ಬೆಂಗಳೂರು: ತೊಂದರೆಗೆ ಸಿಲುಕಿರುವ ನಾಗರಿಕರು ಪೊಲೀಸ್ ಠಾಣೆಗೆ ತೆರಳುವ ಅಗತ್ಯವಿಲ್ಲದೆ ತ್ವರಿತವಾಗಿ ಮೊದಲ ಮಾಹಿತಿ ವರದಿ (ಎಫ್ಐಆರ್) ದಾಖಲಿಸಲು ನೆರವಾಗುವ ಏಜೆಂಟಿಕ್ ಕೃತಕ ಬುದ್ಧಿಮತ್ತೆ (AI) ವ್ಯವಸ್ಥೆಯನ್ನು ಅಳವಡಿಸುವ ಕುರಿತು ಕರ್ನಾಟಕ ಸರ್ಕಾರ ಪರಿಶೀಲನೆ ನಡೆಸುತ್ತಿದೆ.
ಪೊಲೀಸಿಂಗ್ನಲ್ಲಿ ಎಐ ಬಳಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಹಲವು ಕ್ರಮಗಳನ್ನು ಪರಿಗಣಿಸುತ್ತಿದ್ದು, ಗೃಹ, ಐಟಿ ಮತ್ತು ಇ-ಆಡಳಿತ ಇಲಾಖೆ ಈಗಾಗಲೇ ಆಂಥ್ರೋಪಿಕ್ ಹಾಗೂ ಸರ್ವಂ ಸೇರಿದಂತೆ ತಂತ್ರಜ್ಞಾನ ಕಂಪನಿಗಳೊಂದಿಗೆ ಈ ಕುರಿತು ಮಾತುಕತೆ ನಡೆಸುತ್ತಿದೆ.
ನಾಗರಿಕರಿಗೆ ತುರ್ತು ಸಂದರ್ಭದಲ್ಲಿ ತಕ್ಷಣ ಏನು ಮಾಡಬೇಕು ಎಂಬುದು ತಿಳಿಯದಿದ್ದಾಗ ನೆರವಾಗುವಂತಹ ಏಜೆಂಟಿಕ್ ಎಐ ವ್ಯವಸ್ಥೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಹಿಟ್ ಆ್ಯಂಡ್ ರನ್ ಪ್ರಕರಣ, ಕಳ್ಳತನ ಸೇರಿದಂತೆ ಘಟನೆಗಳು ನಡೆದಾಗ ನಾಗರಿಕರು ಏಜೆಂಟಿಕ್ ಎಐ ನೆರವಿನಿಂದ ಜೀರೋ ಎಫ್ಐಆರ್ ಅಥವಾ ಇ-ಎಫ್ಐಆರ್ ದಾಖಲಿಸಬಹುದಾಗಿದೆ. ಬಳಿಕ ಹೆಚ್ಚಿನ ಪ್ರಕ್ರಿಯೆಗಾಗಿ 24ರಿಂದ 48 ಗಂಟೆಗಳ ಒಳಗೆ ಪೊಲೀಸ್ ಠಾಣೆಗೆ ಭೇಟಿ ನೀಡುವ ಅವಕಾಶ ಕಲ್ಪಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಅವರು ಹೇಳಿದ್ದಾರೆ.
ಪ್ರಸ್ತಾವಿತ ವ್ಯವಸ್ಥೆಯನ್ನು ಬಳಸಲು ನಾಗರಿಕರಿಗೆ ಯಾವ ರೀತಿಯ ತಂತ್ರಜ್ಞಾನ ಒದಗಿಸಬೇಕು ಎಂಬುದನ್ನು ಸರ್ಕಾರ ಇನ್ನೂ ಅಂತಿಮಗೊಳಿಸಿಲ್ಲ. ಇದೇ ವೇಳೆ ಸುಳ್ಳು ದೂರುಗಳು ದಾಖಲಾಗುವ ಸಾಧ್ಯತೆಯನ್ನೂ ಸರ್ಕಾರ ಪರಿಗಣಿಸುತ್ತಿದೆ. ಯೋಜನೆ ಇನ್ನೂ ಚರ್ಚೆಯ ಹಂತದಲ್ಲಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಈ ಸುಧಾರಣೆಯನ್ನು ಅಂತಿಮಗೊಳಿಸಿದ ಬಳಿಕ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸರ್ಕಾರದ ನಾಗರಿಕರ ಅಹವಾಲು ನಿರ್ವಹಣಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಿಸುವ ಹಾಗೂ ಸರ್ಕಾರಿ ಪ್ರಕ್ರಿಯೆಗಳನ್ನು ಮರು ವಿನ್ಯಾಸಗೊಳಿಸುವ ಉದ್ದೇಶದಿಂದ ರಚಿಸಿರುವ ಹೊಸ ‘ಪ್ರಜಾಸೇವಾ’ ಇಲಾಖೆಯ ವ್ಯಾಪ್ತಿಗೆ ಈ ವ್ಯವಸ್ಥೆ ಬರುವ ಸಾಧ್ಯತೆಯಿದೆ.
