ಅಂಬಾಗಿಲು ಆಟೊ ಚಾಲಕರು-ಮಾಲೀಕರ ಸಂಘದಿಂದ ವಿಶಿಷ್ಟ ರೀತಿಯಲ್ಲಿ ಗಾಂಧಿ ಜಯಂತಿ ಆಚರಣೆ

ಉಡುಪಿ: ಯಶೋದಾ ಆಟೊ ಚಾಲಕರು ಮತ್ತು ಮಾಲೀಕರ ಸಂಘ ಉಡುಪಿ ಹಾಗೂ ಅಂಬಾಗಿಲು ಆಟೊ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಅಂಬಾಗಿಲು ಬಸ್ ನಿಲ್ದಾಣದ ಕುಡಿಯುವ ನೀರಿನ ಘಟಕ ಹಾಗೂ ಆಟೊ ನಿಲ್ದಾಣದ ಧ್ವಜಸ್ತಂಭದ ಉದ್ಘಾಟನಾ ಕಾರ್ಯಕ್ರಮ ಇಂದು ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉಡುಪಿ ಯಶೋದಾ ಆಟೊ ಯೂನಿಯನ್ ಅಧ್ಯಕ್ಷ, ಸಮಾಜ ಸೇವಕ ಕೃಷ್ಣಮೂರ್ತಿ ಆಚಾರ್ಯ, ಗಾಂಧೀಜಿಯ ಸ್ವಚ್ಛ ಭಾರತದ ಕನಸು ಈಡೇರಬೇಕಾದರೆ ಎಲ್ಲರ ಸಹಕಾರ ಅಗತ್ಯ. ಮನೆಯ ಪರಿಸರದ ಜತೆಗೆ ಮನುಷ್ಯನ ಗುಣ ಮತ್ತು ಬುದ್ಧಿಯ ಸ್ವಚ್ಛತೆ ಆಗಬೇಕಿದೆ. ಆಗ ಮಾತ್ರ ಗಾಂಧೀಜಿಯ ರಾಮರಾಜ್ಯದ ಕನಸು ಸಕಾರಗೊಳ್ಳಲಿದೆ ಎಂದರು.

ಪ್ರಯಾಣಿಕರ ತಂಗುದಾಣವನ್ನು ಉದ್ಯಮಿ ನಿಲೇಶ್ ಉದ್ಘಾಟಿಸಿದರು. ಅಂಬಾಗಿಲು ಆಟೊ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಗೋಪಾಲ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.

ನಗರಸಭೆ ಸದಸ್ಯ ಜಯಂತಿ ಕೆ. ಪೂಜಾರಿ, ನಗರಸಭೆಯ ಮಾಜಿ ಅಧ್ಯಕ್ಷ ಯುವರಾಜ್, ಮಾಜಿ ಸದಸ್ಯೆ ಶೋಭಾ ಸುರೇಶ್, ಸಂಘದ ಗೌರವಾಧ್ಯಕ್ಷ ಕೆ.ಪಿ. ಪೂಜಾರಿ ಉಪಸ್ಥಿತರಿದ್ದರು.