ಮೊದಲ ದಿನದ ಕಲೆಕ್ಷನ್​ : ಬಾಲಯ್ಯ ನಟನೆಯ ‘ಭಗವಂತ ಕೇಸರಿ’ಗೆ ಭರ್ಜರಿ ಗೆಲುವು

ತೆಲುಗು ಚಿತ್ರರಂಗದ ಖ್ಯಾತ ನಟ ನಂದಮೂರಿ ಬಾಲಕೃಷ್ಣ ಮುಖ್ಯಭೂಮಿಕೆಯ ‘ಭಗವಂತ ಕೇಸರಿ’ ಸಿನಿಮಾ ಗುರುವಾರ (ಅ.19) ತೆರೆ ಕಂಡಿದೆ. ಅನಿಲ್ ರವಿಪುಡಿ ಆಯಕ್ಷನ್​ ಕಟ್ ಹೇಳಿರುವ ಈ ಚಿತ್ರದಲ್ಲಿ ಬ್ಯೂಟಿ ಕಾಜಲ್ ಅಗರ್ವಾಲ್, ಗ್ಲ್ಯಾಮರ್ ಕ್ವೀನ್ ಶ್ರೀಲೀಲಾ ಜತೆಗೆ ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಪ್ರಮುಖ ಪಾತ್ರದಲ್ಲಿದ್ದಾರೆ.

ಸಿನಿಮಾ ಬಿಡುಗಡೆಗೂ ಮುನ್ನವೇ ಕಾಸ್ಟ್, ಟೈಟಲ್​, ಟೀಸರ್, ಟ್ರೇಲರ್, ಪೋಸ್ಟರ್ ಸಲುವಾಗಿ ಸದ್ದು ಮಾಡಿತ್ತು. ಇದೀಗ ರಿಲೀಸ್​ ಆದ ಮೊದಲ ದಿನವೇ ಭರ್ಜರಿ ಓಪನಿಂಗ್​ ಪಡೆದುಕೊಂಡಿದೆ. ಚಿತ್ರವು ವಿಶ್ವದಾದ್ಯಂತ 32.33 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ ಎಂದು ಚಿತ್ರ ನಿರ್ಮಾಪಕರು ತಿಳಿಸಿದ್ದಾರೆ. ಈ ಸಿನಿಮಾದ ಪ್ರಿ ರಿಲೀಸ್​ ಬ್ಯುಸಿನೆಸ್​ ಸುಮಾರು 65 ಕೋಟಿ ರೂಪಾಯಿ ಎಂದು ವರದಿಯಾಗಿದೆ. ಈ ಎಲ್ಲಾ ಲೆಕ್ಕಾಚಾರದ ಪ್ರಕಾರ ‘ಭಗವಂತ ಕೇಸರಿ’ ಸಿನಿಮಾ ಬಾಕ್ಸ್​ ಆಫೀಸ್‌ನಲ್ಲಿ 130 ಕೋಟಿ ರೂಪಾಯಿಗೂ ಹೆಚ್ಚು ಗಳಿಸಿದೆ.

ಬಾಕ್ಸ್​ ಆಫೀಸ್​ನಲ್ಲಿ ಪೈಪೋಟಿ: ನಿನ್ನೆ (ಅ.19) ಒಟ್ಟು ಮೂರು ಸಿನಿಮಾಗಳು ತೆರೆ ಕಂಡಿವೆ. ನಟ ಶಿವರಾಜ್​ಕುಮಾರ್​​ ಅಭಿನಯದ ‘ಘೋಸ್ಟ್’, ದಳಪತಿ ವಿಜಯ್​ ಮುಖ್ಯಭೂಮಿಕೆಯ ‘ಲಿಯೋ’ ಹಾಗೂ ಬಾಲಯ್ಯ ಅವರ ‘ಭಗವಂತ ಕೇಸರಿ’ ಚಿತ್ರಗಳು ಬಿಡುಗಡೆಯಾಗಿವೆ. ಇಂದು ಟಾಲಿವುಡ್​ ನಟ ರವಿತೇಜ ಅಭಿನಯದ ‘ಟೈಗರ್ ನಾಗೇಶ್ವರ ರಾವ್’ ಮತ್ತು ಬಾಲಿವುಡ್ ನಟ ಟೈಗರ್​ ಶ್ರಾಫ್​ ಮುಖ್ಯಭೂಮಿಕೆಯ ‘ಗಣಪತ್​’ ಕೂಡ ತೆರೆ ಕಂಡಿವೆ. ಈ ಎಲ್ಲಾ ಸಿನಿಮಾಗಳು ಬಾಕ್ಸ್​ ಆಫೀಸ್​ನಲ್ಲಿ ಭಾರಿ ಪೈಪೋಟಿ ನಡೆಸುತ್ತಿವೆ. ಎಲ್ಲಾ ಚಿತ್ರಗಳನ್ನು ಪ್ರೇಕ್ಷಕರು ಸಕಾರಾತ್ಮಕವಾಗಿಯೇ ಸ್ವೀಕರಿಸಿದ್ದಾರೆ.

