ರವೇ ಕಾರ್ಯ ಸಫಲವಾಗುತ್ತದೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹೇಳಿದರು.

ಅವರು ಮಂಗಳವಾರ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ದಾನಿಗಳಾದ ಹೆಗ್ಗುಂಜೆ ಬಡಾಮನೆ ವಿಶ್ವನಾಥ ಹೆಗ್ಡೆ, ಹೆಗ್ಗುಂಜೆ ಚಾವಡಿಮನೆ ರುದ್ರಮ್ಮ ಹೆಗ್ಗಡ್ತಿ, ಅಮರನಾಥ ಶೆಟ್ಟಿ ಮತ್ತು ಕುಟುಂಬಸ್ಥರು ಸೇವಾ ರೂಪದಲ್ಲಿ ನೀಡಿದ ನೂತನ ರಜತ ರಥ ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಿದರು.

ನಾವು ನೀಡಿದ್ದು, ಮಾಡಿದ್ದು ಎನ್ನುವುದಕ್ಕಿಂತ ದೇವರೇ ಮಾಡಿಸಿದ್ದು ಎನ್ನುವುದು ಅರ್ಥಪೂರ್ಣ. ದುಡಿಮೆಯ ಸ್ವಲ್ಪ ಅಂಶವನ್ನು ಧಾರ್ಮಿಕ ಚಟುವಟಿಕೆ, ಸೇವಾ ಕಾರ್ಯಕ್ಕೆ ವಿನಿಯೋಗಿಸಿದಾಗ ಜೀವನ ಸಾರ್ಥಕವಾಗುತ್ತದೆ ಎಂದರು.

ಅತಿಥಿಗಳಾಗಿ ಬೆಂಗಳೂರು ವಿ.ವಿ.ಯ ವಿತ್ತಾಧಿಕಾರಿ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ, ದೇವಸ್ಥಾನದ ಅನುವಂಶಿಕ ಮೊಕ್ತೇಸರ ಎಚ್. ಧನಂಜಯ ಶೆಟ್ಟಿ ಕಾರ್ಯನಿರ್ವಹಣಾಧಿಕಾರಿ ಎಸ್. ಸಿ. ಕೊಟಾರಗಸ್ತಿ, ಹೆಗ್ಗುಂಜೆ ಚಾವಡಿಮನೆ ವಿಜಯನಾಥ ಹೆಗ್ಡೆ, ಅಮರನಾಥ ಶೆಟ್ಟಿ, ಅನುವಂಶಿಕ ಮೊಕ್ತೇಸರ ಎಚ್. ಸುರೇಂದ್ರ ಶೆಟ್ಟಿ, ಎಚ್. ಪ್ರಭಾಕರ ಶೆಟ್ಟಿ, ಎಚ್. ಶಂಭು ಶೆಟ್ಟಿ, ಆರ್. ಶ್ರೀನಿವಾಸ ಶೆಟ್ಟಿ, ಹೆಗ್ಗುಂಜೆ ನಾಲ್ಕು ಮನೆಯವರು, ಅರ್ಚಕ ವೃಂದ, ಸಿಬ್ಬಂದಿ, ಭಕ್ತರು ಉಪಸ್ಥಿತರಿದ್ದರು.

ದಾನಿಗಳನ್ನು ಸನ್ಮಾನಿಸಲಾಯಿತು. ರಥಶಿಲ್ಪಿ ರಾಜಗೋಪಾಲ ಆಚಾರ್ಯ, ರಥ ಕೊಠಡಿ ನಿರ್ಮಾಣ ಮಾಡಿದ ಕಳಿ ಚಂದ್ರಯ್ಯ ಆಚಾರ್ಯ ಮತ್ತಿತರನ್ನು ಗೌರವಿಸಲಾಯಿತು.

ಎಚ್. ಉದಯ ಭಾಸ್ಕರ ಶೆಟ್ಟಿ ಸ್ವಾಗತಿಸಿ, ಎನ್. ಆರ್. ದಾಮೋದರ ಶರ್ಮ ಬಾರಕೂರು ಕಾರ್ಯಕ್ರಮ ನಿರೂಪಿಸಿದರು.