ಗುಜರಾತ್ ಚುನಾವಣಾ ಫಲಿತಾಂಶ ರಾಜ್ಯ ಚುನಾವಣೆಯ ದಿಕ್ಸೂಚಿ: ನಯನಾ ಗಣೇಶ್, ವೀಣಾ ಶೆಟ್ಟಿ

ಉಡುಪಿ: ಗುಜರಾತ್ ಬಿಜೆಪಿ ಜಯಭೇರಿ ಮುಂದಿನ ರಾಜ್ಯ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್ ಹೇಳಿದ್ದಾರೆ.

ಗುಜರಾತ್ ನಲ್ಲಿ 7ನೇ ಬಾರಿ ಅತೀ ಹೆಚ್ಚು ಸ್ಥಾನ ಗಳಿಸುವ ಮೂಲಕ ದಾಖಲೆ ನಿರ್ಮಿಸಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು ಯಶಸ್ವಿ ಆಡಳಿತ, ಅಭಿವೃದ್ಧಿ ಪರ ಚಿಂತನೆಗೆ ಮತದಾರರ ಒಲವು ವ್ಯಕ್ತವಾಗಿದೆ. ಗುಜರಾತ್ ರಾಷ್ಟ್ರಕ್ಕೆ ಒಂದು ಮಾದರಿ ರಾಜ್ಯವಾಗಿ ರೂಪುಗೊಂಡಿದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿ ನಾಯಕತ್ವದಿಂದ ಗೆಲುವು ಸಾಧಿಸಿದ್ದು ಈ ಫಲಿತಾಂಶ ಮುಂದಿನ ರಾಜ್ಯ ಚುನಾವಣೆಯಲ್ಲಿ ಪರಿಣಾಮ ಬೀರಲಿದ್ದು ಮತ್ತೊಮ್ಮೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರ ನಡೆಸಲಿದೆಯೆಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬಿಜೆಪಿ ಪರ್ವ ಆರಂಭ: ವೀಣಾ ಶೆಟ್ಟಿ

ಗುಜರಾತ್ ಚುನಾವಣೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ನಾಯಕತ್ವದಲ್ಲಿ ತವರು ಊರಿನಲ್ಲಿ ದಾಖಲೆ ಗೆಲುವು ಸಾಧಿಸಿದ್ದು ಇದು ಮುಂದಿನ ಕರ್ನಾಟಕದ ಚುನಾವಣೆಯಲ್ಲಿ ಪ್ರಭಾವಬೀರಿ ಮತ್ತೊಮ್ಮೆ ಕರ್ನಾಟಕದಲ್ಲಿ ಬಿಜೆಪಿ ಪರ್ವ ಆರಂಭವಾಗಲಿದೆ ಎಂದು ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಶೆಟ್ಟಿ ಹೇಳಿದ್ದಾರೆ.

ಬಿಜೆಪಿ ಗೆಲುವಿನ ಪರಿಣಾಮ ಸಕಾರಾತ್ಮಕವಾಗಿ ಕರ್ನಾಟಕದ ಚುನಾವಣೆಯ ಮೇಲಾಗಲಿದೆ. ಭಾಜಪಾ ಕಾರ್ಯಕರ್ತ ಮತ್ತು ಬೆಂಬಲಿಗರಿಗೆ ನೈತಿಕ ಬೆಂಬಲ ಸಿಗಲಿದೆ. ಸುಮಾರು ಒಂದು ತಲೆಮಾರು ದಾಟಿದರೂ ಹಳೆ ಮತ್ತು ಹೊಸ ಪೀಳಿಗೆ ನರೇಂದ್ರ ಮೋದಿಯವರ ಆಡಳಿತ, ದಕ್ಷತೆಯನ್ನು ಒಪ್ಪಿದ್ದಾರೆ. ದೇಶವನ್ನು ಮುನ್ನಡೆಸುವ ಶಕ್ತಿಯ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಅದೇ ರೀತಿಯ ಫಲಿತಾಂಶ ಮುಂದಿನ ಕರ್ನಾಟಕ ಚುನಾವಣೆಯಲ್ಲಿ ಪ್ರತಿಧ್ವನಿಸಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.