ಉಡುಪಿ: ಮುಖ್ಯಮಂತ್ರಿ ನೆರೆಪರಿಹಾರ ನಿಧಿಗೆ ದೇಣಿಗೆ ಹಸ್ತಾಂತರ

ಉಡುಪಿ: ರಾಜ್ಯಾದ್ಯಂತ ದೊಡ್ಡ ಸಂಕಷ್ಟ ತಂದೊಡ್ಡಿದ್ದ ಈ ವರ್ಷದ ಭಾರಿ ಮಳೆಯಿಂದ ಉಂಟಾದ ನೆರೆಯು ಹಲವಾರು ಕುಟುಂಬಗಳನ್ನು ಬೀದಿಗೆ ತಂದು ಲಕ್ಷಾಂತರ ಮಂದಿಯ ಬದುಕನ್ನೇ ಆಪೋಷನ ಮಾಡಿದ್ದು, ಈ ಸಂದರ್ಭದಲ್ಲಿ ತಮ್ಮಿಂದಾದ ಸಹಕಾರ ನೀಡುವ ಮನಸ್ಥಿತಿಯನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವ ಸಲುವಾಗಿ ಮತ್ತು ದುಃಖದಲ್ಲಿರುವವರ ಕಣ್ಣೀರೊರೆಸುವ ಕೆಲಸದಲ್ಲಿ ಅಳಿಲಸೇವೆ ಮಾಡುವುದಕ್ಕಾಗಿ ಉಡುಪಿ ಜಿಲ್ಲೆಯ ಪದವಿಪೂರ್ವ ಕಾಲೇಜುಗಳಲ್ಲಿನ ಎನ್.ಎಸ್.ಎಸ್ ಘಟಕಗಳು ಒಟ್ಟಾಗಿ ಕಾರ್ಯೋನ್ಮುಖರಾದರು.

ಸ್ವಯಂಸೇವಕರು ತಮ್ಮಿಂದಾದ ಸಹಾಯ ಮಾಡೋಣವೆಂದು ಪಣತೊಟ್ಟಿದ್ದರು. ಕೆಲವು ಕಾಲೇಜುಗಳ  ವಿದ್ಯಾರ್ಥಿಗಳು ಅಗತ್ಯ ವಸ್ತುಗಳನ್ನು ಪೂರೈಸಿದರೆ, ಇನ್ನು ಕೆಲವು ಕಾಲೇಜುಗಳ ವಿದ್ಯಾರ್ಥಿಗಳು  ಮುಖ್ಯಮಂತ್ರಿ ನೆರೆಪರಿಹಾರ ನಿಧಿಗೆ ದೇಣಿಗೆ ಸಂಗ್ರಹಿಸಿದರು. ಮಂಗಳವಾರ ಸಾಂಕೇತಿಕವಾಗಿ 2,08,743-00 ರೂ. ಮೌಲ್ಯದ ಡಿಮಾಂಡ್ ಡ್ರಾಫ್ಟ್‍ನ್ನು ಉಡುಪಿ ಜಿಲ್ಲೆಯ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಸುಬ್ರಮ್ಮಣ್ಯ ಜೋಶಿಯವರ ನೇತ್ರತ್ವದಲ್ಲಿ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಎಡಿಸಿಯವರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಪದವಿಪೂರ್ವ ಕಾಲೇಜುಗಳ ಉಡುಪಿ ಜಿಲ್ಲಾ ಎನ್.ಎಸ್.ಎಸ್ ಅಧಿಕಾರಿ ಸವಿತಾ ಎರ್ಮಾಳ್, ವಿವಿಧ ಕಾಲೇಜುಗಳ ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿಗಳು, ಪ್ರಾಂಶುಪಾಲರುಗಳು ಉಪಸ್ಥಿತರಿದ್ದರು.

ಉಡುಪಿ ಜಿಲ್ಲೆಯ ಪದವಿಪೂರ್ವ ಕಾಲೇಜುಗಳ ಎನ್.ಎಸ್.ಎಸ್ ಘಟಕಗಳ ವತಿಯಿಂದ ಎರಡು ಲಾರಿಗಳಲ್ಲಿ ಅಗತ್ಯ ವಸ್ತುಗಳಲ್ಲದೆ ಈವರೆಗೆ ಸುಮಾರು ನಾಲ್ಕುವರೆ ಲಕ್ಷ ರೂಪಾಯಿ ದೇಣಿಗೆಯನ್ನು ಮುಖ್ಯಮಂತ್ರಿ ನೆರೆ ಪರಿಹಾರ ನಿಧಿಗೆ ಜಮೆ ಮಾಡಲಾಗಿದೆ.