ಮಣಿಪಾಲಕಸ್ತೂರ್ಬಾ ಆಸ್ಪತ್ರೆ: ಗ್ಯಾಸ್ಟ್ರೋಇಂಟೆಸ್ಟಿನಲ್ ರೇಡಿಯೇಷನ್ ಆಂಕೊಲಾಜಿ ಸ್ಪೆಷಾಲಿಟಿ ಕ್ಲಿನಿಕ್ ಆರಂಭ

ಮಣಿಪಾಲ:  ರೇಡಿಯೊಥೆರಪಿ ಮತ್ತು ಆಂಕೊಲಾಜಿ ವಿಭಾಗದ ಸಹಯೋಗದೊಂದಿಗೆ, ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಗ್ಯಾಸ್ಟ್ರೊಇಂಟೆಸ್ಟಿನಲ್ ರೇಡಿಯೇಶನ್ ಆಂಕೊಲಾಜಿ ಸ್ಪೆಷಾಲಿಟಿ ಕ್ಲಿನಿಕ್ ಗೆ ಜುಲೈ 8 ರಂದು ಚಾಲನೆ ನೀಡಲಾಯಿತು.

ಇಂದು ನಡೆದ ಸರಳ ಕಾರ್ಯಕ್ರಮದಲ್ಲಿ ಕೆಎಂಸಿ, ಮಣಿಪಾಲದ ಡೀನ್ ಡಾ ಶರತ್ ಕೆ ರಾವ್ ಮತ್ತು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಮುಖ್ಯ ನಿರ್ವಹಣಾಧಿಕಾರಿ ಡಾ ಆನಂದ್ ವೇಣುಗೋಪಾಲ್ ಅವರು ಜಂಟಿಯಾಗಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಡಾ ಶರತ್ ಕೆ ರಾವ್ ಹೊಸ ಸ್ಪೆಷಾಲಿಟಿ ಮತ್ತು ಸಬ್ ಸ್ಪೆಷಾಲಿಟಿ ಕ್ಲಿನಿಕ್ಗಳ ಪ್ರಾಮುಖ್ಯತೆಯ ಕುರಿತು ತಿಳಿಸಿ, ಮೊದಲಿನಿಂದಲೂ ಹೊಸ ಸೇವೆಗಳನ್ನು ಒದಗಿಸುವಲ್ಲಿ ಕೆಎಂಸಿ ಮುಂಚೂಣಿಯಲ್ಲಿದೆ ಎಂದರು.

ಡಾ.ಆನಂದ್ ವೇಣುಗೋಪಾಲ್ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ಮಣಿಪಾಲದ ಸಮಗ್ರ ಕ್ಯಾನ್ಸರ್ ಕೇರ್ ಸೆಂಟರ್ ಅನ್ನು ಬೆಳೆಸಿರುವುದು ನನಗೆ ತುಂಬಾ ಖುಷಿ ತಂದಿದೆ. ಈಗ ಅದರ ಸಮಗ್ರ ರೋಗಿಗಳ ಆರೈಕೆಗೆ ಮತ್ತೊಂದು ಗರಿ ಸೇರ್ಪಡೆಯಾಗಿದೆ ಎಂದರು.

ಈ ವಿಶೇಷ ಚಿಕಿತ್ಸಾಲಯವು ಡಾ ಶೆರ್ಲಿ ಲೂಯಿಸ್ ಸಲೀನ್ಸ್ ಅವರ ನೇತೃತ್ವದಲ್ಲಿ ಕಾರ್ಯ ನಿರ್ವಹಿಸಲಿದೆ. ಡಾ ಶೆರ್ಲಿ ಲೂಯಿಸ್ ಅವರು ಟೊರೊಂಟೊದ ‘ಟೊರೊಂಟೊ ವಿಶ್ವವಿದ್ಯಾಲಯ’ದ ಪ್ರಿನ್ಸೆಸ್ ಮಾರ್ಗರೇಟ್ ಕ್ಯಾನ್ಸರ್ ಕೇಂದ್ರದಿಂದ ಗ್ಯಾಸ್ಟ್ರೊಇಂಟೆಸ್ಟಿನಲ್ ರೇಡಿಯೇಶನ್ ಆಂಕೊಲಾಜಿಯಲ್ಲಿ ಒಂದು ವರ್ಷದ ಕ್ಲಿನಿಕಲ್ ರಿಸರ್ಚ್ ಫೆಲೋಶಿಪ್ ಪಡೆದಿರುತ್ತಾರೆ. ಅವರು ರಜಾ ದಿನ ಹೊರತು ಪಡಿಸಿ ಪ್ರತೀ ದಿನ ಸಮಾಲೋಚನೆಗೆ ಲಭ್ಯವಿರುತ್ತಾರೆ ಎಂದು ಡಾ ಅವಿನಾಶ್ ಶೆಟ್ಟಿ ಮಾಹಿತಿ ನೀಡಿದರು.

ಡಾ ಶೆರ್ಲಿ ಲೂಯಿಸ್ ಸಲಿನ್ಸ್ ಗ್ಯಾಸ್ಟ್ರೋಇಂಟೆಸ್ಟಿನಲ್ ರೇಡಿಯೇಷನ್ ಆಂಕೊಲಾಜಿ ಸ್ಪೆಷಾಲಿಟಿ ಕ್ಲಿನಿಕ್ ನ ಅವಲೋಕನ ಮತ್ತು ಅದರ ವ್ಯಾಪ್ತಿಯ ಕುರಿತು ಮಾತನಾಡಿದರು.

ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ರೇಡಿಯೊಥೆರಪಿ ಆಂಕೊಲಾಜಿ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ.ಕೃಷ್ಣ ಶರಣ್ ಮತ್ತು ರೇಡಿಯೊಥೆರಪಿ ಆಂಕೊಲಾಜಿ ವಿಭಾಗದ ಸಹ ಪ್ರಾಧ್ಯಾಪಕ ಡಾ.ಶೆರ್ಲಿ ಲೂಯಿಸ್ ಸಾಲಿನ್ಸ್ ಉಪಸ್ಥಿತರಿದ್ದರು.