ಉಡುಪಿ: ಕರ್ತವ್ಯಕ್ಕೆ ಮರಳಿದ ದಿನವೆ ಆತ್ಮಹತ್ಯೆ ಮಾಡಿಕೊಂಡ ಹೆಡ್ ಕಾನ್‌ಸ್ಟೆಬಲ್

ಉಡುಪಿ: ಕರ್ತವ್ಯದ ವೇಳೆ ಸೇವಾ ಆಯುಧದಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಹೆಡ್ ಕಾನ್‌ಸ್ಟೆಬಲ್ ರಾಜೇಶ್  ಕುಂದರ್ ಅಮಾನತುಗೊಂಡ ಬಳಿಕ ಮತ್ತೆ ಕೆಲಸಕ್ಕೆ ಸೇರಿದ್ದರು ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಎಸ್ ಟಿ ಸಿದ್ದಲಿಂಗಪ್ಪ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮೃತ ರಾಜೇಶ್ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್‌ ಪಡೆಯಲ್ಲಿ ಹೆಡ್ ಕಾನ್‌ಸ್ಟೆಬಲ್ ಆಗಿದ್ದರು. ಇವರು ಆದಿ ಉಡುಪಿಯ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಪ್ರಶ್ನೆಪತ್ರಿಕೆಯ ಸ್ಟೋರ್ ರೂಮಿನ ಹೊರಗೆ ರಾತ್ರಿ ಪಾಳಿಯ ಕರ್ತವ್ಯ ನಿರ್ವಹಿಸುತ್ತಿದ್ದರು. ಶುಕ್ರವಾರ ಬೆಳಗ್ಗೆ ಇತರ ಸಿಬ್ಬಂದಿಗಳು ಬಂದು ನೋಡಿದಾಗ ಆತ ಶವವಾಗಿದ್ದನ್ನು ಕಂಡಿದ್ದಾರೆ. ಅವರ ಕುಟುಂಬ ಸದಸ್ಯರು ಆಗಮಿಸಿದ್ದು, ಅವರ ದೂರನ್ನಾಧರಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ಹೇಳಿದರು.

ಸಣ್ಣ ಅಪರಾಧಕ್ಕಾಗಿ ಅವರನ್ನು ಕೆಲಸದಿಂದ ಅಮಾನತುಗೊಳಿಸಲಾಗಿತ್ತು. ಅಮಾನತು ಅವಧಿ ಮುಗಿದ ಬಳಿಕ ಗುರುವಾರ ರಾತ್ರಿಯೇ ಕರ್ತವ್ಯಕ್ಕೆ ಹಾಜರಾಗಿದ್ದರು. ಎಫ್‌ಎಸ್‌ಎಲ್ ಮತ್ತು ಆರ್‌ಎಫ್‌ಎಸ್‌ಎಲ್ ತಂಡಗಳು ಈಗಾಗಲೇ ಸ್ಥಳಕ್ಕೆ ಆಗಮಿಸಿ ವಿಚಾರಣೆ ನಡೆಸಿವೆ ಎಂದು ಸಿದ್ದಲಿಂಗಪ್ಪ ಮಾಹಿತಿ ನೀಡಿದ್ದಾರೆ.