ಮೂಡ್ಲಕಟ್ಟೆ ಐ.ಎಂ.ಜೆ ಸಂಸ್ಥೆಯಲ್ಲಿ ಸಂಭ್ರಮದ ‘ಸಂಸ್ಥಾಪಕರ ದಿನಾಚರಣೆ’

ಕುಂದಾಪುರ: ಇಲ್ಲಿನ ಮೂಡ್ಲಕಟ್ಟೆಯ ಪ್ರತಿಷ್ಠಿತ ಐ.ಎಂ.ಜೆ (IMJ) ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಶುಕ್ರವಾರದಂದು ಸಂಸ್ಥೆಯ ಸಂಸ್ಥಾಪಕರ ದಿನಾಚರಣೆಯನ್ನು ಅತ್ಯಂತ ಸಡಗರದಿಂದ ಆಚರಿಸಲಾಯಿತು.

ಸಂಸ್ಥೆಯ ಸಂಸ್ಥಾಪಕರು ಹಾಗೂ ಮಾಜಿ ಸಂಸದರಾದ ದಿವಂಗತ ಐ.ಎಂ. ಜಯರಾಮ ಶೆಟ್ಟಿ ಅವರ ದೂರದೃಷ್ಟಿಯ ಫಲವಾಗಿ 2004ರಲ್ಲಿ ‘ಮೂಡ್ಲಕಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ’ (MITK) ಉದಯಿಸಿತು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ತಾಂತ್ರಿಕ ಶಿಕ್ಷಣ ಸಿಗಬೇಕೆಂಬ ಅವರ ಕನಸು ಇಂದು ಐ.ಎಂ.ಜೆ ಸಂಸ್ಥೆಯಾಗಿ ಹೆಮ್ಮರವಾಗಿ ಬೆಳೆದು, ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿದೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕರ್ನಾಟಕ ಸರ್ಕಾರದ ಮಾಜಿ ಸಚಿವರು ಹಾಗೂ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರಾದ ಕೆ. ಜಯಪ್ರಕಾಶ್ ಹೆಗ್ಡೆ ಅವರು ಮಾತನಾಡಿ, “ಒಂದು ಸಂಸ್ಥೆಯನ್ನು ಕಟ್ಟುವುದು ಸುಲಭದ ಮಾತಲ್ಲ. ಜಯರಾಮ ಶೆಟ್ಟಿಯವರು ಈ ಗ್ರಾಮೀಣ ಪ್ರದೇಶದಲ್ಲಿ ಇಂತಹ ಒಂದು ಅತ್ಯುನ್ನತ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಈ ಭಾಗದ ಶೈಕ್ಷಣಿಕ ಚಿತ್ರಣವನ್ನೇ ಬದಲಿಸಿದ್ದಾರೆ.

ಇಂದು ಇದು ಕೇವಲ ಇಂಜಿನಿಯರಿಂಗ್‌ಗೆ ಸೀಮಿತವಾಗದೆ, ವಿಜ್ಞಾನ, ವಾಣಿಜ್ಯ ಹಾಗೂ ನರ್ಸಿಂಗ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪಸರಿಸಿರುವುದು ಶ್ಲಾಘನೀಯ, ವಿದ್ಯಾರ್ಥಿಗಳು ಜಯರಾಮ ಶೆಟ್ಟಿ ಅವರ ಜೀವನವನ್ನು ಆದರ್ಶವಾಗಿರಿಸಿಕೊಡು ಯಶಸ್ಸಿನತ್ತ ಸದಾ ಪ್ರಯತ್ನಿಸಿ ಹಾಗೂ ಪರಿಸರ ಸಂರಕ್ಷಣೆಗೆ ಮೊದಲ ಆಧ್ಯತೆ ನೀಡಿ ಸಮಾಜಮುಖಿ ಕಾರ್ಯಗಳಿಗೆ ಹೆಚ್ಚು ಒತ್ತು ಕೊಡಿ” ಎಂದು ವಿದ್ಯಾರ್ಥಿಗಳನ್ನು ಹುರುದುಂಬಿಸಿದರು.

