ರೋಹಿಣಿ ಸಿಂಧೂರಿ ಮಾನಹಾನಿ ಪ್ರಕರಣ: ಪ್ರಕರಣ ರದ್ದು ಕೋರಿ ರೂಪಾ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಬೆಂಗಳೂರು: ತನ್ನ ವಿರುದ್ದ ಮಿಥ್ಯಾರೋಪ ಮಾಡಿರುವ ಕಾರಣ ಐಎಎಸ್​​ ಅಧಿಕಾರಿ ರೋಹಿಣಿ ಸಿಂಧೂರಿ ದಾಖಲು ಮಾಡಿದ್ದ ಮಾನಹಾನಿ ಕೇಸ್​​​ ವಿಚಾರದಲ್ಲಿ ಐಪಿಎಸ್​ ಅಧಿಕಾರಿ ಡಿ. ರೂಪಾ‌ ಮೌದ್ಗಿಲ್ ಗೆ ಹಿನ್ನಡೆಯಾಗಿದೆ. ಪ್ರಕರಣ ರದ್ದು ಕೋರಿ ರೂಪಾ ಹೈಕೋರ್ಟ್​​ಗೆ ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ಕೋರ್ಟ್ ವಜಾ ಮಾಡಿದೆ.

2023 ಫೆಬ್ರವರಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿರುದ್ಧ ಮಾಡಿದ್ದ ಮಾನಹಾನಿ ಪೋಸ್ಟ್​ಗಳನ್ನು ಹಂಚಿಕೊಂಡಿದ್ದ ಡಿ ರೂಪಾ ಅವರ ವಿರುದ್ಧ ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಮಾನನಷ್ಟ ಪ್ರಕರಣ ದಾಖಲು ಮಾಡಿದ್ದರು. ಪ್ರಕರಣದಲ್ಲಿ ರೂಪಾ ಮೌದ್ಗಿಲ್ ಅವರಿಗೆ ಕೋರ್ಟ್ ಸಮನ್ಸ್ ಜಾರಿಗೊಳಿಸಿತ್ತು.

ಆ ಮೂಲಕ ತಮ್ಮ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ಗಳನ್ನು ಮಾಡಿದ್ದ ರೂಪಾ ಅವರ ವಿರುದ್ಧ ಕಾನೂನು ಹೋರಾಟವನ್ನು ರೋಹಿಣಿ ಶುರು ಮಾಡಿದ್ದರು. ಮಾರ್ಚ್ 4ರಂದು ರೋಹಿಣಿ ಸಿಂಧೂರಿ ಸಲ್ಲಿಸಿರುವ ಮಾನಹಾನಿ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಡಿ ರೂಪಾ ಮನವಿ ಮಾಡಿಕೊಂಡಿದ್ದರು.

ಕೋರ್ಟ್​ ಸಮನ್ಸ್ ಬಳಿಕ ಪ್ರಕರಣದಲ್ಲಿ ಕೋರ್ಟ್​​ಗೆ ಹಾಜರಾಗಿದ್ದ ಡಿ ರೂಪಾ ಅವರು ಜಾಮೀನು ಕೂಡ ಪಡೆದಿದ್ದರು. ಜಾಮೀನು ಪಡೆದುಕೊಂಡ ಬಳಿಕ ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ರದ್ದು ಮಾಡಲು ಕೋರಿದ್ದರು.

ಇಂದು ಡಿ ರೂಪಾ ಅವರು ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ವಿಚಾರಣೆ ಮಾಡಿದ್ದ ಕೋರ್ಟ್​, ಪ್ರಕರಣ ರದ್ದು ಮಾಡಲು ನಿರಾಕರಿಸಿ ಅರ್ಜಿಯನ್ನು ವಜಾ ಮಾಡಿ ಆದೇಶ ನೀಡಿದೆ. ಇದರಿಂದ ಡಿ ರೂಪಾ ಅವರಿಗೆ ಕಾನೂನು ಸಮರದಲ್ಲಿ ಹಿನ್ನಡೆಯಾಗಿದೆ.