ಎಲ್ಲರಿಗೂ ಕಡಿಮೆ ಬೆಲೆಯಲ್ಲಿ ಮರಳು ಸಿಗಬೇಕು:ಹಾಲಾಡಿ ಶ್ರೀನಿವಾಸ ಶೆಟ್ಟಿ

ಕುಂದಾಪುರ: ಬಳ್ಳಾರಿ ಗಣಿಗಾರಿಕೆಗಿಂತ ಉಡುಪಿ ಜಿಲ್ಲೆಯಲ್ಲಿ ಮರಳು ಗಣಿಗಾರಿಕೆ ಭೀಕರವಾಗಿದೆ ಎಂದು ಪತ್ರಿಕೆಗಳಲ್ಲಿ ಸುದ್ದಿ ಪ್ರಕಟವಾಗುತ್ತಿದೆ. ಈ ಆರೋಪದಿಂದ ಮುಕ್ತವಾಗಬೇಕು. ವಾರಾಹಿ ನದಿಯಲ್ಲಿ ಬಾಕಿಯಾದ ಮರಳು ದಿಬ್ಬ ನಿರ್ದಿಷ್ಟ ಕಾಲಾವಕಾಶದಲ್ಲಿ ತೆರವು ಮಾಡಿ. ಹೊಸ ಮರಳು ನೀತಿಗೆ ಜೋತುಬಿದ್ದರೆ ಮತ್ತೆ ಮಳೆಗಾಲ ಆರಂಭವಾಗುತ್ತದೆ. ಬಡವರಿಗೆ ಮರಳು ಅವಶ್ಯವಿದ್ದು, ಮರಳು ಎಲ್ಲರಿಗೂ ಕಡಿಮೆ ಬೆಲೆಯಲ್ಲಿ ಮರಳು ಸಿಗಬೇಕು ಎಂದು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದರು.

ಅವರು ಕುಂದಾಪುರ ತಾಲೂಕು ಪಂಚಾಯಿತಿ ಅಧ್ಯಕ್ಷರ ಕಚೇರಿಯಲ್ಲಿ ಬುಧವಾರ ಸಂಜೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದರು,

ಮರಳು ವಿತರಣೆ ಸಮರ್ಪಕವಾಗಿ ನಡೆಯಬೇಕು. ವಾರಾಹಿ, ಹಾಲಾಡಿ ನದಿಯಲ್ಲಿ ಮರಳು ದಿಬ್ಬ ಗುರುತಿಸಿದ್ದು, ಟೆಂಡರ್ ಬಾಕಿ ಇದ್ದ ದಿಬ್ಬಗಳ ತೆರವಿಗೆ ಟೆಂಡರ್ ಕರೆಯುವಂತೆ ಸೂಚಿಸಿದರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಹಾಯಕ ನಿರ್ದೇಶಕ ರಾಮ್.ಜಿ ನಾಯ್ಕ್ ಮಾತನಾಡಿ, ವಾರಾಹಿ ಹಾಗೂ ಹಾಲಾಡಿ ನದಿಯಲ್ಲಿ ಮರಳು ತೆಗೆಯುವ ೯ ದಿಬ್ಬ ಗುರುತಿಸಿದ್ದು, ಜಿಲ್ಲಾಧಿಕಾರಿ ಜೊತೆ ಮಾತನಾಡಿ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ ಎಂದರು.

ಜಿಲ್ಲೆಯಲ್ಲಿ ಮರಳು ವಿತರಣೆ ಹಾಗೂ ಪ್ರತೀ ಯೂನಿಟ್‌ಗೂ ಬೆಲೆ ನಿಗಧಿ ಮಾಡಲಾಗಿದೆ. ಆದರೆ ಮರಳು ವಾಹನಕ್ಕೆ ಮರಳನ್ನು ಲೋಡ್ ಮಾಡುವುದು ಯಾರೂ ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ. ಮರಳು ಲೋಡ್ ಲಾರಿಯವರೇ ಮಾಡಿಕೊಳ್ಳಬೇಕಾ? ಮರಳು ಗುತ್ತ್ತಿಗೆ ಪಡೆದವರೇ ಲೋಡ್ ಮಾಡಬೇಕು. ಲಾರಿಗೆ ಲೋಡ್ ಮಾಡಿದರೆ ಅದಕ್ಕೆ ಎಷ್ಟು ಹಣ ಎನ್ನುವ ಗೊಂದಲವಿದ್ದು, ಮುಂದೆ ಟೆಂಡರ್ ಪ್ರಕ್ರಿಯೆಯಲ್ಲಿ ಮರಳು ಲೋಡ್ ಮಾಡುವುದ ಸೇರಿಸಿ ಟೆಂಡರ್ ಕರೆಯುವಂತೆ ಹಾಲಾಡಿ ಸಲಹೆ ನೀಡಿದ್ದು, ಗಣಿ ಅಧಿಕಾರಿಗಳು ಶಾಸಕರ ಸಲಹೆಗೆ ಸಮ್ಮಿತಿ ಸೂಚಿಸಿದರು

.
ಮರಳು ವಿತರಣೆ ಕೇಂದ್ರದಲ್ಲಿ ಸರತಿ ಸಾಲು ಹೆಚ್ಚಿದ್ದು, ಮರಳು ಸಾಗಾಟ ಲಾರಿಗಳು ಮರಳಿಗಾಗಿ ಎರಡು ಮೂರು ದಿನ ಕಾಯಬೇಕಾಗುತ್ತದೆ. ಮರಳು ಸರಾಗ ಎಲ್ಲರಿಗೂ ಸಿಗುವಂತೆ ವ್ಯವಸ್ಥೆ ಮಾಡಬೇಕು ಎಂದು ಹಾಲಾಡಿ ಒತ್ತಾಯಿಸಿದರು.

ಕುಂದಾಪುರ ತಾ.ಪಂ ಅಧ್ಯಕ್ಷೆ ಶ್ಯಾಮಲಾ ಕುಂದರ್, ಉಪಾದ್ಯಕ್ಷ ರಾಮ್‌ಕಿಶನ್ ಹೆಗ್ಡೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಹಾಯಕ ನಿರ್ದೇಶಕ ರಾಮ್‌ಜಿ ನಾಯ್ಕ್, ಹಿರಿಯ ಭೂ ವಿಜ್ಞಾನಿ ಮಹೇಶ್ ಮುಂತಾದವರು ಇದ್ದರು.