ಹೆಬ್ರಿ: ಹೆಬ್ರಿ–ಮಡಾಮಕ್ಕಿ ಮೂಲಕ ಕೊಲ್ಲೂರು ಸಂಪರ್ಕಿಸುವ ಹೆಬ್ರಿ–ಕುಚ್ಚೂರು–ಮಡಾಮಕ್ಕಿ ರಸ್ತೆಯ ಕಂಚರ್ಕಳ್ ಎಂಬಲ್ಲಿ ಸಂಪರ್ಕ ಕಡಿತಗೊಂಡಿರುವ ಪ್ರದೇಶಕ್ಕೆ ಮಂಗಳವಾರ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಭೇಟಿ ನೀಡಿದರು.
8 ತಿಂಗಳ ಹಿಂದೆಯೇ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೇತುವೆ ಕಾಮಗಾರಿ ಬಗ್ಗೆ ಮನವರಿಕೆ ಮಾಡಿದ್ದೇವೆ. ಆದರೆ, ಅಧಿಕಾರಿಗಳು ತಡವಾಗಿ ಮಳೆಗಾಲ ಸಮೀಪಿಸುತ್ತಿರುವಾಗಲೇ ಸೇತುವೆ ನಿರ್ಮಾಣ ಕಾಮಗಾರಿ ಆರಂಭಿಸಿದ್ದ ಹಿನ್ನೆಲೆ ಸಮಸ್ಯೆ ಎದುರಾಗಿದೆ. ಸಂಚಾರಕ್ಕೆ ಬದಲಿ ವ್ಯವಸ್ಥೆ ಮಾಡಿರುವ ರಸ್ತೆಯು ಮಳೆಗೆ ಕೊಚ್ಚಿ ಹೋಗಿದ್ದು, ಶಾಲಾ–ಕಾಲೇಜು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಬಹುದೂರ ಸುತ್ತಾಡಿ ಹೆಬ್ರಿಗೆ ಬರುತ್ತಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಕುಚ್ಚೂರು ಶ್ರೀಕಾಂತ್ ಪೂಜಾರಿ ಜಿಲ್ಲಾಧಿಕಾರಿಗೆ ತಿಳಿಸಿದರು.
ಜನರಿಗೆ ಸಮಸ್ಯೆ ಆಗಬಾರದು, ಅಭಿವೃದ್ಧಿಗೂ ತೊಡಕಾಗಬಾರದು. ಕಂಚರ್ಕಳ್ ರಸ್ತೆಯಲ್ಲಿ ಹಗಲು ಹೊತ್ತು ಮಾತ್ರ ಸಂಚಾರಕ್ಕೆ ಅವಕಾಶ ನೀಡಿ ರಾತ್ರಿ ಹೊತ್ತು ಸಂಚಾರ ನಿಷೇಧ ಮಾಡಿ, ಘನ ವಾಹನಗಳ ಸಂಚಾರಕ್ಕೆ ಬದಲಿ ರಸ್ತೆಯಲ್ಲಿ ಅವಕಾಶ ನೀಡಿ ಎಂದು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚಿಸಿದರು. ಹೆಬ್ರಿ ತಹಶೀಲ್ದಾರ್ ಎಸ್.ಎ.ಪ್ರಸಾದ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವಿಜಯಾ ಇದ್ದರು.