ಬೆಂಗಳೂರಿನ ಯುನಿವರ್ಸಲ್ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ಸ್‌ನ ಸಂಸ್ಥಾಪಕ ಅಧ್ಯಕ್ಷರಾದ ಆರ್. ಉಪೇಂದ್ರ ಶೆಟ್ಟಿ ಅವರು ಗೌರವ ಅತಿಥಿಗಳಾಗಿ ಆಗಮಿಸಿ, ಸಂಸ್ಥೆಯ ಬೆಳವಣಿಗೆಯನ್ನು ಪ್ರಶಂಸಿಸಿದರು. ಜಯರಾಮ ಶೆಟ್ಟಿಯವರು ನಡೆದು ಬಂದ ಹಾದಿಯನ್ನು ಮೆಲುಕು ಹಾಕುತ್ತ ಅವರು ಹೇಗ ಒಬ್ಬ ಮಹಾನ್ ನಾಯಕನಾಗಿ ಗುರುತಿಸಿಕೊಂಡರು ಎಂದು ವಿವರಿಸಿ, ವಿದ್ಯಾರ್ಥಿಗಳು ಈ ಸುಸಜ್ಜಿತ ಸಂಸ್ಥೆಯ ಪ್ರಯೋಜನವನ್ನು ಪಡೆದುಕೊಂಡು ಸಮಾಜದ ಆಸ್ತಿಯಾಗಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಐ.ಎಂ.ಜೆ ಸಂಸ್ಥೆಗಳ ಅಧ್ಯಕ್ಷರಾದ ಸಿದ್ದಾರ್ಥ ಜೆ. ಶೆಟ್ಟಿ ಅವರು ಈ ವಿದ್ಯಾಸಂಸ್ಥೆಯ ಬೆಳವಣಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ ತಂದೆಯ ಕನಸನ್ನು ಸಾಕಾರಗೊಳಿಸಲು ಮುಂದೆಯೂ ಕೈಜೋಡಿಸಬೇಕು ಎಂದು ಕೇಳಿಕೊಂಡರು.

ಈ ಸಂದರ್ಭದಲ್ಲಿ ಎಂ.ಎನ್.ಬಿ.ಎಸ್ ಟ್ರಸ್ಟಿ ರಾಮ್ ರಥನ್ ಜೆ. ಶೆಟ್ಟಿ, ಸುಧಾಕರ ಶೆಟ್ಟಿ ಅವರು ಉಪಸ್ಥಿತರಿದ್ದರು. ಸಂಸ್ಥೆಯ ಅಕಾಡೆಮಿಕ್ ನಿರ್ದೇಶಕರಾದ ಡಾ. ಎಸ್ ಎನ್ ಭಟ್, ಡೀನ್, ಪ್ರಾಂಶುಪಾಲರು, ಉಪ ಪ್ರಾಂಶುಪಾಲರು, ವಿಭಾಗ ಮುಖ್ಯಸ್ಥರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು. 2004ರ ಮೈಲಿಗಲ್ಲಿನಿಂದ ಇಂದಿನ ಐ.ಎಂ.ಜೆ ಸಂಸ್ಥೆಯವರೆಗಿನ ಬೆಳವಣಿಗೆಯ ಕಿರುಚಿತ್ರಣವನ್ನು ಇದೇ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು.

ಐ ಎಮ್ ಜೆ ಐ ಎಸ್ ಸಿ ಪ್ರಾಂಶುಪಾಲೆ ಡಾ. ಪ್ರತಿಭಾ ಪಟೇಲ್ ಸ್ವಾಗತಿಸಿ, ಐ ಎಸ್ ವಿಭಾಗದ ಮುಖ್ಯಸ್ಥರಾದ ಡಾ.ಜೆ ಪ್ರಕಾಶ ಹಾಗೂ ನರ್ಸಿಂಗ್ ಕಾಲೇಜಿನ ಉಪಪ್ರಾಂಶುಪಾಲೆ ಪ್ರೊ ರೂಪಶ್ರೀ ಅತಿಥಿ ಪರಿಚಯ ನೀಡಿ, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ್ರ್ ಪ್ರೊ ಜೆನಿಫ಼ರ್ ಮೆನೇಜಸ್ ವಂದಿಸಿದರು. ಪ್ರಾದ್ಯಾಪಕಿ ರಾಜೇಶ್ವರಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.