ಕಠಿಣ ಪರಿಶ್ರಮ, ಕೆಲಸದ ಬಗ್ಗೆ ಜ್ಞಾನ ಮತ್ತು ಹಣಕಾಸಿನ ಸರಿಯಾದ ನಿರ್ವಹಣೆಯಿಂದ ಯಶಸ್ಸು: ಮೈಕೆಲ್‌ ಡಿಸೋಜಾ

ಮಂಗಳೂರು: ನಿಮ್ಮ ವ್ಯವಹಾರವು ಆರ್ಥಿಕ ಪಾರದರ್ಶಕತೆಯನ್ನು ಹೊಂದಿರಬೇಕು. ಕಠಿಣ ಪರಿಶ್ರಮ, ನಿಮ್ಮ ಕೆಲಸದ ಬಗ್ಗೆ ಜ್ಞಾನ ಮತ್ತು ಹಣಕಾಸಿನ ಸರಿಯಾದ ನಿರ್ವಹಣೆ ವ್ಯವಹಾರದಲ್ಲಿ ಯಶಸ್ಸಿಗೆ ಪ್ರಮುಖವಾಗಿದೆ. ನಿಮ್ಮ ವ್ಯವಹಾರ ವಿಫಲವಾದರೂ ನಿಮ್ಮ ಹೆಸರು ಖ್ಯಾತಿಯಲ್ಲಿರಬೇಕು ಎಂದು ಎನ್‌ಆರ್‌ಐ ಉದ್ಯಮಿ ಮೈಕೆಲ್‌ ಡಿಸೋಜಾ ಹೇಳಿದರು.

ಅವರು ಮೇ 28 ರಂದು ಮಂಗಳೂರು ಕ್ಲಬ್‌ನಲ್ಲಿ ರಚನಾ ಹಾಗೂ ಕ್ಯಾಥೋಲಿಕ್‌ ಚೇಂಬರ್‌ ಆಫ್‌ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಇದರ ವತಿಯಿಂದ ಆಯೋಜಿಸಲಾಗಿದ್ದ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಪರಿಶ್ರಮದ ಶಕ್ತಿ ಮತ್ತು ವ್ಯವಹಾರದ ಮೂಲಕ ವಿಪತ್ತುಗಳನ್ನು ನಿವಾರಿಸುವ ಬಗ್ಗೆ ಹಾಗೂ ಪುತ್ತೂರಿನ ಪುಟ್ಟ ಊರಿನಿಂದ ಬಂದ ತಮ್ಮ ಜೀವನ ಪಯಣದ ಬಗ್ಗೆ ಮಾತನಾಡಿದ ಅವರು ಸಣ್ಣ ವಯಸ್ಸಿನಲ್ಲಿ ತಮ್ಮ ವ್ಯಾಪಾರವನ್ನು ಪ್ರಾರಂಭಿಸಿದ ಬಗ್ಗೆ ಮಾಹಿತಿ ನೀಡಿದರು.
ಯುಎಇ ಅಂತಹ ದೇಶದಲ್ಲಿ ವ್ಯಾಪಾರ ಸಾಮರ್ಥ್ಯದ ಬಗ್ಗೆ ಮಾರುಕಟ್ಟೆ ಅಧ್ಯಯನವನ್ನು ನಡೆಸಿ, ಸ್ಥಳೀಯರ ಸಹಾಯದಿಂದ ರಿಯಲ್‌ ಎಸ್ಟೇಟ್‌ ಕ್ಷೇತ್ರದಲ್ಲಿ ಸ್ವಂತ ವ್ಯವಹಾರವನ್ನು ಪ್ರಾರಂಭಿಸಿ, ವ್ಯಾಪಾರದಲ್ಲಿ ಹೂಡಿಕೆ ಮಾಡಿ ಬಳಿಕ ನಂಬಿಗಸ್ಥ ಜನರು ದೊಡ್ಡ ಪ್ರಮಾಣದಲ್ಲಿ ವಂಚಿಸಿದಾಗ ಧೈರ್ಯಗುಂದದೆ, ವ್ಯಾಪಾರವನ್ನು ಪುನರಾಂಭಿಸಿದ ಬಗ್ಗೆ ತಿಳಿಸಿದ ಅವರು ತಮ್ಮ ಧರ್ಮಪತ್ನಿ ಶ್ರೀಮತಿ ಫ್ಲೇವಿಯವರ ಸಹಾಯದಿಂದ ಯಶಸ್ವಿಯಾದ ಬಗ್ಗೆ ಉದ್ಯಮಿಗಳಿಗೆ ಮಾರ್ಗದರ್ಶನ ನೀಡಿದರು.

ರಚನಾ ಸಂಸ್ಥೆಯ ಅಧ್ಯಕ್ಷ ವಿನ್ಸೆಂಟ್‌ ಕುಟಿನ್ಹಾ ಸ್ವಾಗತಿಸಿ, ಉಪಾಧ್ಯಕ್ಷ ಸಿಎ ರುಡಾಲ್ಫ್ ರೊಡ್ರಿಗಸ್ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಆಡಳಿತ ಮಂಡಳಿ ಸದಸ್ಯ ಲೆಸ್ಲಿ ರೇಗೊ ಕಾರ್ಯಕ್ರಮ ನಿರೂಪಿಸಿ,ಕೋಶಾಧಿಕಾರಿ ಶ್ರೀಮತಿ ಯುಲಾಲಿಯಾ ಡಿಸೋಜಾ ವಂದಿಸಿದರು.