ಗಾಯಕ್ವಾಡ್​ ಬದಲಿಗೆ ಗಿಲ್​ ಕಣಕ್ಕೆ : ಟಾಸ್​ ಗೆದ್ದ ದಕ್ಷಿಣ ಆಫ್ರಿಕಾ ಬೌಲಿಂಗ್​ ಆಯ್ಕೆ

ಗ್ಕೆಬರ್ಹಾ (ದಕ್ಷಿಣ ಆಫ್ರಿಕಾ): ತುಂತುರು ಮಳೆ ಮತ್ತು ಮೋಡದ ನಡುವೆಯೇ ಎರಡನೇ ಪಂದ್ಯದ ಟಾಸ್​ ಗೆದ್ದ ದಕ್ಷಿಣ ಆಫ್ರಿಕಾ ಬೌಲಿಂಗ್​ ಆಯ್ದುಕೊಂಡಿದೆ.ಮೊದಲ ಪಂದ್ಯ ಮಳೆಗೆ ಆಹುತಿ ಆಯುತು. 2024ರ ಟಿ20 ವಿಶ್ವಕಪ್​ ತಯಾರಿ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾ ಮತ್ತು ಭಾರತದ ನಡುವೆ 3 ಪಂದ್ಯಗಳ ಸರಣಿ ನಡೆಯುತ್ತಿದೆ. ಸೇಂಟ್ ಜಾರ್ಜ್ ಪಾರ್ಕ್​ ಮೈದಾನದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡದ ನಡುವಿನ ಎರಡನೇ ಟಿ20 ಪಂದ್ಯ ನಡೆಯುತ್ತಿದ್ದು, ಟಾಸ್​ ಗೆದ್ದ ಹರಿಣಗಳ ನಾಯಕ ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ.

ಏಕದಿನ ವಿಶ್ವಕಪ್​ನಲ್ಲಿ ಆಡಿದ ಶ್ರೇಯಸ್ ಅಯ್ಯರ್​ ಮತ್ತು ಇಶಾನ್​ ಕಿಶನ್​ಗೆ ಅವಕಾಶ ಸಿಕ್ಕಿಲ್ಲ. ಮೂರನೇ ಸ್ಥಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಎರಡು ಪಂದ್ಯದಲ್ಲಿ ಶ್ರೇಯಸ್​ ಅಯ್ಯರ್​ ಆಡಿದ್ದರು. ಕೊನೆಯ ಪಂದ್ಯದಲ್ಲಿ ಅರ್ಧಶತಕವನ್ನೂ ದಾಖಲಿಸಿದ್ದರು. ಆದರೆ ಅವರನ್ನು ಕೈಬಿಟ್ಟು, ವೆಸ್ಟ್​ ಇಂಡೀಸ್​ ವಿರುದ್ಧ ಪಾದಾರ್ಪಣೆ ಮಾಡಿದ ತಿಲಕ್​ ವರ್ಮಾಗೆ ಅವಕಾಶ ಸಿಕ್ಕಿದೆ. ವಿಕೆಟ್​ ಕೀಪರ್​ ಸ್ಥಾನದಲ್ಲಿ ಜಿತೇಶ್​ ಶರ್ಮಾ ತವರಿನ ಟಿ20 ಸರಣಿಯ ನಂತರ ಮುಂದುವರೆದಿದ್ದಾರೆ.

ಆಸ್ಟ್ರೇಲಿಯಾ ಸರಣಿಯ ವೇಳೆ ವಿಶ್ರಾಂತಿಯಲ್ಲಿದ್ದ ಶುಭಮನ್​ ಗಿಲ್​ ತಂಡಕ್ಕೆ ಮರಳುತ್ತಿದ್ದಂತೆ ಆಡುವ ಬಳಗಕ್ಕೆ ಪ್ರವೇಶ ಪಡೆದುಕೊಂಡಿದ್ದಾರೆ. ರುತುರಾಜ್​ ಗಾಯಕ್ವಾಡ್​ ಅವರನ್ನು ಕೈಬಿಡಲಾಗಿದೆ. ಆಸ್ಟ್ರೇಲಿಯಾ ವಿರುದ್ಧ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ರವಿ ಬಿಷ್ಣೋಯ್​ ಕೈಬಿಟ್ಟು ಉಪನಾಯಕ ರವೀಂದ್ರ ಜಡೇಜಾ ಎರಡನೇ ಸ್ಪಿನ್ನರ್​ ಆಗಿ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.

ತಂಡಗಳು ಇಂತಿವೆ.. ಭಾರತ: ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್​ ಕೀಪರ್​), ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಅರ್ಶದೀಪ್​ ಸಿಂಗ್, ಮುಖೇಶ್ ಕುಮಾರ್

ದಕ್ಷಿಣ ಆಫ್ರಿಕಾ: ಮ್ಯಾಥ್ಯೂ ಬ್ರೀಟ್ಜ್ಕೆ, ರೀಜಾ ಹೆಂಡ್ರಿಕ್ಸ್, ಐಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಚ್ ಕ್ಲಾಸೆನ್ (ವಿಕೆಟ್​ ಕೀಪರ್​), ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ಮಾರ್ಕೊ ಜಾನ್ಸೆನ್, ಆಂಡಿಲ್ ಫೆಹ್ಲುಕ್ವಾಯೊ, ಜೆರಾಲ್ಡ್ ಕೊಯೆಟ್ಜಿ, ಲಿಜಾಡ್ ವಿಲಿಯಮ್ಸ್, ತಬ್ರೈಜ್ ಶಮ್ಸಿ

ಭಾರತ ಈ ಪಂದ್ಯ ಸೇರಿದಂತೆ ಒಟ್ಟು 5 ಅಂತಾರಾಷ್ಟ್ರೀಯ ಪಂದ್ಯಗಳನ್ನು ಟಿ20 ವಿಶ್ವಕಪ್​ಗೂ ಮುನ್ನ ಆಡುತ್ತದೆ. ಹೀಗಾಗಿ ತಿಲಕ್​ ವರ್ಮಾ, ರಿಂಕು ಸಿಂಗ್​, ಜಿತೇಶ್​ ಶರ್ಮಾಗೆ ವಿದೇಶಿ ಪಿಚ್​ಗಳಲ್ಲಿ ಅನುಭವಕ್ಕಾಗಿ ಕೋಚ್​ ದ್ರಾವಿಡ್​ ಅವಕಾಶ ಮಾಡಿಕೊಟ್ಟಂತಿದೆ. ದಕ್ಷಿಣ ಆಫ್ರಿಕಾದಲ್ಲಿ ಇನ್ನೂ ಒಂದು ಪಂದ್ಯ ಬಾಕಿ ಇದ್ದು, ಕೆಲ ಪ್ರಯೋಗಗಳನ್ನು ಆ ಪಂದ್ಯದಲ್ಲೂ ನಿರೀಕ್ಷಿಸಬಹುದಾಗಿದೆ.