ಕಸದ ರಾಶಿಯೇ ಇಂಧನ! ದೆಹಲಿ ಬಸ್ ಗಳು ಇನ್ನು ಹೈಡ್ರೋಜನ್ನಲ್ಲಿ ಸಂಚಾರ; ನಿತಿನ್ ಗಡ್ಕರಿ ಘೋಷಣೆ

ನವದೆಹಲಿ: ಭವಿಷ್ಯದಲ್ಲಿ ದೆಹಲಿಯ (Delhi) ಸಾರ್ವಜನಿಕ ಸಾರಿಗೆ ಬಸ್ಗಳು ಘನತ್ಯಾಜ್ಯದಿಂದ (Garbage) ಉತ್ಪಾದಿಸಿದ ಹೈಡ್ರೋಜನ್(Hydrogen) ಇಂಧನ ಬಳಸಿ ಚಲಿಸಲಿವೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ(Nitin Gadkari) ಪ್ರಕಟಿಸಿದ್ದಾರೆ.

ದೆಹಲಿಯಲ್ಲಿ ಬಿಜೆಪಿ ಆಯೋಜಿಸಿದ್ದ ಯುವ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ನಗರಗಳಲ್ಲಿ ಸಂಗ್ರಹವಾಗುವ ಮುನ್ಸಿಪಲ್ ಘನತ್ಯಾಜ್ಯವನ್ನು (Municipal Solid Waste) ಬಳಸಿಕೊಂಡು ಹಸಿರು ಹೈಡ್ರೋಜನ್ (Green Hydrogen) ಇಂಧನವನ್ನು ಉತ್ಪಾದಿಸುವ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತದೆ. ಇದರಿಂದ ಕಸದ ವಿಲೇವಾರಿ ಸಮಸ್ಯೆಯೂ ಬಗೆಹರಿಯಲಿದ್ದು, ಇಂಧನವೂ ಸಿಗಲಿದೆ.

ನಾನು ದೆಹಲಿ ಬಸ್ಗಳನ್ನು ಕಸದಿಂದ ತಯಾರಿಸಿದ ಹೈಡ್ರೋಜನ್ ಮೂಲಕ ಓಡಿಸುತ್ತೇನೆ ಎಂದಾಗ ಜನ ನನ್ನನ್ನು ನೋಡಿ ನಗುತ್ತಾರೆ, ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸುತ್ತಾರೆ. ಆದರೆ, ಕಳೆದ 50 ವರ್ಷಗಳ ನನ್ನ ರಾಜಕೀಯ ಜೀವನದಲ್ಲಿ ನಾನು ಒಮ್ಮೆ ಹೇಳಿದ ಮಾತು ಜಾರಿಯಾಗದೇ ಉಳಿದ ಇತಿಹಾಸವೇ ಇಲ್ಲ. ನಾನು ಯಾವುದನ್ನೂ ಸುಮ್ಮನೆ ಹೇಳುವುದಿಲ್ಲ, ಆಳವಾಗಿ ಅಧ್ಯಯನ ಮಾಡಿ ಹೇಳುತ್ತೇನೆ ಎಂದು ಗಡ್ಕರಿ ವಿಶ್ವಾಸ ವ್ಯಕ್ತಪಡಿಸಿದರು.
ಯೋಜನೆಯ ಕಾರ್ಯವಿಧಾನದ ಬಗ್ಗೆ ವಿವರಿಸಿದ ಗಡ್ಕರಿ, ದೆಹಲಿಯಲ್ಲಿ ಬೆಟ್ಟದಂತೆ ರಾಶಿ ಬಿದ್ದಿರುವ ಕಸವೇ ನಮಗೆ ಇಂಧನವಾಗಲಿದೆ. ಕಸವನ್ನು ಆರ್ಗಾನಿಕ್ ಮತ್ತು ಇನ್-ಆರ್ಗಾನಿಕ್ ಎಂದು ಪ್ರತ್ಯೇಕಿಸಿ, ಬಯೋ-ಡೈಜೆಸ್ಟರ್ ತಂತ್ರಜ್ಞಾನದ ಮೂಲಕ ಹಸಿರು ಹೈಡ್ರೋಜನ್ (Green Hydrogen) ಗ್ಯಾಸ್ ಉತ್ಪಾದಿಸಲಾಗುವುದು. ಇದೇ ಗ್ಯಾಸ್ ತುಂಬಿಸಿ ದೆಹಲಿಯ ಸಾರ್ವಜನಿಕ ಸಾರಿಗೆ ಬಸ್ಗಳನ್ನು ಓಡಿಸಲಾಗುವುದು. ಇದರಿಂದ ಮಾಲಿನ್ಯವೂ ಇರುವುದಿಲ್ಲ, ದೇಶದ ಹಣವೂ ಉಳಿಯುತ್ತದೆ ಎಂದರು.

ಈ ಯೋಜನೆಯು ದೆಹಲಿಯನ್ನು ಸಂಪೂರ್ಣವಾಗಿ ಕಸ ಮುಕ್ತ ಮಾಡಲು ನೆರವಾಗಲಿದೆ. ಈಗಾಗಲೇ ದೆಹಲಿಯ ಕಸದ ರಾಶಿಯಿಂದ ಈಗಾಗಲೇ 80 ಲಕ್ಷ ಟನ್ ಕಸವನ್ನು ತಂದು ನಾವು ಹೈವೇ (Expressway) ರಸ್ತೆಗಳ ನಿರ್ಮಾಣದ ಬಳಸಿದ್ದೇವೆ. ಕಸವನ್ನು ರಸ್ತೆಯನ್ನಾಗಿ ಮಾಡಲು ಸಾಧ್ಯವಿರುವಾಗ, ಇಂಧನವನ್ನಾಗಿ ಮಾಡಲು ಯಾಕೆ ಸಾಧ್ಯವಿಲ್ಲ ಎಂದು ಅವರು ಪ್ರಶ್ನಿಸಿದರು.
ಹೈಡ್ರೋಜನ್ ಇಂಧನ ಚಾಲಿತ ಬಸ್ಗಳು ಕೇವಲ ನೀರನ್ನು (ಬಾಷ್ಪೀಕರಣ) ಮಾತ್ರ ಹೊರಹಾಕುವುದರಿಂದ ದೆಹಲಿಯ ವಾಯು ಮಾಲಿನ್ಯ ಗಣನೀಯವಾಗಿ ಕಡಿಮೆಯಾಗಲಿದೆ. ಭಾರತವು ಪ್ರಸ್ತುತ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಕಸದಿಂದ ಹೈಡ್ರೋಜನ್ ಉತ್ಪಾದಿಸುವುದರಿಂದ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅವಲಂಬನೆ ಕಡಿಮೆಯಾಗಲಿದ್ದು, ದೇಶದ ಆರ್ಥಿಕತೆಗೆ ದೊಡ್ಡ ಬಲ ಸಿಗಲಿದೆ ಎಂದು ಹೇಳಿದರು.