ಪೊಲೀಸ್ ಠಾಣೆಗೆ ತೆರಳದೇ ಎಫ್ಐಆರ್: ಎರಡನೇ ಪ್ರಯತ್ನ
ಪೊಲೀಸ್ ಠಾಣೆಗೆ ಭೇಟಿ ನೀಡದೆ ನಾಗರಿಕರಿಗೆ ಎಫ್ಐಆರ್ ದಾಖಲಿಸುವ ಅವಕಾಶ ಕಲ್ಪಿಸುವ ಸರ್ಕಾರದ ಇದು ಎರಡನೇ ಪ್ರಯತ್ನವಾಗಿದೆ.
2014ರಲ್ಲಿ ಬೆಂಗಳೂರಿನ ಮಲ್ಲೇಶ್ವರಂನ ಮಂತ್ರಿ ಮಾಲ್ನಲ್ಲಿ ಪೊಲೀಸರು ಭಾರತದ ಮೊದಲ ರಿಮೋಟ್ ಎಫ್ಐಆರ್ ಕೇಂದ್ರ ಎಂದು ಹೇಳಲಾಗಿದ್ದ ವ್ಯವಸ್ಥೆಯನ್ನು ಆರಂಭಿಸಿದ್ದರು. ಈ ಯೋಜನೆಗೆ Cisco ತಂತ್ರಜ್ಞಾನ ಸಹಾಯ ಒದಗಿಸಿತ್ತು.
ಎಟಿಎಂ ಮಾದರಿಯ ಕಿಯೋಸ್ಕ್ಗೆ ನಾಗರಿಕರು ತೆರಳಿ, ವಿಡಿಯೋ ಮೂಲಕ ಟ್ರಾಫಿಕ್ ಮ್ಯಾನೇಜ್ಮೆಂಟ್ ಸೆಂಟರ್ನಲ್ಲಿದ್ದ ಪೊಲೀಸ್ ಅಧಿಕಾರಿಯೊಂದಿಗೆ ಮಾತನಾಡಿ ದೂರು ನೀಡಬಹುದಾಗಿತ್ತು. ಬಳಿಕ ಡಿಜಿಟಲ್ ಸಹಿ ಹೊಂದಿದ ಎಫ್ಐಆರ್ ಪಡೆಯುವ ವ್ಯವಸ್ಥೆಯೂ ಇತ್ತು.
ಆದರೆ 2016ರ ಜನವರಿಯ ವೇಳೆಗೆ ಆಡಳಿತಾತ್ಮಕ ಸಮಸ್ಯೆಗಳ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ಸ್ಥಗಿತಗೊಳಿಸಲಾಯಿತು.
ಪೊಲೀಸ್ ಸುಧಾರಣೆಗೆ ಮೂರು ಸಮಿತಿಗಳ ರಚನೆ
ಪೊಲೀಸ್ ಸುಧಾರಣೆ, ಆಧುನೀಕರಣದ ಪರಿಶೀಲನೆ ಹಾಗೂ ಕ್ಯಾಡರ್ ಮತ್ತು ನೇಮಕಾತಿ ನಿಯಮಗಳ ಮರುಪರಿಶೀಲನೆಗಾಗಿ ಮೂರು ಸಮಿತಿಗಳನ್ನು ರಚಿಸಲಾಗುವುದು ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ನಿವೃತ್ತ ಐಪಿಎಸ್ ಅಧಿಕಾರಿಯೊಬ್ಬರು ಈ ಸಮಿತಿಗಳ ನೇತೃತ್ವ ವಹಿಸಲಿದ್ದಾರೆ. ಸೈಬರ್ ಅಪರಾಧಗಳ ಹೆಚ್ಚಳ ಹಾಗೂ ಫೋರೆನ್ಸಿಕ್ ಕ್ಷೇತ್ರದಲ್ಲಿನ ತಾಂತ್ರಿಕ ಪ್ರಗತಿಯಿಂದ ಪೊಲೀಸರ ಕೆಲಸದ ಸ್ವರೂಪದಲ್ಲಿ ಬದಲಾವಣೆಯಾಗಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಗೆ ಹೊಸ ಕ್ಯಾಡರ್ ಮತ್ತು ನೇಮಕಾತಿ ನಿಯಮಗಳ ಅಗತ್ಯವಿದೆ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ.
ಇದರ ಜೊತೆಗೆ ಪೊಲೀಸ್ ಇಲಾಖೆಯ ನೇಮಕಾತಿ ವೇಳಾಪಟ್ಟಿಯನ್ನು ಸಿದ್ಧಪಡಿಸುವ ಯೋಜನೆಯನ್ನೂ ರೂಪಿಸಲಾಗುತ್ತಿದೆ.















