ಬನ್ನಾಡಿ ದಿ. ಪದ್ದು ಆಚಾರ್ ಸ್ಮರಣಾರ್ಥ ಉಚಿತ ನೋಟ್ಸ್ ಪುಸ್ತಕ, ಸಮವಸ್ತ್ರ ಹಾಗೂ ವಿಶೇಷ ಚೇತನರಿಗೆ ಸಹಾಯಧನ ವಿತರಣೆ

ಕುಂದಾಪುರ: ಬನ್ನಾಡಿ ದಿ.ಪದ್ದು ಆಚಾರ್ ಸ್ಮರಣಾರ್ಥ ಮಕ್ಕಳಾದ ಬಿ.ನಾರಾಯಣ ಆಚಾರ್(ಒ.ಎನ್.ಜಿ.ಸಿ ನಿವೃತ್ತ) ಮತ್ತು ಶ್ರೀದೇವಿ ಜ್ಯುವೆಲ್ಲರ್ಸ್ ಕೋಟ-ಸಾಲಿಗ್ರಾಮ ಮಾಲೀಕರಾದ ಸೀತಾರಾಮ ಆಚಾರ್ ಬನ್ನಾಡಿ ಇವರಿಂದ ಪರಮಹಂಸ ಖಾ.ಹಿ.ಪ್ರಾ ಶಾಲೆಯ ಎಲ್ಲ ಮಕ್ಕಳಿಗೆ ಉಚಿತ ನೋಟ್ಸ್ ಪುಸ್ತಕ, ಲೇಖನ ಸಾಮಗ್ರಿಗಳು ಹಾಗೂ ಸಮವಸ್ತ್ರಗಳನ್ನು ವಿತರಿಸಲಾಯಿತು. ಇದರೊಂದಿಗೆ ದಿ.ಪದ್ದು ಆಚಾರ್ ಸ್ಮರಣಾರ್ಥ ಆರೋಗ್ಯ ಉಪಕೇಂದ್ರ ವಡ್ಡರ್ಸೆ ಇವರಿಗೆ ಔಷಧಿ ಮತ್ತು ವಿಶೇಷ ಚೇತನರಿಗೆ ಧನಸಹಾಯ ವಿತರಣಾ ಕಾರ್ಯಕ್ರಮ ಶುಕ್ರವಾರ ಬೆಳಿಗ್ಗೆ ಬನ್ನಾಡಿಯಲ್ಲಿ ಜರುಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಲಯನ್ಸ್ ಕ್ಲಬ್ ಕೋಟ-ಬ್ರಹ್ಮಾವರ ಅಧ್ಯಕ್ಷ ಲಯನ್.ಕೆ.ಸುಧಾಕರ ಹೆಗ್ಡೆ, “ದಿ.ಪದ್ದು ಆಚಾರ್ ಸ್ಮರಣಾರ್ಥ ಅವರ ಮಕ್ಕಳು ಹಲವಾರು ವರ್ಷಗಳಿಂದ ಶಾಲಾ ಮಕ್ಕಳಿಗೆ, ಸಮಾಜದ ಬಡ ಅಶಕ್ತ ಕುಟುಂಬಗಳ ಪರವಾಗಿ ನಿಸ್ವಾರ್ಥ ಸೇವಾ ಮನೋಭಾವದಿಂದ ಶ್ರಮಿಸುತ್ತಿದ್ದು ಸಮಾಜಕ್ಕೆ ಮಾದರಿಯಾಗಿದ್ದಾರೆ”ಎಂದರು.

ಈ ಸಂದರ್ಭ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬನ್ನಾಡಿ ಪರಮಹಂಸ ಶಾಲೆಯ ಸಂಚಾಲಕರಾದ ಬಿ.ಅಜಿತ್ ಹೆಗ್ಡೆ,ಅಸಿಸ್ಟೆಂಟ್ ಗವರ್ನರ್ ವಲಯ-2 ರೊ. ಪಿ.ಎಚ್.ಎಫ್ ಪ್ರಭಾಕರ್ ಕುಂಭಾಶಿ, ಡಿಸ್ಟ್ರಿಕ್ಟ್ ಚೇರ್ಮನ್ ರೊ. ಪಿ.ಎಚ್.ಎಫ್ ಚಂದ್ರಶೇಖರ್ ಮೆಂಡನ್, ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಉಡುಪಿ ಜಿಲ್ಲಾ ಯುವ ಘಟಕಾಧ್ಯಕ್ಷ ಕೋಟ ರಾಮಕೃಷ್ಣ ಆಚಾರ್,ಲಯನ್ಸ್ ಕ್ಲಬ್ ಕೋಟ-ಬ್ರಹ್ಮಾವರ ಕಾರ್ಯದರ್ಶಿ ಲ.ವಿಜಯಕುಮಾರ್ ಶೆಟ್ಟಿ, ಬನ್ನಾಡಿ ಪರಮಹಂಸ ಶಾಲೆಯ ಮುಖ್ಯೋಪಾಧ್ಯಾಯರಾದ ಕೆ.ಶಶಿಧರ್ ಶೆಟ್ಟಿ ಉಪಸ್ಥಿತರಿದ್ದರು.