ಚಿತ್ರದಲ್ಲಿ ಬಾಲಯ್ಯ ಅವರ ಡೈಲಾಗ್ಸ್, ಆಯಕ್ಷನ್ ಸೀನ್ಸ್, ಎಮೋಷನಲ್ ದೃಶ್ಯಗಳು ಸಿನಿಪ್ರಿಯರ ಮನ ಗೆದ್ದಿವೆ. ಈ ಸಿನಿಮಾ ಗೆಲ್ಲೋದು ಪಕ್ಕಾ ಅಂತಿದ್ದಾರೆ ಅಭಿಮಾನಿಗಳು. ಚಿಕ್ಕವಯಸ್ಸಿನಲ್ಲೇ ಗುಡ್ ಟಚ್ ಮತ್ತು ಬ್ಯಾಡ್ ಟಚ್ ಕಲಿಸಿಕೊಡುವ ಸಂದೇಶವನ್ನು ಈ ಸಿನಿಮಾ ಹೊಂದಿದ್ದು, ಫ್ಯಾಮಿಲಿ ಆಡಿಯನ್ಸ್ ಸಿನಿಮಾಗೆ ಕನೆಕ್ಟ್ ಆಗಲಿದ್ದಾರೆ ಎಂಬುದು ಚಿತ್ರತಂಡದ ವಿಶ್ವಾಸ. ಸಿನಿಮಾವನ್ನು ಶೈನ್ ಸ್ಕ್ರೀನ್ಸ್ ಬ್ಯಾನರ್ ಅಡಿಯಲ್ಲಿ ಸಾಹು ಗರಪಾಟಿ ಮತ್ತು ಹರೀಶ್ ಪೆದ್ದಿ ನಿರ್ಮಾಣ ಮಾಡಿದ್ದಾರೆ.

ಮುಖ್ಯವಾಗಿ ಬಾಲಯ್ಯ ಮತ್ತು ಶ್ರೀಲೀಲಾ ನಟನೆಗೆ ಫ್ಯಾನ್ಸ್ ಮೆಚ್ಚುಗೆ ಸೂಚಿಸುತ್ತಿದ್ದಾರೆ. ತೆರೆ ಮೇಲೆ ಅಪ್ಪ-ಮಗಳ ಪಾತ್ರಕ್ಕೆ ಜೀವ ತುಂಬಿದ್ದಾರೆ. ಆಫ್ ಸ್ಕ್ರೀನ್​ನಲ್ಲಿಯೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಚಿತ್ರದಲ್ಲಿ ಸಾಕಷ್ಟು ಭಾವನಾತ್ಮಕ ಅಂಶಗಳಿವೆ. ಇದೊಂದು ಹೃದಯಸ್ಪರ್ಶಿ ಚಿತ್ರ ಎಂದು ಸಿನಿಮಾ ವೀಕ್ಷಿಸಿದವರು ಎಕ್ಸ್​ನಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.ಸಿನಿಮಾವು ಮೊದಲ ಪ್ರದರ್ಶನದಿಂದಲೇ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಉತ್ತಮ ಕಲೆಕ್ಷನ್​ ಕೂಡ ಮಾಡಿದೆ.