ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ ಫಿಟ್ ಇಂಡಿಯಾ ಫ್ರೀಡಂ ಓಟ- ಅಭಿಯಾನ

ಶಿರ್ವ: ಆಜಾದಿ ಕಾ ಅಮೃತ್ ಮಹೋತ್ಸವವನ್ನು ಆಚರಿಸಲು, ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ವತಿಯಿಂದ ಫಿಟ್ ಇಂಡಿಯಾ ಫ್ರೀಡಮ್ ರನ್ 2.0 ರ ಅಭಿಯಾನಕ್ಕೆ ರಾಷ್ಟ್ರವ್ಯಾಪಿ ಚಾಲನೆ ನೀಡಿದ್ದಾರೆ.

ಮುಂದಿನ ದಿನಗಳಲ್ಲಿ ಅಕ್ಟೋಬರ್ 2 ರವರೆಗೆ, ಪ್ರತಿ ಜಿಲ್ಲೆ ಮತ್ತು ಪ್ರತಿ ಹಳ್ಳಿಯ ಜನರು ಈ ಚಳವಳಿಯಲ್ಲಿ ಭಾಗವಹಿಸುತ್ತಾರೆ. ಪ್ರತಿಮನೆಯ ನಾಗರಿಕರನ್ನು ಸದೃಢವಾಗಿಡಲು ‘ಆರೋಗ್ಯವೇ ಭಾಗ್ಯ’ ಮಂತ್ರವನ್ನು ಸದಸ್ಯರು ತಪ್ಪದೇ ಪಾಲಿಸಿ, ದೈಹಿಕ ಚಟುವಟಿಕೆಯ ಮೂಲಕ ಯುವಕರು ಜನಾಂದೋಲನ ಮಾಡಬೇಕೆಂದು ಪ್ರಾಂಶುಪಾಲ ಡಾ. ಹೆರಾಲ್ಡ್ ಐವನ್ ಮೋನಿಸ್ ರವರು ಹೇಳಿದರು.

ಶಿರ್ವ ಸಂತ ಮೇರಿ ಮಹಾವಿದ್ಯಾಲಯ ಎನ್.ಸಿ.ಸಿ ಘಟಕ ಮತ್ತು 21 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ ಉಡುಪಿ ಜಂಟಿಯಾಗಿ ಶನಿವಾರ ಏರ್ಪಡಿಸಿದ್ದ ಫಿಟ್ ಇಂಡಿಯ ಫ್ರೀಡಂ ಓಟ ಅಭಿಯಾನದಲ್ಲಿ ಭಾಗವಹಿಸಿ, ಪ್ರತಿಜ್ಞಾವಿಧಾನವನ್ನು ಭೋಧಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಫಿಟ್ ಇಂಡಿಯಾ ಫ್ರೀಡಂ ರನ್ 2.0 ನ ಪ್ರಮುಖ ಚಟುವಟಿಕೆಗಳಲ್ಲಿ ಪ್ರತಿಜ್ಞೆ, ರಾಷ್ಟ್ರಗೀತೆ, ಸ್ವಾತಂತ್ರ್ಯದ ಓಟ, ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಯುವ ಸ್ವಯಂಸೇವಕರಲ್ಲಿ ಜಾಗೃತಿ ಮತ್ತು ಅವರ ಗ್ರಾಮಗಳಲ್ಲಿ ಇದೇ ರೀತಿಯ ಸ್ವಾತಂತ್ರ್ಯದ ಓಟಗಳನ್ನು ಆಯೋಜಿಸುವುದು. ಭಾರತ ಸೇನೆಯ ಶೌರ್ಯ ಪರಾಕ್ರಮರಾದ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿ ವೀರ ಮರಣ ಹೊಂದಿರುವ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಪರಮವೀರಚಕ್ರ ಅವರ ಸ್ಮರಣಾರ್ಥ ಈ ಓಟದ ಅಭಿಯಾನವನ್ನು ಆಯೋಜಿಸಲಾಯಿತು ಎಂದು ಕಂಪನಿ ಕ್ವಾರ್ಟರ್ ಮಾಸ್ಟರ್ ರೈನ್ ಅಂದ್ರಾದೆ, ಕಾರ್ಯಕ್ರಮದ ಮುಖ್ಯ ಉದ್ದೇಶ ಮತ್ತು ಮಹತ್ವವನ್ನು ತಿಳಿಸಿದರು.

ಬಳಿಕ ಕಾಲೇಜಿನಿಂದ ಹೊರಟ ಈ ಓಟ ಶಿರ್ವ ಕಾಪು ರಸ್ತೆಯ ಸುಮಾರು ಎರಡು ಕಿಲೋಮೀಟರ್ ಸಾಗಿದೆ ಹಾಗೂ 28 ಕ್ಯಾಡೆಟ್ ಗಳು ಭಾಗವಹಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಶ್ರೀ ಕೆ.ಪ್ರವೀಣ್‌ಕುಮಾರ್‌ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ಸಂಯೋಜಿಸಿದರು. ಕಂಪನಿ ಸಾರ್ಜೆಂಟ್ ಚನ್ನಬಸವಯ್ಯ,ಎಲ್ಲಾ ಕೆಡೆಟ್ ಗಳು,ಕಾಲೇಜಿನ ವಿದ್ಯಾರ್ಥಿಗಳು,ಎಲ್ಲಾ ಭೋಧಕ ಹಾಗು ಭೋಧಕೇತರ ವೃಂದದವರು ಉಪಸ್ಥಿತರಿದ್ದರು.ಎನ್.ಸಿ.ಸಿ ಕ್ಯಾಡೆಟ್ ಸೀನಿಯರ್ ಅಂಡರ್ ಆಫೀಸರ್ ಭಟ್ ರಾಮದಾಸ್ ಸತೀಶ್ ಸ್ವಾಗತಿಸಿ ಕ್ಯಾಡೆಟ್ ಜೂನಿಯರ್ ಅಂಡರ್ ಆಫೀಸರ್ ರಿಯಾನ್ ರಿಷಿ ಆಲ್ಫೋನ್ಸೋ ವಂದಿಸಿದರು.