ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಗುರುಪುರ ಕೈಕಂಬದ ಬಂಗ್ಲಗುಡ್ಡೆ ಎಂಬಲ್ಲಿ ಗುಡ್ಡ ಕುಸಿದು ಎರಡು ಮನೆಗಳು ಧರೆಶಾಯಿಯಾದ ಘಟನೆ ನಡೆದಿದೆ. ಇಬ್ಬರು ಮಣ್ಣಿನಡಿ ಸಿಲುಕಿದ್ದಾರೆ ಎಂದು ತಿಳಿದು ಬಂದಿದೆ.
ಬಂಗ್ಲಗುಡ್ಡೆಯಲ್ಲಿ ಮಧ್ಯಾಹ್ನದ ವೇಳೆಗೆ ಉಂಟಾದ ಗುಡ್ಡ ಕುಸಿತದಿಂದ ಮನೆಯೊಂದು ಧರೆಶಾಯಿಯಾಗಿದೆ. ಒಂದು ಮನೆ ಕುಸಿತದ ಬಳಿಕ ಆ ಮನೆಯ ಮೇಲಿನ ಭಾಗದಲ್ಲಿ ಇದ್ದ ಮತ್ತೊಂದು ಮನೆಯೂ ಕುಸಿದಿದೆ. ಮೊದಲು ಧರೆಶಾಯಿಯಾದ ಮನೆಯಲ್ಲಿದ್ದ ಇಬ್ಬರು ಮಣ್ಣಿನಡಿ ಸಿಲುಕಿದ್ದಾರೆ.
ಕರಾವಳಿಯಲ್ಲಿ ಮೂರು ದಿನಗಳಿಂದ ಮಳೆಯಾಗಿದ್ದು ಪರಿಣಾಮ ಗುಡ್ಡಕುಸಿತ ಉಂಟಾಗಿದೆ. ಮೊದಲು ಕುಸಿತಗೊಂಡ ಮನೆ ಮಂದಿ ಮನೆ ಕುಸಿತಗೊಳ್ಳುತ್ತಿದ್ದಂತೆ ಹೊರ ಓಡಿದ್ದು, ಆದರೆ ಮನೆಯಲ್ಲಿ ಮಲಗಿದ್ದ ಇಬ್ಬರು ಮಣ್ಣಿನಡಿ ಸಿಲುಕಿದ್ದಾರೆ. ಈ ಮನೆಯ ಮೇಲಿನ ಭಾಗದಲ್ಲಿ ಇದ್ದ ಮನೆ ಮಂದಿಯೂ ಹೊರಗೆ ಓಡಿ ಪಾರಾಗಿದ್ದಾರೆ.












