ಉಡುಪಿ: ಉಡುಪಿಯ ವಾಹನಗಳಿಗೆ ಮಲ್ಪೆ ಬೀಚ್ನಲ್ಲಿ ಪಾರ್ಕಿಂಗ್ ಫ್ರೀ ಮಾಡುವ ಕುರಿತು ಇಂದು ನಡೆದ ಉಡುಪಿ ನಗರಸಭೆಯ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಸದಸ್ಯ ಯೋಗೀಶ್ ಸಾಲ್ಯಾನ್ ವಿಷಯ ಪ್ರಸ್ತಾಪಿಸಿ, ಮಲ್ಪೆ ಬೀಚ್ನ ನಿರ್ವಹಣೆ ಪ್ರವಾಸೋದ್ಯಮ ಇಲಾಖೆಗೆ ವಹಿಸಿಕೊಟ್ಟ ಬಳಿಕ ಯಾವುದೇ ಅಭಿವೃದ್ಧಿ ಆಗುತ್ತಿಲ್ಲ. ಸ್ವಚ್ಛತೆ ಸರಿಯಾಗಿ ನಡೆಯುತ್ತಿಲ್ಲ. ಸ್ಥಳೀಯರು ನಗರಸಭೆಯನ್ನು ದೂರುತ್ತಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ರಮೇಶ್ ಕಾಂಚನ್ ಧ್ವನಿ ಗೂಡಿಸಿದರು.
ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ಇಲಾಖೆಯವರು ಪಾರ್ಕಿಂಗ್ಗೆ ಮಾತ್ರ ಆದ್ಯತೆ ನೀಡಿ, ಹಣವನ್ನು ವಸೂಲಿ ಮಾಡುತ್ತಿದ್ದಾರೆ. ದಾರಿದೀಪ, ಸ್ವಚ್ಛತೆಯ ನಿರ್ವಹಣೆ ಮಾಡುತ್ತಿಲ್ಲ. ಈ ಹಣವನ್ನು ನಮ್ಮ ಜಿಲ್ಲೆಯ ಅಭಿವೃದ್ಧಿಗೂ ಬಳಕೆ ಮಾಡುತ್ತಿಲ್ಲ. ಆದುದರಿಂದ ಉಡುಪಿಯ ವಾಹನಗಳಿಗೆ ಬೀಚ್ನಲ್ಲಿ ಪಾರ್ಕಿಂಗ್ ಫ್ರೀ ಮಾಡಬೇಕು. ಬೀಚ್ ಗೆ ಬೇಕಾದ ಎಲ್ಲ ರೀತಿಯ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ಈ ಬಗ್ಗೆ ನಿರ್ಣಯ ಮಾಡಿ ಜಿಲ್ಲಾಧಿಕಾರಿಗಳಿಗೆ ಕಳುಹಿಸಬೇಕು ಎಂದು ತಿಳಿಸಿದರು.
ರಮೇಶ್ ಸಾಂಚನ್ ಮಾತನಾಡಿ, ಪಾರ್ಕಿಂಗ್ ಮೂಲಕ ಹಗಲು ದರೋಡೆ ಮಾಡಲಾಗುತ್ತಿದೆ. ಸಮಿತಿಯ ಸದಸ್ಯರುಗಳಾದ ಶಾಸಕರು, ಪೌರಾಯುಕ್ತರು ಈ ಬಗ್ಗೆ ಸಮಿತಿ ಸಭೆಯಲ್ಲಿ ಮಂಡನೆ ಮಾಡಬೇಕು ಎಂದು ತಿಳಿಸಿದರು.
ನಾಮನಿರ್ದೇಶಿತ ಸದಸ್ಯ ಸುರೇಶ್ ಶೆಟ್ಟಿ ಬನ್ನಂಜೆ ಮಾತನಾಡಿ, ನಗರದ ಪಾರ್ಕಿಂಗ್ ಸಮಸ್ಯೆಗೆ ಸಂಬಂಧಿಸಿದಂತೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸದ 58 ಕಟ್ಟಡಗಳಿಗೆ ನೋಟೀಸ್ ಜಾರಿ ಮಾಡುವಂತೆ ಜಿಲ್ಲಾಧಿಕಾರಿಗಳು ಈ ಹಿಂದೆ ಆದೇಶ ಮಾಡಿದ್ದರು. ಈ ಬಗ್ಗೆ ಯಾವ ಕ್ರಮ ಜರಗಿಸಲಾಗಿದೆ ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಪೌರಾಯುಕ್ತರು, ಈ ಸಂಬಂಧ ಈಗಾಗಲೇ ಇಂಜಿನಿಯರ್ಗಳು ಸ್ಥಳ ಪರಿಶೀಲನೆ ಮಾಡಿ, 58 ಕಟ್ಟಡಗಳ ವಾಸ್ತಾವಂಶವನ್ನು ದಾಖಲಿಸಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದಾರೆ ಎಂದು ತಿಳಿಸಿದರು.
ನಗರಸಭೆಯ ವಾರ್ಡ್ಗಳಿಗೆ ನಗರಸಭೆ ನಿಧಿಯಿಂದ ಅನುದಾನ ಹಂಚಿಕೆ ಮಾಡಿರುವುದರಲ್ಲಿ ಮೂವರು ಕಾಂಗ್ರೆಸ್ ಸದಸ್ಯರ ವಾರ್ಡ್ ಗಳಿಗೆ ಯಾವುದೇ ಅನುದಾನ ನೀಡಿಲ್ಲ. ಇದು ಸರಿಯಲ್ಲ, ನಮ್ಮ ವಾರ್ಡ್ಗಳ ಜನರು ಕೂಡ ತೆರಿಗೆ ಪಾವತಿಸುತ್ತಾರೆ. ಆದುದರಿಂದ ಈ ಪಟ್ಟಿಗೆ ನಮ್ಮ ವಿರೋಧ ಇದೆ ಎಂದು ರಮೇಶ್ ಕಾಂಚನ್ ಆಕ್ಷೇಪ ವ್ಯಕ್ತಪಡಿಸಿದರು.

















